ಫೆಬ್ರವರಿ 4ರಂದು ಕನ್ನಡ ಚಿತ್ರರಂಗಕ್ಕೆ ಬಿಡುವು
ಬೆಂಗಳೂರಿನಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕನ್ನಡ ಚಿತ್ರರಂಗಕ್ಕೆ ಫೆಬ್ರವರಿ 4ರಂದು ಒಂದು ದಿನದ ರಜೆ ಘೋಷಿಸಲಾಗಿದೆ. ಚಿತ್ರ ಪ್ರದರ್ಶನ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಫೆ.4ರಂದು ಸ್ತಬ್ಧವಾಗಲಿವೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಮಂಗಳವಾರ(ಫೆ.1) ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಸಾಹಿತ್ಯ ಮತ್ತು ಸಿನಿಮಾ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮ್ಮೇಳನದ ಆರಂಭ ದಿನದಂದು (ಫೆ.4) ಕನ್ನಡ ಚಿತ್ರರಂಗಕ್ಕೆ ರಜೆ ಘೋಷಿಸಲಾಗಿದೆ ಎಂದರು.
ಚಲನಚಿತ್ರ ಕಾರ್ಮಿಕರು, ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಿತ್ರೋದ್ಯಮದ ಎಲ್ಲರೂ ಅಂದು ಸ್ವಾತಂತ್ರ್ಯ ಉದ್ಯಾನದ ಬಳಿ ಸೇರಿ, ಅಲ್ಲಿಂದ ಬಸವನಗುಡಿ ನ್ಯಾಷನಲ್ ಮೈದಾನದವರೆಗೆ ಸಾಗುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚಿತ್ರರಂಗದ ಪರವಾಗಿ ಪಿ ಎಚ್ ವಿಶ್ವನಾಥ್ ಹಾಗೂ ಜೋಗಿ ಭಾಗವಹಿಸಲಿದ್ದಾರೆ ಎಂದು ಬಸಂತ್ ತಿಳಿಸಿದ್ದಾರೆ.
ಎಂದಿನಂತೆ ಚಿತ್ರ ಪ್ರದರ್ಶನ: ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಜೆ ಘೋಷಿಸಿದ್ದರೂ ಫೆ.4ರಂದು ಚಿತ್ರ ಪ್ರದರ್ಶನ ಎಂದಿನಂತೆ ನಡೆಯಲಿದೆ. ಚಿತ್ರರಂಗದ ಪ್ರತಿಯೊಬ್ಬರು ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ರಜೆ ಘೋಷಿಸಲಾಗಿದೆ. ಚಿತ್ರ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ ಎಂದು ಬಸಂತ್ ಸ್ಪಷ್ಟಪಡಿಸಿದ್ದಾರೆ. ಅಂದು ಬೆಂಗಳೂರಿನಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.


Click it and Unblock the Notifications











