ಕಂಠೀರವಗೆ ಮಟ್ಟಣ್ಣನವರ್ ಹೊಸ ವ್ಯವಸ್ಥೆ
ಇನ್ನು ಮುಂದೆ ಸರಕಾರಿ ಸ್ವಾಮ್ಯದ ಕಂಠೀರವ ಸ್ಟುಡಿಯೋದಲ್ಲಿ ಕಲಾವಿದರು ಬೆವರು ಸುರಿಸುವ ಅಗತ್ಯವಿಲ್ಲ! ಬದಲಾವಣೆಯ ತಂಗಾಳಿ ಕಂಠೀರವ ಸ್ಟುಡಿಯೋದಲ್ಲಿ ಬೀಸಲಿದೆ. ಶೀಘ್ರದಲ್ಲೇ ಹವಾನಿಯಂತ್ರಣ ವ್ಯವಸ್ಥೆಯನ್ನು ಸ್ಟುಡಿಯೋಗೆ ಕಲ್ಪಿಸಲಾಗುತ್ತಿದೆ. ಚಿತ್ರೀಕರಣಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವ ದಿಸೆಯಲ್ಲಿ ಕಂಠೀರವ ಸ್ಟುಡಿಯೋ ಮೊದಲ ಹೆಜ್ಜೆ ಇಟ್ಟಿದೆ.
ಮಾಜಿ ಎಸ್ ಐ ಗಿರೀಶ್ ಮಟ್ಟಣ್ಣನವರ್ ಕೈಗೆ ಸ್ಟುಡಿಯೋ ಅಧ್ಯಕ್ಷ ಸ್ಥಾನ ಹಸ್ತಾಂತರವಾಗಿ ಒಂದು ತಿಂಗಳು ಕಳೆದಿದೆ. ಸ್ಟುಡಿಯೋಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಮಟ್ಟಣ್ಣನವರ್ ಕಾರ್ಯಪ್ರವೃತ್ತರಾಗಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧಕ್ಷ ರಾಜೇಂದ್ರ ಸಿಂಗ್ ಬಾಬು ಮತ್ತ್ತು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಗಳೊಂದಿಗೆ ಮಟ್ಟಣ್ಣನವರ್ ಮುಂಬೈ ಸ್ಟುಡಿಯೋಗಳನ್ನು ಸಂದರ್ಶಿಸಲು ಮುಂದಿನ ವಾರ ಹೊರಡುತ್ತಿದ್ದಾರೆ.
ಯಶ್ ಚೋಪ್ರಾ ಅವರು ಅತ್ಯಾಧುನಿಕ ಸೌಲಭ್ಯಗಳುಳ್ಳ ಸ್ಟುಡಿಯೋ ನಿರ್ಮಿಸಿದ್ದಾರೆ. ಹೊಸ ತಂತ್ರಜ್ಞಾನ ಮತ್ತು ಹವಾನಿಯಂತ್ರಣ ವ್ಯವಸ್ಥೆಯನ್ನು ಒಳಗೊಂಡಿದೆ. ಮುಂದಿನ ವಾರ ನಾವು ಆ ಸ್ಟುಡಿಯೋಗೆ ಭೇಟಿ ನೀಡಲಿದ್ದೇವೆ. ಕಂಠೀರವ ಸ್ಟುಡಿಯೋದಲ್ಲಿ ಅವನ್ನು ಕಾರ್ಯಗತಗೊಳಿಸುವುದಾಗಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.
ಸರಕಾರಿ ಸ್ವಾಮ್ಯದ ಸ್ಟುಡಿಯೋ ಆದಕಾರಣ ಸರಕಾರಿ ಎಂಜಿನಿಯರ್ ಗಳನ್ನೇ ಕರೆದೊಯ್ಯುತ್ತಿದ್ದೇವೆ. ಸರ್ಕಾರಿ ಸಂಸ್ಥೆಗೆ ಈ ರೀತಿಯ ಸೌಲಭ್ಯ ಕಲ್ಪಿಸುತ್ತಿರುವುದು ನಮಗೂ ಮತ್ತುಎಂಜಿನಿಯರ್ ಗಳಿಗೆ ಹೊಸದು. ಹಾಗಾಗಿ ಅವರನ್ನು ನಮ್ಮೊಂದಿಗೆ ಕರೆದೊಯ್ಯ್ಯುತ್ತಿದ್ದೇವೆ ಎಂದು ಮಟ್ಟಣ್ಣನವರ್ ವಿವರ ನೀಡಿದರು.
ಸ್ಟುಡಿಯೋ ಫ್ಲೋರ್ ಗಳಲ್ಲಿ ಶಿಫ್ಟ್ ಒಂದರ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಸರಾಸರಿ ರು.10,000 ದಿಂದ ರು.12,000 ವೆಚ್ಚ್ಚವಾಗುತ್ತದೆ. ಈಗ ಹವಾನಿಯಂತ್ರಣ ವ್ಯವಸ್ಥೆ ಕಲ್ಪಿಸುತ್ತಿರುವ ಕಾರಣ ಶೇ.20 ರಿಂದ 25ರಷ್ಟು ವೆಚ್ಚ ಹೆಚ್ಚಗಬಹುದು. ಈ ಅಧಿಕ ವೆಚ್ಚವೇನು ದೊಡ್ಡ ಸಮಸ್ಯೆಯಾಗದು. ಚಿತ್ರೀಕರಣದ ಮನೆಗೆ ದಿನವೊಂದಕ್ಕೆ ರು.30,000 ರಿಂದ ರು.40,000 ಬಾಡಿಗೆ ನೀಡಬೇಕು. ಇದಕ್ಕೆ ಹೋಲಿಸಿದರೆ ಹವಾನಿಯಂತ್ರಣ ಸ್ಟುಡಿಯೋ ಅಗ್ಗ ಎಂದು ಮಟ್ಟಣ್ಣನವರ್ ತಿಳಿಸಿದರು.
ಇಡೀ ಕರ್ನಾಟಕದಲ್ಲಿ ಹವಾನಿಯಂತ್ರಣ ಸ್ಟುಡಿಯೋ ಸೌಲಭ್ಯವಿಲ್ಲ. ದಕ್ಷಿಣ ಭಾರತದಲ್ಲಿ ಹೈದರಾಬಾದ್ ನಲ್ಲಿ ಒಂದು ಸ್ಟುಡಿಯೋ ಹೊರತುಪಡಿಸಿದರೆ ಮತ್ತೆಲ್ಲೂ ಇಲ್ಲ. ಬೆಂಗಳೂರು ಹವಾನಿಯಂತ್ರಣ ನಗರ ಎಂಬ ಚಾರ್ಮನ್ನು ಎಂದೋ ಕಳೆದುಕೊಂಡಿದೆ. ಹವಾನಿಯಂತ್ರಣ ವ್ಯವಸ್ಥೆ ಅನಿವಾರ್ಯ ಎನ್ನುತ್ತಾರೆ ಮಟ್ಟಣ್ಣನವರ್. ಕಂಠೀರವ ಸ್ಟುಡಿಯೋದ ಮಹಡಿಗಳ ಸಂಖ್ಯೆ ಹೆಚ್ಚಿಸುವತ್ತಲೂ ಗಮನಹರಿಸಲಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











