'ಮೊದಲಸಲ'ಕ್ಕೆ ಭಾಮಾ ನವಿಲಿನ ನಾಟ್ಯ
ಕರ್ನಾಟಕ ಟಾಕೀಸ್ ಲಾಂಛನದಡಿಯಲ್ಲಿ ಯೋಗೀಶ್ನಾರಾಯಣ್ ಹಾಗೂ ಮಲ್ಲಿಕಾರ್ಜುನ್ ಗದಗ ನಿರ್ಮಿಸುತ್ತಿರುವ 'ಮೊದಲಸಲ' ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ಬಿರುಸಿನಿಂದ ಸಾಗಿದೆ. ನವಿಲಿನ ನೃತ್ಯಕ್ಕೆ ಮನಸೋಲದವರು ಯಾರಿದ್ದಾರೇ? ತನ್ನ ಹಾವಭಾವದಿಂದ ಎಂತಹವರನ್ನು ತನ್ನೆಡೆಗೆ ಸೆಳೆಯುವ ಅದ್ಬುತ ಶಕ್ತಿ ಇದೆ ಅದಕ್ಕೆ. ನಾಯಕಿ ಭಾಮ ಅವರಿಗೂ ನವಿಲು ಅಂದರೆ ಪ್ರಾಣವಂತೆ.
ಅಷ್ಟೇ ಅಲ್ಲ. ಅದರೊಂದಿಗೆ ನರ್ತಿಸುವ ಹಂಬಲವೂ ಇದೆಯಂತೆ. ಹೀಗೆ ತಮಗಿರುವ ಆಸೆಗಳನ್ನು ನಾಯಕಿ ನಾಗೇಂದ್ರ ಪ್ರಸಾದ್ ಅವರು ಬರೆದಿರುವ 'ನವಿಲೆ ನವಿಲೆ ನನ್ನ ಜೊತೆ ಕುಣಿಯೇ ನೀನು-ನಿನ್ನ ಸಹಚಾರಿ ನಾನು ಹಾಡಿನ ಮೂಲಕ ಹೇಳಿಕೊಂಡರು. ನಾಯಕಿಯ ಭಾವನೆಗಳು ವ್ಯಕ್ತವಾಗುವ ಈ ಗೀತೆಗಾಗಿ ನಿರ್ದೇಶಕರು ಮಂಜಿನೂರಿಗೆ ಕೃತಕ ಮಳೆಯನ್ನು ತರಿಸಿದ್ದರು. ಚಿತ್ರದಲ್ಲಿ ನಾಯಕಿಯನ್ನು ಪರಿಚಯಿಸುವ ಈ ಗೀತೆಗೆ ಮದನ್ಹರಿಣಿ ನೃತ್ಯ ಸಂಯೋಜಿಸಿದ್ದಾರೆ. ಮಡಿಕೇರಿಯಲ್ಲಿ ಚಿತ್ರೀಕರಣ ಸಂಪೂರ್ಣಗೊಂಡ ನಂತರ ಚಿತ್ರತಂಡದ ಪಯಣ ಕಾಸರಗೋಡಿನತ್ತ ಸಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಮಹೇಂದರ್ ಅವರ ಬಳಿ ಸಹಾಯಕರಾಗಿದ್ದ ಪುರುಷೋತ್ತಮ್ ಈ ಚಿತ್ರದ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವೆಂಕಟೇಶ್, ಜಗದೀಶ್ ಕಾಳಗಿ, ಮಯೂರ್ ಮತ್ತು ಶ್ರೀಧರ್ ಪಟೇಲ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ, ದಿನೇಶ್ ಮಂಗಳೂರು ಕಲೆ ಹಾಗೂ ಶಶಿಧರ್ ಅವರ ನಿರ್ಮಾಣ ನಿರ್ವಹಣೆಯಿದೆ. ಚಿತ್ರದ ತಾರಾಬಳಗದಲ್ಲಿ ಯಶ್, ಭಾಮಾ, ರಂಗಾಯಣ ರಘು, ಅವಿನಾಶ್, ಶರಣ್, ವಿನಯಾಪ್ರಸಾದ್, ಯೋಗೀಶ್ನಾರಾಯಣ್, ಮೈಸೂರು ದಯಾನಂದ್ ರಾಕೇಶ್, ಮಂಜು, ತಿಮ್ಮೇಗೌಡ ಮುತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











