ಮಂಗಳೂರು ಪಬ್ ದಾಳಿಗೆ ಚಿತ್ರರಂಗದ ಖಂಡನೆ

ಸಂಜನಾ
ಮಂಗಳೂರಿನಲ್ಲಿ ಆದ ಘಟನೆಯಿಂದ ನನ್ನ ಮನಸ್ಸಿಗೆ ಬಹಳಷ್ಟು ಘಾಸಿಯಾಗಿದೆ. ನಾನೂ ಸಹ ಕೋಪಗೊಂಡಿದ್ದೇನೆ. ಶ್ರೀರಾಮಸೇನೆಗೆ ಸೇರಿದ ರೌಡಿಗಳನ್ನು ಜೈಲಿಗೆ ತಳ್ಳಬೇಕು. ಸಮಾಜದ ರಕ್ಷಣೆ ಬಗ್ಗೆ ಅವರಿಗೆ ಅಷ್ಟು ಕಾಳಜಿ ಇದ್ದರೆ ತಮ್ಮ ದೃಷ್ಟಿಯನ್ನು ಬೇರೆ ಬೇರೆ ಸಂಗತಿಗಳ ಕಡೆಗೆ ಹರಿಸಲಿ. ಗೂಂಡಾಗಳು ಮತ್ತು ಅತ್ಯಾಚರವೆಸಗುವವರ ವಿರುದ್ಧ ಅವರೇಕೆ ತಿರುಗಿಬೀಳುತ್ತಿಲ್ಲ? ಇವರ ಪ್ರತಾಪಬರೀ ಅಮಾಯಕ ಯುವಕರ ಮೇಲಷ್ಟೆ.
ಪೂಜಾಗಾಂಧಿ
ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ. ದಾಳಿಕೋರರನ್ನು ಕಠಿಣವಾಗಿ ಶಿಕ್ಷಿಸಬೇಕು.
ತಾರಾ
ಇದೊಂದು ಕ್ರೂರ ದಾಳಿ. ಈ ರೀತಿಯ ಪಾಶವಿ ಕೃತ್ಯ ವೆಸಗಲು ಅವರಿಗೆ ಅಧಿಕಾರ ಕೊಟ್ಟವರ್ಯಾರು? ದಾಳಿಯನ್ನು ನಾವು ಪ್ರತಿಭಟಿಸಬೇಕು. ದೈಹಿಕವಾಗಿ ಶಿಕ್ಷಿಸುವುದರಿಂದ ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ.ದಾಳಿಕೋರರಿಗೆ ಮಾನವೀಯತೆ ಎಂಬುದೇ ಇರಲಿಲ್ಲ. ಅಂಥಹವರು ಸಮಾಜವನ್ನು ಹೇಗೆ ಬದಲಾಯಿಸಲು ಸಾಧ್ಯ?
ಶ್ರೀಮುರಳಿ
ಶ್ರೀರಾಮಸೇನೆ ಕಾರ್ಯಕರ್ತರ ದಾಳಿಯನ್ನು ಗಮನಿಸಿದಾಗ ಅವರಿಗೆ ಸಮಾಜದ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ ಎನ್ನಿಸುತ್ತದೆ. ಅವರು ಯುವತಿಯರನ್ನು ಥಳಿಸಿದ್ದು ತಪ್ಪು. ಶ್ರೀರಾಮಸೇನೆ ಕಾರ್ಯಕರ್ತರು ಆ ಯುವತಿಯನ್ನು ಅವರವರ ಮನೆಗಳಿಗೆ ಕರೆದೊಯ್ದು ನಿಮ್ಮ ಮಕ್ಕಳು ಹೀಗೆ ದಾರಿ ತಪ್ಪುತ್ತಿದ್ದಾರೆ ಅವರಿಗೆ ತಿಳಿಹೇಳಿ ಎನ್ನಬೇಕಾಗಿತ್ತು.
ಬಿ.ಸುರೇಶ್
ತಾಲಿಬಾನರಿಗೂ ಇವರಿಗೂ ಯಾವುದೇ ವ್ಯತ್ಯಾಸವಿಲ್ಲ. ವೈಯಕ್ತಿಯ ಹಕ್ಕುಗಳ ಮೇಲೆ ಮಾಡಿದ ಅಸಭ್ಯ ದಾಳಿ ಇದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











