ಮಾಯವಾಗಿದ್ದ 'ಆ ದಿನಗಳು' ಚೇತನ್ ಮತ್ತೆ ಪ್ರತ್ಯಕ್ಷ!
ಚಿತ್ರರಂಗವೇ ವಿಚಿತ್ರ. ಹೊಸಬರು ಬರುತ್ತಿರುತ್ತಾರೆ ಹಳಬರು ಹೋಗುತ್ತಿರುತ್ತಾರೆ ಅನ್ನುವಂತೆಯೂ ಇಲ್ಲ. ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡು ಮಾಯವಾದವರೂ ಇದ್ದಾರೆ. ಗಟ್ಟಿಯಾಗಿ ನೆಲೆನಿಂತ ಹಳಬರೂ ಇದ್ದಾರೆ. ಮಧ್ಯೆ ಮಧ್ಯೆ ಬಿಡುವು ಮಾಡಿಕೊಂಡು ಆಗಾಗ 'ದರ್ಶನ' ನೀಡುತ್ತಿರುವ ಕೆಲವರೂ ಇದ್ದಾರೆ. ಈ ಸಾಲಿಗೆ 'ಆ ದಿನಗಳು' ಚಿತ್ರದಲ್ಲಿ ನಟಿಸಿದ್ದ ಸುಂದರ ಕಣ್ಣು, ಮತ್ತೆ ಮತ್ತೆ ನೋಡುವಂತ ಮುಖದ 'ಸುರಸುಂದರ' ಚೇತನ್ ಸೇರಬಲ್ಲರೇನೋ!
ಆ ದಿನಗಳು ಚಿತ್ರದಲ್ಲಿ ಹೊಸ ಮುಖವಾಗಿದ್ದರೂ ತನ್ನ ಚೆಂದದ ಮುಖ, ಸುಂದರ ಕಣ್ಣುಗಳಿಂದ ಎಲ್ಲರನ್ನೂ ಆಕರ್ಷಿಸಿ ಮನೆಮಾತಾಗಿದ್ದ ಚೇತನ್. ನಂತರ ಬಿರುಗಾಳಿ, ಸೂರ್ಯಕಾಂತಿ ಚಿತ್ರಗಳ ನಂತರ ಅಕ್ಷರಶಃ ಮರೆಯಾಗಿದ್ದರು. ನಂತರ ಗಂಧರ್ವ, ಅದೂ ಇದೂ ಹೆಸರಿನ ಚಿತ್ರಗಳಲ್ಲಿ ಚೇತನ್ ಹೆಸರು ಕೇಳಿ ಬಂದಿದ್ದರೂ ಅದ್ಯಾವುದೂ ಮುಂದುವರಿಯಲಿಲ್ಲ. ಅಷ್ಟರಲ್ಲೇ ಸಾಕಷ್ಟು ಫ್ಯಾನ್ಸ್ ಗಳನ್ನು ಗಳಿಸಿದ್ದ ಚೇತನ್, ಇದ್ದಕ್ಕಿದ್ದಂತೆ ಮಾಯವಾಗಿ ಸಾಕಷ್ಟು ಜನರು ಚಿಂತಾಕ್ರಾಂತರಾಗಿದ್ದರು.
ಇದೀಗ ಅವರ ಅಭಿಮಾನಿಗಳಿಗೆ ಸಂತೋಷದ ಸುದ್ದಿ. ಚೇತನ್ ಮತ್ತೆ ಕನ್ನಡಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೂರಪ್ಪ ಬಾಬು ನಿರ್ಮಾಣ, ರವಿ ಶ್ರೀವತ್ಸ ನಿರ್ದೇಶನ ಹಾಗೂ ರವಿಚಂದ್ರನ್ ಮುಖ್ಯಭೂಮಿಕೆ ಇರುವ ಈ ಚಿತ್ರದಲ್ಲಿ ಚೇತನ್ ಹಾಗೂ 'ಒಲವೇ ಮಂದಾರ' ನಾಯಕಿ ಆಕಾಂಕ್ಷ 'ಯುವ ಜೋಡಿ'ಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂತೂ ಇಂತೂ ಪ್ರೇಕ್ಷಕರು ಮರೆಯುವ ಮುನ್ನ ಚೇತನ್ ಮರುಹುಟ್ಟು ಪಡೆಯುತ್ತಿದ್ದಾರೆ. ಸುಂದರ ಹುಡುಗನೊಬ್ಬ ಸ್ಯಾಂಡಲ್ ವುಡ್ ನಿಂದ ಮರೆಯಾಗುತ್ತಿಲ್ಲ ಎಂಬ ಸಮಾಧಾನ ಮೂಡಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











