ಚಿರಂಜೀವಿ ಜತೆ ಬೆಳ್ಳಿತೆರೆಗೆ ಜಯಮಾಲಾ ಪುತ್ರಿ
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಮಗಳು ಸೌಂದರ್ಯ ಕಡೆಗೂ ಕನ್ನಡ ಚಿತ್ರವೊಂದರ ಮೂಲಕ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. 'ವಾಯುಪುತ್ರ'ನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತನಾದ ಚಿರಂಜೀವಿ ಸರ್ಜಾ ಜತೆ ಸೌಂದರ್ಯ ಚಿತ್ರ ಸೆಟ್ಟೇರಲಿದೆ. ಮಹೇಶ್ ಬಾಬು ನಿರ್ದೇಶಿಸಲಿರು ಈ ಚಿತ್ರವನ್ನು ಭರತ್ ನಿರ್ಮಿಸುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಜತೆ ಸೌಂದರ್ಯ 'ಲಗೋರಿ' ಆಡಲಿದ್ದಾರೆ ಎಂಬ ಸುದ್ದಿ ಇತ್ತು. ಯೋಗರಾಜ್ ಭಟ್ ನಿರ್ದೇಶನದಲ್ಲಿ ಆ ಚಿತ್ರ ಮೂಡಿಬರಲಿದೆ ಎಂಬ ಗುಮಾನಿಗಳು ಗಾಂಧಿನಗರದಲ್ಲಿ ಹರಿದಾಡಿದವು. ಭಾರಿ ಬಜೆಟ್ ಚಿತ್ರವಾದ ಕಾರಣ ಬಜೆಟ್ ಹೊಂದಿಸುವುದು ಕಷ್ಟವಾಗಿ 'ಲಗೋರಿ' ಆಟ ರದ್ದಾಗಿತ್ತು.
ತೆಲುಗು ಚಿತ್ರದ ಮೂಲಕ ಬೆಳ್ಳಿತೆರೆಗೆ ಸೌಂದರ್ಯ ಪ್ರವೇಶಿಸುತ್ತಿದ್ದಾರೆ ಎಂಬ ಸುದ್ದಿ ಬಂದ ವೇಗದಲ್ಲೇ ಮಾಯವಾಗಿತ್ತು.''ಸೌಂದರ್ಯಳನ್ನು ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಉತ್ತಮ ಚಿತ್ರಕತೆಗಾಗಿ ನಿರೀಕ್ಷಿಸುತ್ತಿದ್ದೇವೆ. ಹಾಗಾಗಿ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳುತ್ತಿಲ್ಲ'' ಎಂದು ಜಯಮಾಲಾ ವಿವರಣೆ ನೀಡಿದ್ದರು.
ಇದೀಗ ಕಾಲ ಕೂಡಿಬಂದಿದ್ದು ಮಹೇಶ್ ಬಾಬು ಚಿತ್ರದ ಮೂಲಕ ಸೌಂದರ್ಯ ವೃತ್ತಿ ಜೀವನ ಆರಂಭವಾಗುತ್ತಿದೆ. ಅಂದಹಾಗೆ ಈ ಚಿತ್ರಕ್ಕೆ ಇನ್ನೂ ನಾಮಕಾರಣ ಮಾಡಿಲ್ಲ. ಪ್ರಣಯಭರಿತ ಮನರಂಜನಾತ್ಮಕ ಚಿತ್ರ ಇದಾಗಿದೆಯಂತೆ. ಕನ್ನಡ ಚಿತ್ರರಂಗಕ್ಕೆ ರಮ್ಯಾ, ಐಂದ್ರಿತಾ ರೇ ಅವರನ್ನು ಪರಿಚಯಿಸಿದ ಮಹೇಶ್ ಇದೀಗ ಸೌಂದರ್ಯರನ್ನು ಪರಿಚಯಿಸುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಅಧಿಕೃತ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











