ಕನ್ನಡ ಚಿತ್ರರಂಗ ಸಮೀಕ್ಷೆ 2010. ಜನಮತ
ಕನ್ನಡ ಚಿತ್ರರಂಗದ ವರ್ಷದ ಅತ್ಯುತ್ತಮ ನಟ, ನಟಿ, ನಿರ್ದೇಶಕ...ಯಾರೆಂದು ತೀರ್ಮಾನಿಸುವ ಜನತಾ ಮತಗಟ್ಟೆಯನ್ನು ದಟ್ಸ್ ಕನ್ನಡ ತನ್ನ ಓದುಗರಿಗೆ ಕಲ್ಪಿಸಿತ್ತು. ಕನ್ನಡ ಚಲನಚಿತ್ರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕನ್ನಡ ಚಿತ್ರರಂಗ 2010 ಜನಾಭಿಪ್ರಾಯ ಇದೀಗ ಹೊರಬಿದ್ದಿದೆ. ನಿರೀಕ್ಷೆಗೂ ಮೀರಿ ಓದುಗರು ಮತ ಚಲಾಯಿಸಿದ್ದಾರೆ. ಕೆಲವು ವಿಭಾಗಗಳಲ್ಲಿ ಅನಿರೀಕ್ಷಿತ ಫಲಿತಾಂಶ, ಮತ್ತೆ ಕೆಲವು ವಿಭಾಗಗಳಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಎಲ್ಲೂ ಫಲಿತಾಂಶ ಅತಂತ್ರವಾಗಿಲ್ಲ. ಓದುಗರ ಅಂತಿಮ ತೀರ್ಪು ನಿಮ್ಮ ಅವಗಾಹನೆಗೆ - ಸಂಪಾದಕ.
1. ವರ್ಷದ ಅತ್ಯುತ್ತಮ ನಟ: ಇಡೀ ಅಂತರ್ಜಾಲವೇ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಅತ್ಯುತ್ತಮ ನಟ ಸ್ಪರ್ಧೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತನ್ನ ಪವರ್ ತೋರಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಉಪೇಂದ್ರ ಅವರನ್ನು ಶೇ. 4.1 ಮತಗಳ ಅಂತರದಿಂದ ಸೋಲಿಸಿ ನಾನೇ ರಾಜಕುಮಾರ ಎಂದು ಬೀಗುವಂತಾಗಿದೆ. ಇನ್ನು ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವಣ್ಣ, ಲೂಸ್ ಮಾದ ಯೋಗೀಶ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ( ಗಳಿಸಿದ ಮತಗಳ ವಿವರ)
2. ವರ್ಷದ ಉತ್ತಮ ಚಿತ್ರ: ಕೆಲವು ಸುತ್ತಿನ ಮತಎಣಿಕೆಯವರೆಗೂ ನೆಕ್ ಟು ನೆಕ್ ಪೈಪೋಟಿ ನಡೆದರೂ 'ಸೂಪರ್' ಚಿತ್ರ (ಶೇ. 43.19) ಮತ ಪಡೆದು ನಿರಾಂತಕವಾಗಿ ಜಾಕಿ (ಶೇ. 26.4) ಚಿತ್ರವನ್ನು ಭಾರೀ ಅಂತರದಿಂದ ಹೊಡೆದುರುಳಿಸಿದೆ. ವರ್ಷದ ಬ್ಲ್ಯಾಕ್ ಬಸ್ಟರ್ ಚಿತ್ರಗಳಾದ ಆಪ್ತರಕ್ಷಕ (ಶೇ.15.38) ಭಟ್ಟರ ಪಂಚರಂಗಿ (ಶೇ.8.86) ಮತ್ತು ಕೃಷ್ಣನ್ ಲವ್ ಸ್ಟೋರಿ (ಶೇ.6.17) ಮತ ಗಳಿಸಿ ನಿರಾಶೆ ಅನುಭವಿಸಿವೆ. ( ಗಳಿಸಿದ ಮತಗಳ ವಿವರ)
3. ವರ್ಷದ ಅತ್ಯುತ್ತಮ ನಟಿ: ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಸಹಜ ನೈಜ ಅಭಿನಯ ನೀಡುತ್ತಿರುವ ಮಿನುಗುತಾರೆ ಕಲ್ಪನಾಗೆ ಹೋಲಿಸಬಹುದಾದ ರಾಧಿಕಾ ಪಂಡಿತ್ ತನಗೆ ಯಾರೂ ಸಾಟಿ ಇಲ್ಲದಂತೆ ಭರ್ಜರಿ ಮತಗಳ ಅಂತರದಿಂದ ಜಯಗಳಿಸಿದ್ದಾರೆ. 'ಪಂಚರಂಗಿ' ಹಿರೋಯಿನ್ ನಿಧಿ ಸುಬ್ಬಯ್ಯ ಮಾತ್ರ ರಾಧಿಕಾಗೆ ಸ್ವಲ್ಪ ಪ್ರತಿರೋಧ ತೋರಿದರೆ, ಒಂದು ಕಾಲದ ನಂಬರ್ ಒನ್ ನಾಯಕಿ ರಮ್ಯಾ ಮತ್ತು ಐಂದ್ರಿತಾ ರೇ ಹಾಗೂ ಅಮೂಲ್ಯ ಇನ್ನಿಲ್ಲದಂತೆ ಮುಗ್ಗರಿಸಿದ್ದಾರೆ. ( ಗಳಿಸಿದ ಮತಗಳ ವಿವರ)
4. ವರ್ಷದ ಅತ್ಯುತ್ತಮ ನಿರ್ದೇಶಕ: ತ್ರಿಕೋಣ ಸಮರವೆಂದು ತಿಳಿದಿದ್ದ ಅತ್ಯುತ್ತಮ ನಿರ್ದೇಶಕ ಸ್ಪರ್ಧೆಯಲ್ಲಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಉಪ್ಪಿ ಸೂಪರೋ ರಂಗನಾಗಿದ್ದಾರೆ. ಭಾರಿ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ 'ಜಾಕಿ' ಸೂರಿ ಅವರನ್ನು ಪರಾಭವಗೊಳಿಸಿದ್ದಾರೆ. 'ಲೈಫು ಇಷ್ಟೇನೆ' ಭಟ್ರು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಳ್ಳ ಬೇಕಾಗಿದೆ. ಇನ್ನು ಕಣದಲ್ಲಿದ್ದ ಹೌವ್ಲ ಹೌವ್ಲಾ ಪಿ ವಾಸು ಮತ್ತು ಶಶಾಂಕ್ ಎರಡಂಕೆ ದಾಟಿಲ್ಲ ಸ್ವಾಮಿ. ( ಗಳಿಸಿದ ಮತಗಳ ವಿವರ)
5. ವರ್ಷದ ಅತ್ಯಂತ ಕಳಪೆ ಚಿತ್ರ: ಸ್ಪರ್ಧೆಯಲ್ಲಿ ಒಟ್ಟು ಐದು ಚಿತ್ರಗಳು ಕಣದಲ್ಲಿದ್ದವು. ಅವು ಯಾವುದೆಂದರೆ ಹೂ, ಇದ್ರೆ ಗೋಪಿ ಬಿದ್ರೆ ಪಾಪಿ, ಬಿಂದಾಸ್ ಹುಡುಗಿ, ತಿಪ್ಪಾರಳ್ಳಿ ತರ್ಲೆಗಳು, ನೂರು ಜನ್ಮಕು. ಇದರಲ್ಲಿ ಕ್ರೇಜಿ ಸ್ಟಾರ್ ಅಭಿನಯದ ಹೂ ಮೊದಲೇ ಸ್ಥಾನ ಅಲಂಕರಿಸಿದೆ ಎನ್ನುವುದು ಗಮನಿಸ ಬೇಕಾದ ಅಂಶ.
6. ವರ್ಷದ ಜನಪ್ರಿಯ ಹಾಡು: "ಎಕ್ಕಾ ರಾಜ ರಾಣಿ ನಿನ್ನ ಕೈಯೊಳಗೆ" ಹಾಡಿಗೆ ಚಿತ್ರರಸಿಕರು ಸಾಲುನಿಂತು ಮತ ಚಲಾಯಿಸಿದ್ದಾರೆ. ನಂತರದ ಸ್ಥಾನ ಸುಮಧುರ ಹಾಡು "ಹೃದಯವೇ ಬಯಸಿದೆ ನಿನ್ನನೇ" ಹಾಗೂ ಮೂರನೇ ಸ್ಥಾನ "ಉಡಿಸುವೆ ಬೆಳಕಿನ ಸೀರೆಯ" ಹಾಡಿನ ಪಾಲಾಗಿದೆ. (ಗಳಿಸಿದ ಮತಗಳ ವಿವರ)
7. ಅತ್ಯುತ್ತಮ ಸಂಗೀತ ನಿರ್ದೇಶಕ: ಮತ್ತೊಂದು ಬಹು ನಿರೀಕ್ಷೆಯ "ಅತ್ಯುತ್ತಮ ಸಂಗೀತ ನಿರ್ದೇಶಕ" ವಿಭಾಗಕ್ಕೆ ನಡೆದ ಸ್ಪರ್ಧೆಯಲ್ಲಿ ನಂಬರ್ ಒನ್ ಸಂಗೀತಗಾರರಾಗಿ ವಿ ಹರಿಕೃಷ್ಣ ಹೊರಹೊಮ್ಮಿದ್ದಾರೆ. ಭಾರಿ ಅಂತರದಿಂದ ಹರಿ ಜಯಗಳಿಸಿದರೆ, ಗುರುಕಿರಣ್ ಎರಡನೇ ಸ್ಥಾನದಲ್ಲಿ ಮತ್ತು ಮುಂಗಾರುಮಳೆ ಮನೋಮೂರ್ತಿ ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ( ಗಳಿಸಿದ ಮತಗಳ ವಿವರ)


Click it and Unblock the Notifications











