ಸೋನು ನಿಗಂಗೆ ಮಣೆ ಹಾಕುವುದಿಲ್ಲ, ಅನೂಪ್
ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಯಾವತ್ತೂ ಬಾಲಿವುಡ್ ಗಾಯಕರಿಗೆ ಮಣೆ ಹಾಕುವುದಿಲ್ಲ ಎಂದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ.
ಬಾಲಿವುಡ್ ಗಾಯಕರಾದ ಸೋನು ನಿಗಂ, ಹರಿಹರನ್, ಕುನಾಲ್ ಗಾಂಜಾವಾಲ ಅವರಿಗಿಂತ ಚೆನ್ನಾಗಿ ಹಾಡುವ ಗಾಯಕರು ನಮ್ಮ ಕನ್ನಡಲ್ಲೇ ಇರಬೇಕಾದರೆ ಯಾಕೆ ಮುಂಬೈ ಅವರನ್ನು ಕರೆತರಬೇಕು ಎಂದು ಸೀಳಿನ್ ಪ್ರಶ್ನಿಸಿದ್ದಾರೆ. ಬಿಡಗಡೆಗೆ ಸಿದ್ಧವಾಗಿರುವ 'ಎದ್ದೇಳು ಮಂಜುನಾಥ' ಚಿತ್ರದಲ್ಲಿನ ಎಲ್ಲ ಹಾಡುಗಳನ್ನು ಕನ್ನಡಿಗರಿಂದಲೇ ಹಾಡಿಸಿದ್ದಾರೆ ಸೀಳಿನ್. ತಮ್ಮ ಮುಂದಿನ ಚಿತ್ರದಲ್ಲಿ ಸೋನು ನಿಗಂ ಹಾಡಲೇ ಬೇಕೆಂದು ನಿರ್ಮಾಪಕರು ಅಥವಾ ನಿರ್ದೇಶಕರು ಪಟ್ಟುಹಿಡಿದರೆ ಅಂತಹ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸೀಳಿನ್ ಸ್ಪಷ್ಟಪಡಿಸಿದ್ದಾರೆ.
ತನ್ನ ಹಿಂದಿನ 'ಗೂಳಿ'ಚಿತ್ರವನ್ನು ಉದಾಹರಿಸುತ್ತ , ಬಾಲಿವುಡ್ ಗಾಯಕರಿಗೆ ಕನ್ನಡದ ಮೇಲೆ ಗೌರವ ಇಲ್ಲ, ಚಿತ್ರದ ಒಂದು ಹಾಡನ್ನು ಹೈ ಪಿಚ್ ನಲ್ಲಿ ಹಾಡಲು ಹರಿಹರನ್ ನಿರಾಕರಿಸಿದ್ದರು. ಕನ್ನಡದ ಮಾರುಕಟ್ಟೆಯನ್ನು ಗಣನೆಗೆ ತೆಗೆದುಕೊಳ್ಳದೆ ಅವರುಗಳು ಸಂಭಾವನೆ ಕೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬ ಗಾಯಕ ಹುಟ್ಟಿಕೊಳ್ಳುವುದು ನಿರ್ದೇಶಕನ
ಕಂಪೋಜಿಶನ್ ನಿಂದ, ನಿರ್ದೇಶಕನಿಗೆ ವಿಶ್ವಾಶ ಇದ್ದರೆ ಯಾವ ಗಾಯಕರಿಂದಲೂ ಹಾಡನ್ನು ಹಿಟ್ ಮಾಡಿಸಬಹುದು ಎಂಬುವುದು ಅನೂಪ್ ಅಭಿಮತ.
ಕನ್ನಡ ಗಾಯಕರಿಂದ ಹಾಡಿಸುವ ಹಾಡು ಹಿಟ್ ಆಗದಿದ್ದರೆ ತಮ್ಮ ಸಂಪೂರ್ಣ ಸಂಭಾವನೆಯನ್ನು ಹಿಂದಿರುಗಿಸುವುದಾಗಿ ಅನೂಪ್ ಸವಾಲು ಎಸೆದಿದ್ದಾರೆ. ಅನೂಪ್ ಸಂಗೀತ ನೀಡಿರುವ 'ಗೂಳಿ' ಮತ್ತು 'ನಂದ ಲವ್ಸ್ ನಂದಿತಾ' ಚಿತ್ರದ ಹಾಡುಗಳು ಜನಪ್ರಿಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











