ಅಂಬಾರಿ ಅರ್ಜುನ್ 'ಅದ್ದೂರಿ'ಗೆ ಕಾಯುತ್ತಿರುವ ಪ್ರೇಕ್ಷಕರು
ಅಂಬಾರಿ ಚಿತ್ರದ ಮೂಲಕ ಯಶಸ್ವೀ ನಿರ್ದೇಶಕ ಎನಿಸಿಕೊಂಡಿರುವ ಎ. ಪಿ. ಅರ್ಜುನ್, ಸದ್ಯದಲ್ಲೇ ಅದ್ದೂರಿ ಚಿತ್ರದ ಮೂಲಕ ಮತ್ತೆ ಮನೆಮಾತಾಗುವ ಆತ್ಮವಿಶ್ವಾಸದಲ್ಲಿದ್ದಾರೆ. ಅರ್ಜುನ್ ಚಿತ್ರ ಅದ್ದೂರಿ, ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸದ್ದು-ಸುದ್ದಿ ಮಾಡುತ್ತಿದ್ದು ಇದೀಗ ತೆರೆಗೆ ಬರುವ ಸಮಯ ಸಮೀಪಿಸಿದೆ.
ಅರ್ಜುನ್ ಸರ್ಜಾ ಅಳಿಯ, ಚಿರಂಜೀವಿ ಸರ್ಜಾ ತಮ್ಮ 'ಧ್ರುವ ಸರ್ಜಾ' ನಾಯಕರಾಗಿರುವ ಈ ಚಿತ್ರದ ನಾಯಕಿ ಅಚ್ಚಕನ್ನಡದ ಪ್ರತಿಭೆ ರಾಧಿಕಾ ಪಂಡಿತ್. ಅಂಬಾರಿಯಲ್ಲಿ 'ಆಲ್ ರೌಂಡರ್' ಎನಿಸಿಕೊಂಡಿರುವ ಅರ್ಜುನ್, ಅದ್ದೂರಿಯನ್ನೂ ಕೂಡ ಚೆನ್ನಾಗಿ ಮಾಡಿದ್ದಾರೆಂದು ಇಡೀ ಸ್ಯಾಂಡಲ್ ವುಡ್ ನಂಬಿದೆ. ಶಂಕರ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿಕ್ಕ ವಯಸ್ಸಿನ ನಿರ್ದೆಶಕರಾದರೂ ಚಿತ್ರರಂಗದ ಹಾಗೂ ನಿರ್ದೆಶನದ ಸರಿಗಮ ತಿಳಿದಿರುವ ಅರ್ಜುನ್, ಚಿತ್ರ ಚೆನ್ನಾಗಿ ಬರಬೇಕೆಂಬ ಏಕೈಕ ಕಾರಣದಿಂದ ನಿಧಾನಗತಿ ಅನುಸರಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಧ್ರುವ ಸರ್ಜಾ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಥೆ ಹಾಗೂ ಪಾತ್ರ ಚೆನ್ನಾಗಿಲ್ಲದಿದ್ದರೆ ರಾಧಿಕಾ ಪಂಡಿತ್ ಚಿತ್ರವನ್ನು ಒಪ್ಪಿಕೊಳ್ಳುವುದೇ ಇಲ್ಲ ಎಂಬುದು ಜಗತ್ತಿಗೇ ಗೊತ್ತಿರುವ ಸತ್ಯ.
ಹಾಗಾಗಿ, ಕನ್ನಡದ ಸಿನಿಪ್ರೇಕ್ಷಕರು ಅಪಾರ ನಿರೀಕ್ಷೆಯಿಟ್ಟು ಚಿತ್ರ ತೆರೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಜನರ ನಿರೀಕ್ಷೆಗೆ ನಿರ್ದೇಶಕ ಅರ್ಜುನ್ ಹಾಗೂ ನಿರ್ಮಾಪಕ ಶಂಕರ್ ಸ್ಪಂದಿಸುವ ಭರವಸೆ ಎಲ್ಲರದು. ಸದ್ಯದಲ್ಲೇ ಅದ್ದೂರಿ ತೆರೆ ಅಲಂಕರಿಸುವುದು ಗ್ಯಾರಂಟಿ ಎನ್ನಲಾಗಿದೆ. ಅದ್ದೂರಿಗೆ 'ಅದ್ದೂರಿ' ಸ್ವಾಗತ ಕೋರಲು ಪ್ರೇಕ್ಷಕರು ರೆಡಿಯಾಗಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











