ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ತಾರೆ ಅಮೂಲ್ಯ
ಚೆಲುವಿನ ಚಿತ್ತಾರದ ಚಿಲಿಪಿಲಿ ಬೆಡಗಿ ಅಮೂಲ್ಯ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಅವರ ಅಪಾರ ಅಭಿಮಾನಿ ಬಳಗಕ್ಕೆ ನಿರಾಶೆ ಮೂಡಿಸಿದ್ದಾರೆ. ಆದರೆ ಅಮೂಲ್ಯ ಮಾತ್ರ ತಮ್ಮ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಿಸಿಕೊಳ್ಳ ಅಂದಿದ್ದಾರೆ.
ಅಮೂಲ್ಯ ಅಭಿನಯದ 'ಮನಸಾಲಜಿ' ಚಿತ್ರವೇ ಆಕೆಯ ಕೊನೆಯ ಚಿತ್ರವಾಗಲಿದೆ. ಇದಾದ ಬಳಿಕ ಯಾವುದೇ ಚಿತ್ರದಲ್ಲಿ ನಟಿಸದಿರಲು ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಚಿತ್ರರಂಗದ ಸಹವಾಸ ಸಾಕಪ್ಪಾ ಸಾಕು ಅನ್ನಿಸಿಬಿಟ್ಟಿದಿಯಂತೆ ಅಮೂಲ್ಯ ಅವರಿಗೆ.
ಚಿತ್ರ ನಿರ್ದೇಶಕ ರತ್ನಜ ಅವರೊಂದಿಗಿನ ಚುಂಬನ ವಿವಾದ ಆಕೆಯ ಮನಸ್ಸಿಗೆ ತೀವ್ರ ಘಾಸಿ ಮಾಡಿತ್ತು. ಆ ಆಘಾತದಿಂದ ಅಮೂಲ್ಯ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಈಗ ಮತ್ತೊಂದು ವಿವಾದ ಅಮೂಲ್ಯ ಮೇಲೆ ಬಂದೆರಗಿದೆ. ತಮಿಳು ಚಿತ್ರರಂಗದ ನಿರ್ಮಾಪರೊಬ್ಬರ ಮಗನೊಂದಿಗೆ ಮದುವೆಯಾಗಿದೆ ಎಂಬುದು.
ಶೂಟಿಂಗ್ ಸಮಯದಲ್ಲೇ ಇಬ್ಬರೂ ಕದ್ದುಮುಚ್ಚಿ ಲವ್ ಮಾಡುತ್ತಿದ್ದರು. ಅವರಿಬ್ಬರ ವಿವಾಹಕ್ಕೆ ಹೀರೋ ತಂದೆ ವಿರೋಧಿಸಿದ್ದರು. ಇಬ್ಬರೂ ಪೊಲೀಸ್ ಠಾಣೆಗೆ ಹೋಗಿ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯನ್ನು ಕೆಲವು ತಮಿಳು ಮಾಧ್ಯಮಗಳು ಪ್ರಕಟಿಸಿದ್ದವು. ಸುದ್ದಿಯ ಜೊತೆಗೆ ಅಮೂಲ್ಯ ಫೋಟೋವನ್ನು ಪ್ರಕಟಿಸಲಾಗಿತ್ತು.
ಇದರಿಂದ ಆಕೆ ತೀವ್ರ ನೊಂದುಕೊಂಡಿದ್ದಾರೆ. ತಮಿಳಿನ ಯಾವ ಚಿತ್ರದಲ್ಲೂ ನಾನು ನಟಿಸುತ್ತಿಲ್ಲ. ಹಾಗಿದ್ದೂ ಹೀಗೊಂದು ವದಂತಿ ಹಬ್ಬಿಸಲಾಗಿದೆ. ಕಾಲೇಜು ಆಯಿತು ಮನೆ ಆಯಿತು. ಇದಿಷ್ಟೇ ನನ್ನ ಕೆಲಸ. ಇನ್ನು ಮುಂದೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸುತ್ತೇನೆ. ಸಿನಿಮಾ ಯಾವತ್ತಿದ್ದರೂ ಮಾಡಬಹುದು. ಆದರೆ ವಿದ್ಯಾಭ್ಯಾಸಕ್ಕೆ ನನ್ನ ಮೊದಲ ಆದ್ಯತೆ ಎಂದಿದ್ದಾರೆ ಅಮೂಲ್ಯ.


Click it and Unblock the Notifications











