ಸೆಂಚುರಿ ಹೀರೋ ಆದ ಹ್ಯಾಟ್ರಿಕ್ ಹೀರೋ!
ಶಿವರಾಜ್ ಕುಮಾರ್ ಅವರಿಗೆ ಹೊಸ ಸ್ಟಾರ್ ಗಿರಿ ಸಿಕ್ಕಿದೆ! ಇನ್ನು ಮುಂದೆ ಅವರು 'ಹ್ಯಾಟ್ರಿಕ್ ಹೀರೋ' ಅಲ್ಲ 'ಸೆಂಚುರಿ ಹೀರೋ'. ಈ ಬಿರುದನ್ನು ಶಿವಣ್ಣನಿಗೆ ದಯಪಾಲಿಸಿದವರು ಇನ್ಯಾರು ಅಲ್ಲಾ ಚಾಲೆಂಜಿಂಗ್ ಸ್ಟಾರ್ ದರ್ಶನ್. ಸಂದರ್ಭ 'ಚೆಲುವೆಯೇ ನಿನ್ನೇ ನೋಡಲು' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ.
ಧ್ವನಿಸುರುಳಿ ಬಿಡುಗಡೆಗೆ ದರ್ಶನ್ ಜೊತೆ ಸುದೀಪ್ ಸಹ ಆಗಮಿಸಿದ್ದದ್ದು ವಿಶೇಷವಾಗಿತ್ತು. ದರ್ಶನ್ ಮಾತನಾಡುತ್ತಾ, ಇನ್ನು ಶಿವಣ್ಣ ಅವರನ್ನು ಹ್ಯಾಟ್ರಿಕ್ ಹೀರೋ ಎಂದು ಕರೆದದ್ದು ಸಾಕು. ಅವರ ನಟನೆಯ ಚಿತ್ರಗಳು ನೂರರ ಗಡಿ ಸಮೀಪಿಸುತ್ತಿವೆ. ಹಾಗಾಗಿ ಇನ್ನು ಮುಂದೆ ಅವರನ್ನು 'ಸೆಂಚುರಿ ಹೀರೋ' ಎಂದು ಕರೆಯೋಣ ಎಂದರು. ಈ ಮಾತಿಗೆ ಕೇವಲ ಶಿವಣ್ಣನ ಅಭಿಮಾನಿಗಳಷ್ಟೇ ಅಲ್ಲ ದರ್ಶನ್ ಅಭಿಮಾನಿಗಳಿಂದಲೂ ಕರತಾಡನ ಮುಗಿಲು ಮುಟ್ಟಿತು.
ಕಿಚ್ಚ ಸುದೀಪ್ ಮಾತನಾಡುತ್ತಾ, ತಾವು ಶಿವಣ್ಣನ ಅಭಿಮಾನಿ ಎಂದರು. 'ಓಂ' ಚಿತ್ರವನ್ನು ನೋಡಲು ಹೋಗಿ ಒದೆ ತಿಂದದ್ದನ್ನು ನೆನಪಿಸಿಕೊಂಡರು. ಇನ್ನೊಂದು 'ಓಂ' ತರಹದ ಚಿತ್ರ ಬರಲಿ ಎಂದು ಆಶಿಸಿದರು. ಶಿವಣ್ಣ ಅವರು ರೇಷ್ಮೆ ಬಟ್ಟೆಗಳನ್ನು ಹಾಕುವುದನ್ನು ಕಡಿಮೆ ಮಾಡಿ ಇನ್ನೂ ವಿಭಿನ್ನ ಪಾತ್ರಗಳಲ್ಲಿ ನಟಿಸುವಂತಾಗಲಿ ಎಂದರು. ಸೆಂಟಿಮೆಂಟ್ ಚಿತ್ರಗಳಿಂದ ಶಿವಣ್ಣ ಹೊರಬರಲಿ ಎಂಬ ಭಾವ ಸುದೀಪ್ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications










