ರೆಡ್ಡಿ ಸಹೋದರರ ನಿರ್ಮಾಣದಲ್ಲಿ ಪುನೀತ್ ಚಿತ್ರ
ರೆಡ್ಡಿ ಸಹೋದರರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದಾರೆಯೇ? ಹೌದಾ. ಇದು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ ಓದುಗರು. ಈ ಸುದ್ದಿಯ ಜಾಡುಹಿಡಿದು ಹೊರಟರೆ ಇದು ಯಾರೋ ಹಾರಿಸಿದ ಗಾಳಿಪಟವಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಈ ಸುದ್ದಿಯನ್ನು ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಖಚಿತಪಡಿಸಿದ್ದಾರೆ. ರೆಡ್ಡಿ ಸಹೋದರರ ಚಿತ್ರದಲ್ಲಿ ನಟಿಸಲು ಪುನೀತ್ ಒಪ್ಪಿದ್ದಾರೆ. ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನೂ ಯಾವುದೂ ಅಂತಿಮವಾಗಿಲ್ಲ ಎಂದಿದ್ದಾರೆ.ಆದರೆ ರೆಡ್ಡಿ ಸಹೋದರರು ಮಾತ್ರ ತಮ್ಮ ಚಿತ್ರದ ಬಗ್ಗೆ ತುಟಿಪಿಟಕ್ಕೆಂದಿಲ್ಲ.
ಒಟ್ಟಿನಲ್ಲಿ ರಾಜ್ ಕುಟುಂಬಕ್ಕೆ ಬಳ್ಳಾರಿಯೊಂದಿಗೆ ಅನಾದಿಕಾಲದಿಂದಲೂ ಒಡನಾಡವಿದೆ. ಬಳ್ಳಾರಿ ಜತೆ ರಾಜ್ ಕುಟುಂಬಕ್ಕೆ ಆಪ್ತಸಂಬಂಧವಿದೆ. ಇತ್ತೀಚೆಗೆ ಪಾರ್ವತಮ್ಮ, ಪುನೀತ್, ಶಿವಣ್ಣ ಹಾಗೂ ರಾಘವೇಂದ್ರ ಬಳ್ಳಾರಿಯಲ್ಲಿ ಡಾ.ರಾಜ್ ಪುತ್ಥಳಿಯನ್ನು ಅನಾವರಣಗೊಳಿಸಿದ್ದನ್ನು ಸ್ಮರಿಸಬಹುದು.
ಈ ಹಿಂದೆ ಜನಾರ್ದನರೆಡ್ಡಿ ಕೂಡ ಪಾರ್ವತಮ್ಮ ಅವರ ಮನೆಗೆ ಭೇಟಿ ನೀಡಿದ್ದರು. ಬಳಿಕ ಅವರು ಇದು ಸೌಜನ್ಯದ ಭೇಟಿ ಎಂದು ಜಾಣತನ ಪ್ರದರ್ಶಿಸಿದ್ದರು. ಬಳ್ಳಾರಿ ಗಣಿ ಮಾಫಿಯಾದ ಬಗ್ಗೆ ಬೆಳಕು ಚೆಲ್ಲುವ 'ಪೃಥ್ವಿ' ಚಿತ್ರದಲ್ಲಿ ನಟಿಸಿದ್ದ ಪುನೀತ್ ಈಗ ಮತ್ತೊಬ್ಬ ಗಣಿ ಮಾಲೀಕರ ಚಿತ್ರದಲ್ಲಿ ನಟಿಸುತ್ತಿರುವುದು ಚಿತ್ರೋದ್ಯಮದಲ್ಲಿ ಅಚ್ಚರಿ ಮೂಡಿಸಿದೆ.


Click it and Unblock the Notifications











