ನಿತ್ಯಾನಂದ ಲೀಲಾ ವಿನೋದಗಳಲ್ಲಿ ರಮೇಶ್ ಅರವಿಂದ
ಸ್ವಾಮಿ ನಿತ್ಯಾನಂದ ಲೀಲಾ ವಿನೋದಗಳು ಗಾಂಧಿನಗರಕ್ಕೆ ಸ್ವಲ್ಪ ಉತ್ಸಾಹ ತಂದಂತಿದೆ. ಜಡತ್ವದಿಂದ ಮೈಕೊಡವಿಕೊಂಡಿರುವ ಗಾಂಧಿನಗರ ಇದೀಗ ನಿತ್ಯಾನಂದನ ಮತ್ತೊಂದು ಲೀಲೆಯನ್ನು ತೆರೆಗೆ ತರುವ ಸಿದ್ಧತೆಯಲ್ಲಿದೆ. ಸ್ವಾಮಿ ನಿತ್ಯಾನಂದನ ರಾಸಲೀಲೆ ಗಾಂಧಿನಗರದಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದೆ.
ಈಗಾಗಲೆ ಸಾಧುಕೋಕಿಲ 'ಸ್ವಾಮೀಜಿ' ಎಂಬ ಸಿನಿಮಾ ಮಾಡುತ್ತಿದ್ದಾರೆ. ಮಿಮಿಕ್ರಿ ದಯಾನಂದ್ ಸಹ 'ಕಾಮಿ ಸ್ವಾಮಿ' ಎಂಬ ವಿಡಿಯೋ ಸಿಡಿಯನ್ನು ಹೊರತಂದಿದ್ದಾರೆ. ಇದೀಗ ರಮೇಶ್ ಅರವಿಂದ್ ಸಹ ನಿತ್ಯಾನಂದನ ಪ್ರಭಾವಕ್ಕೆ ಒಳಗಾಗಿ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.
ಗಜೇಂದ್ರಚಾರ್ ಎಂಬುವವರು ಚಿತ್ರದ ನಿರ್ದೇಶಕರು. 'ಸಮಾಗಮ' ಚಿತ್ರವನ್ನು ನಿರ್ಮಿಸಿದ್ದ ಅಂದಾನಿ ಗೌಡ ನಿರ್ಮಾಪಕರು.ಚಿತ್ರದಲ್ಲಿ ರಮೇಶ್ ಅವರ ಪಾತ್ರಕ್ಕೆ ಕೊಂಚ ನೆಗಟೀವ್ ಶೇಡ್ಸ್ ಕೊಡಲಾಗಿದೆಯಂತೆ. 'ಅಮೃತವರ್ಷಿಣಿ' ಬಳಿಕ ರಮೇಶ್ ಅಭಿನಯಿಸುತ್ತಿರುವ ನೆಗಟೀವ್ ಪಾತ್ರ ಇದಾಗಲಿದೆ.
ಚಿತ್ರ ಜುಲೈ ತಿಂಗಳ ಮೊದಲವಾರದಲ್ಲಿ ಸೆಟ್ಟೇರಲಿದೆ. ಈ ಚಿತ್ರ ಕೇವಲ ನಿತ್ಯಾನಂದನ ಸುತ್ತ ಸುತ್ತದೆ ಸ್ವಾಮೀಜಿಗಳ ಶಕ್ತಿ ಸಾಮರ್ಥ್ಯಗಳ ಹಾಗೂ ಮಹಿಳೆಯರ ಬಗೆಗಿನ ಪ್ರೀತಿಯ ಬಗ್ಗೆ ಹೆಣೆಯಲಾಗಿದೆಯಂತೆ. ಸ್ವಾಮೀಜಿಯನ್ನು ಪ್ರೀತಿಸುವ ಅವರ ಸುತ್ತಲು ಇರುವ ಮಹಿಳೆಯರ ಬಗ್ಗೆ ಚಿತ್ರಕತೆ ಇರುತ್ತದೆ. ಒಂದು ರೀತಿ ಕಾಮಿಡಿ ಸ್ವಾಮೀಜಿ ಇದ್ದಂತೆ ಎನ್ನುತ್ತಾರೆ ರಮೇಶ್.
ಚಿತ್ರಕ್ಕಾಗಿ ಸೂಕ್ತ ಶೀರ್ಷಿಕೆಯ ಹುಡುಕಾಟ ನಡೆದಿದೆ. ಚಿತ್ರದ ತಾರಾಗಣ ಹಾಗೂ ತಾಂತ್ರಿಕ ಬಳಗದ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ. ಚಿತ್ರದ ನಾಯಕಿಗಾಗಿ ಹುಡುಕಾಟ ನಡೆದಿದೆ. ಆದರೆ ರಂಜಿತಾ ಮಾತ್ರ ಅಲ್ಲ ಎನ್ನುತ್ತಾರೆ ಗೀತ ಸಾಹಿತಿ ಹೃದಯಶಿವ. ಒಟ್ಟಿನಲ್ಲಿ ನಿತ್ಯಾನಂದನ ಮತ್ತೊಂದು ಮುಖ ತೆರೆಯ ಮೇಲೆ ಅನಾವರಣಗೊಳ್ಳಲಿದೆ.


Click it and Unblock the Notifications











