ಟೀವಿ ಸೀರಿಯಲ್ ಪ್ರಿಯರೇ;ನೋಡಿ ಕನ್ನಡ ರಾಮಾಯಣ!
ಆಗ ದೂರದರ್ಶನದಲ್ಲಿ ರಾಮಾಯಣ ಪ್ರಸಾರವಾಗುತ್ತಿದ್ದ ಕಾಲ. ಹಿಂದಿ ಒಂದಕ್ಷರ ಅರ್ಥವಾಗದಿದ್ದರೂ, ಟೀವಿ ಮುಂದೆ ಮಕ್ಕಳು, ಮಹಿಳೆಯರು ಸೇರಿದಂತೆ ಮನೆಮಂದಿ ಎಲ್ಲರೂ ಪ್ರತಿ ಭಾನುವಾರ ಭಕ್ತಿ ಶ್ರದ್ಧೆಗಳಿಂದ ಕೂರುತ್ತಿದ್ದರು. ಅದು ರಾಮಾಯಣದ ತಾಕತ್ತು. ಈ ನೆಲದ ಸಂಸ್ಕೃತಿ. ಆ ಸಂದರ್ಭದಲ್ಲಿ ಕನ್ನಡ ರಾಮಾಯಣ ಸಿಕ್ಕಿದ್ದರೆ ಚೆನ್ನಾಗಿತ್ತಲ್ಲ ಎಂದು ಬಹುತೇಕರಿಗೆ ಅನ್ನಿಸಿತ್ತು. ಆ ಅನಿಸಿಕೆಗೆ ಈಗ ಜೀವ ಬಂದಿದೆ.
ಆರ್ಎನ್ ಆರ್ ಪ್ರೊಡಕ್ಷನ್ಸ್ ಧಾರಾವಾಹಿ ನಿರ್ಮಾಣ ಮಾಡುತ್ತಿದೆ. ಆರ್. ಎನ್.ಜಯಗೋಪಾಲ್,ಡಾ.ಲಲಿತಾ ಜಯಗೋಪಾಲ್ ಮತ್ತು ರವಿ ಪ್ರಶಾಂತ್ ಧಾರಾವಾಹಿಯ ನಿರ್ದೇಶಕರು. ಉದಯ ಟೀವಿಯಲ್ಲಿ ಅ.21ರಿಂದ ರಾಮಾಯಣ ಮೂಡಿ ಬರಲಿದೆ. ಇದು ಈ ವಿಜಯದಶಮಿಗೆ ಉದಯ ನೀಡುತ್ತಿರುವ ಕೊಡುಗೆ.
ರಾಮನ ಪಾತ್ರದಲ್ಲಿ ಹರೀಶ್, ಸೀತೆ ಪಾತ್ರದಲ್ಲಿ ಅನುರಾಧ ವಿಕ್ರಾಂತ್,ದಶರಥನ ಪಾತ್ರದಲ್ಲಿ ಶಂಕರ್ ಅಶ್ವಥ್ ನಟಿಸುತ್ತಿದ್ದಾರೆ. 'ಪ್ರಚಂಡ ರಾವಣ' ಚಿತ್ರದಲ್ಲಿ ರಾಮನಾಗಿ ಅಭಿನಯಿಸಿದ್ದ ನಿತಿನ್, ಈ ಧಾರಾವಾಹಿಯಲ್ಲಿ ಭರತನ ಪಾತ್ರ ಮಾಡುವರು. ಹನುಮಂತನ ಪಾತ್ರಕ್ಕೆ ಹುಡುಕಾಟ ನಡೆದಿದೆ.
ಕೆಲವು ವರ್ಷಗಳ ಹಿಂದೆ ರಮಾನಂದ್ ಸಾಗರ್ ನಿರ್ದೇಶನದ ಹಿಂದಿ ರಾಮಾಯಣವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಆರ್ಎನ್ಆರ್ ಪ್ರಯತ್ನಿಸಿತ್ತು. ಡಾ.ರಾಜ್ ಕುಮಾರ್ ಮತ್ತು ಇತರೆ ಕನ್ನಡಾಭಿಮಾನಿಗಳು ಡಬ್ಬಿಂಗ್ ಧಾರಾವಾಹಿಯನ್ನು ವಿರೋಧಿಸಿದ್ದರು.
(ದಟ್ಸ್ ಕನ್ನಡ ಸಿನಿ ವಾರ್ತೆ)


Click it and Unblock the Notifications











