ನಗಲಾರದೆ...ಅಳಲಾರದೆ...ತೊಳಲಾಡಿದ ಚಿತ್ರರಂಗ!
ಈ ವರ್ಷ ಕನ್ನಡ ಚಿತ್ರೋದ್ಯಮದಲ್ಲಿ ಇದುವರೆಗೂ 129 ಚಿತ್ರಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ಕಾಳಿಗಿಂತ ಜೊಳ್ಳೇ ಜಾಸ್ತಿ ಎಂಬುದು ಸರ್ವ ವಿಧಿತ. ಮೈಲಾರಿ, ಸಂಜು ವೆಡ್ಸ್ ಗೀತಾ, ಬಾಸ್ ಮತ್ತು ಹುಲಿ ಚಿತ್ರಗಳು ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದು ಇನ್ನಷ್ಟೆ ಬಿಡುಗಡೆಯಾಗಬೇಕಾಗಿದೆ.
ಬಿಡುಗಡೆಯಾದ ಚಿತ್ರಗಳಲ್ಲಿ ಆಪ್ತರಕ್ಷಕ, ಜಾಕಿ, ಸೂಪರ್, ಪಂಚರಂಗಿ, ಎರಡನೆ ಮದುವೆ, ಕೃಷ್ಣನ್ ಲವ್ ಸ್ಟೋರಿ ಚಿತ್ರಗಳು ಪ್ರೇಕ್ಷಕರ ಮನಗೆದ್ದಿವೆ. ಹಾಗೆಯೇ ಬಾಕ್ಸಾಫೀಸ್ನಲ್ಲೂ ಸದ್ದು ಮಾಡಿದ ಚಿತ್ರಗಳಿವು. ಮತ್ತೆ ಮುಂಗಾರು, ಸುಗ್ರೀವ, ತಮಸ್ಸು ಚಿತ್ರಗಳಿಗೆ ಉತ್ತಮ ವಿಮರ್ಶೆ ವ್ಯಕ್ತವಾದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದವು.
ಪೃಥ್ವಿ, ಲಿಫ್ಟ್ ಕೊಡ್ಲಾ ಚಿತ್ರಗಳು ಉತ್ತಮ ವಿಮರ್ಶೆಗೆ ಪಾತ್ರವಾದವು. ಶಶಾಂಕ್, ಯೋಗರಾಜ್ ಭಟ್, ಪಿ ವಾಸು, ಉಪೇಂದ್ರ ಮತ್ತೆ ಈ ವರ್ಷ ಗಮನಸೆಳೆದ ನಿರ್ದೇಶಕರು. ಪ್ರಕಾಶ್ ರೈ ನಿರ್ದೇಶಿಸಿದ 'ನಾನು ನನ್ನ ಕನಸು' ಚಿತ್ರ ಪ್ರೇಕ್ಷಕರನ್ನು ಆಕರ್ಷಿಸಿದರೂ ಬಾಕ್ಸಾಫೀಸಲ್ಲಿ ಯಶಸ್ವಿಯಾಗಲಿಲ್ಲ. [ಹೆಚ್ಚಿನ ಚಿತ್ರವಿಮರ್ಶೆಗಳು]
ಗೆಲುವಿನ ಕುದುರೆ ಏರುತ್ತವೆ ಎಂದು ತಿಳಿದಿದ್ದ ಪ್ರೇಮಿಸಂ, ಉಲ್ಲಾಸ ಉತ್ಸಾಹ, ಜೊತೆಗಾರ, ಸೂರ್ಯಕಾಂತಿ, ಸ್ಕೂಲ್ ಮಾಸ್ಟರ್, ಪೊಲೀಸ್ ಕ್ವಾಟ್ರಸ್ ಹೇಳಹೆಸರಿಲ್ಲದಂತಾವು. 'ಕ್ರೇಜಿ ಕುಟುಂಬ'ದಂತಹ ಚಿತ್ರಗಳು ಬಹಳಷ್ಟು ಬಂದರೂ ಪ್ರೇಕ್ಷಕರ ಮುಖದಲ್ಲಿ ನಗೆ ಅರಳಿಸುವಲ್ಲಿ ವಿಫಲವಾಗಿದ್ದು ದುರಂತ.
ಒಟ್ಟಾರೆಯಾಗಿ ಕನ್ನಡ ಚಿತ್ರರಂಗ ನಗಲಾರದೆ...ಅಳಲಾಗದೆ...ತೊಳಲಾಡಿದೆ. ಕೆಲವು ಚಿತ್ರಗಳಿಗೆ ಗುರುಬಲ ಚೆನ್ನಾಗಿದ್ದರೆ, ಕೆಲವಕ್ಕೆ ರಾಹು ಕೇತುಗಳ ಕಾಟ, ಮತ್ತೆ ಕೆಲವಕ್ಕೆ ಶನಿದೆಸೆ, ಶುಕ್ರದೆಸೆಗಳು ಎದುರಿಸಿದವು. ಇಲ್ಲಿ ಕೊಟ್ಟಿರುವ ವಿವರಗಳನ್ನು ಓದುಗರು ಸಮಗ್ರ ಚಿತ್ರಣ ಎಂದು ಭಾವಿಸದೆ ಈ ವರ್ಷ ತೆರೆಕಂಡ ಕನ್ನಡ ಚಿತ್ರಗಳ ಮೇಲೆಂದು ಕುಡಿ ನೋಟ ಎಂದಷ್ಟೆ ಭಾವಿಸಬೇಕು.


Click it and Unblock the Notifications











