ಸೋಲಿನ ಪರಾಮರ್ಶೆಯಲ್ಲಿ ಪೂಜಾಗಾಂಧಿ
ಮೋಹಕ ತಾರೆ 'ಪೂಜಾಗಾಂಧಿ' ಕನ್ನಡ ಚಿತ್ರರಂಗದಿಂದ ಕೆಲಕಾಲ ದೂರವಾಗಲಿದ್ದಾರೆ. ಸ್ವಯಂ ಘೋಷಿತ ಬಿಡುವು ಘೋಷಿಸಿಕೊಂಡಿರುವ ಪೂಜಾಗಾಂಧಿ ಕೆಲದಿನಗಳ ಮಟ್ಟಿಗೆ ವಿಶ್ರಾಂತಿ ಪಡೆಯಲಿದ್ದಾರೆ. 2006ರಲ್ಲಿ 'ಮುಂಗಾರು ಮಳೆ' ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ಪೂಜಾಗಾಂಧಿ ಖಾತೆಗೆ ಇದುವರೆಗೂ 25 ಚಿತ್ರಗಳು ಜಮೆಯಾಗಿವೆ.
2009ನೇ ವರ್ಷ ಪೂಜಾಗಾಂಧಿ ಪಾಲಿಗೆ ಕರಾಳ ವರ್ಷ ಎನ್ನಬಹುದು. ಆಕೆ ನಟಿಸಿದ 'ಅನು', 'ಹುಚ್ಚಿ', 'ಕಾದಿರುವೆ ನಿನಗಾಗಿ', 'ಇನಿಯಾ' ಚಿತ್ರಗಳು ಬಾಕ್ಸಾಫೀಸಲ್ಲಿ ಮಕಾಡೆ ಮಲಗಿ ಪೂಜಾಗಾಂಧಿ ವರ್ಚಸ್ಸನ್ನು ಕುಗ್ಗಿಸಿದವು. 2010ರಲ್ಲಿ ತೆರೆಕಂಡ 'ಮಿನುಗು' ಆರಂಭದಲ್ಲೇ ಮುಗ್ಗರಿಸಿ ಪೂಜಾಗಾಂಧಿ ಪಾಲಿಗೆ ನುಂಗಲಾದ ತುತ್ತಾಗಿ ಪರಿಣಮಿಸಿತು.
ಈ ಎಲ್ಲಾ ಕಾರಣಗಳಿಗಾಗಿ ಪೂಜಾಗಾಂಧಿ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ತಂಗಿ ರಾಧಿಕಾ ಗಾಂಧಿ ಜತೆ ಅಭಿನಯದ 'ಶ್ರೀ ಹರಿಕಥೆ' ಹಾಗೂ ಕಣ್ಣೀರಧಾರೆಯ ಚಿತ್ರ 'ತವರಿನ ಋಣ' ಬಿಡುಗಡೆಗಾಗಿ ಕಾದಿವೆ. 2009ನೇ ವರ್ಷ ಕಲಿಸಿದ ಸೋಲಿನ ಪಾಠವನ್ನು ಪೂಜಾಗಾಂಧಿ ಪರಾರ್ಮರ್ಶೆ ಮಾಡಿಕೊಳ್ಳುತ್ತಿದ್ದಾರೆ.
ತಾವು ನಟಿಸಿದ ಸಾಲು ಸಾಲು ಚಿತ್ರಗಳ ಸೋಲಿಗೆ ಕಾರಣ ಹುಡುಕುವ ಪ್ರಯತ್ನದಲ್ಲಿ ಪೂಜಾಗಾಂಧಿ ಇದ್ದಾರೆ. ಹಾಗಾಗಿ ಕೊಂಚ ವಿರಾಮ ತೆಗೆದುಕೊಂಡು ಪುನಃ ಬೆಳ್ಳಿತೆರೆಗೆ ಬರುವ ಆಲೋಚನೆ ಅವರದು. ಏನೇ ಆಗಲಿ ಪೂಜಾಗಾಂಧಿ ಮತ್ತೆ ಬೆಳ್ಳಿತೆರೆಗೆ ಶೀಘ್ರ ಹಿಂತಿರುಗಲಿ ಎಂದು ಆಶಿಸೋಣ.


Click it and Unblock the Notifications











