'ರಾಜ್' ಟಿಕೆಟ್ ಗಾಗಿ ರಾಘು ಹಿಂದೆ ಬಿದ್ದ ಪ್ರೇಕ್ಷಕ!
ಬಹುನಿರೀಕ್ಷಿತ 'ರಾಜ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದೆ. ಆಗಸ್ಟ್ 14 ರಂದು ಈ ಚಿತ್ರ ತೆರೆಕಾಣಲಿದ್ದು, ವಿಶ್ವದ 13 ದೇಶಗಳಲ್ಲಿ ಏಕಕಾಲದಲ್ಲಿ ನಿರ್ದೇಶಕ ಪ್ರೇಮ್ ಬಿಡುಗಡೆ ಮಾಡುತ್ತಿದ್ದಾರೆ. ಅದಲ್ಲದೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲಬಾರಿ ಬೆಂಗಳೂರಿನ 50 ಚಿತ್ರಮಂದಿರಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.
ಸುಮಾರು ರು.10 ಕೋಟಿಯಲ್ಲಿ ನಿರ್ಮಿಸಿರುವ ಚಿತ್ರ ಎಂಬ ಹೆಗ್ಗಳಿಕೆಗೆ ರಾಜ್ ಚಿತ್ರ ಪಾತ್ರವಾಗಿದೆ. ನಟ ರಾಘವೇಂದ್ರ ರಾಜ್ ಕುಮಾರ್ ಮಾತನಾಡುತ್ತಾ, ನಾನು ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತೇನೆ. ಅಲ್ಲಿಗೆ ಬರುವ ಭಕ್ತರು ರಾಜ್ ಚಿತ್ರದ ಟಿಕೆಟ್ ಕೊಡಿಸುವಂತೆ ದುಂಬಾಲು ಬೀಳುತ್ತಾರೆ. ಇತ್ತೀಚೆಗೆ ರೈಲಿನಲ್ಲಿ ಹುಬ್ಬಳಿಗೆ ಹೋಗಿದ್ದೆ. ಬಹಳಷ್ಟು ರೈಲ್ವೆ ಸಿಬ್ಬಂದಿ ಮೊದಲ ದಿನವೇ ಟಿಕೆಟ್ ಕೊಡಿಸುವಂತೆ ಕೇಳಿದರು ಎಂದರು.
''ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅರಬ್ ದೇಶಗಳು, ಮಲೇಶಿಯಾ, ವೆಸ್ಟ್ ಇಂಡೀಸ್ ಸೇರಿದಂತೆ ಒಟ್ಟು 13 ದೇಶಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ದೆಹಲಿಯಲ್ಲಿ ಕೂಡ ಚಿತ್ರ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಲಾಂಗ್ ಮಚ್ಚು ಗಳ ದೃಶ್ಯಗಳು ಇರುವುದರಿಂದ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದೆ. ಬೆಂಗಳೂರು ನಗರದ ಚಿತ್ರಮಂದಿರಗಳಲ್ಲಿ ಆಗಸ್ಟ್ 11 ರಂದ ಮುಂಗಡ ಬುಕ್ಕಿಂಗ್ ಆರಂಭವಾಗಿದೆ'' ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
''ಸಂತೋಷ್, ನರ್ತಕಿ ಮತ್ತು ಸಪ್ನ ಚಿತ್ರಮಂದಿಗಳ ಬಳಿ 58 ಅಡಿ ಎತ್ತರದ ರಾಜ್ ಪ್ರತಿಮೆ ನಿಲ್ಲಿಸಿದ್ದೇವೆ. ಈ ಪ್ರತಿಮೆಯನ್ನು ಯಾಕೆ ನಿಲ್ಲಿಸಿದ್ದೇವೆ ಎಂಬುದು ರಾಜ್ ಚಿತ್ರ ನೋಡಿದ ಬಳಿಕ ಪ್ರೇಕ್ಷಕರಿಗೇ ಅರ್ಥವಾಗುತ್ತದೆ ''ಎನ್ನುತ್ತಾರೆ ನಿರ್ದೇಶಕ ಪ್ರೇಮ್. ಇದೇ ರೀತಿಯ ಪ್ರೊತ್ಸಾಹ ಎಲ್ಲಾ ಕನ್ನಡ ಚಿತ್ರಗಳಿಗೂ ದೊರೆಯಬೇಕು. ಪರಭಾಷಾ ಚಿತ್ರಗಳ ಮುಂದೆ ಕನ್ನಡ ಚಿತ್ರಗಳು ಸ್ಪರ್ಧಿಸಿಬೇಕು ಎನ್ನುತ್ತಾರೆ ಪ್ರೇಮ್.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











