ಕನ್ನಡ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ: ಪ್ರಕಾಶ್ ರೈ
ಪ್ರಶಸ್ತಿ ವಿಜೇತ ಹಾಗೂ ಕನ್ನಡ ಚಿತ್ರಗಳನ್ನು ನೋಡುವಂತೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈ ಇಂದು ಬೆಂಗಳೂರಿನಲ್ಲಿ ಮನವಿ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಮಾತನಾಡುತ್ತಿದ್ದರು. ಅಭಿಮಾನಿಗಳಿಂದ ಮಾತ್ರ ಕನ್ನಡ ಚಿತ್ರರಂಗದ ಉಳಿವು ಸಾಧ್ಯ ಎಂದು ಪ್ರಕಾಶ್ ರೈ ಅಭಿಪ್ರಾಯಪಟ್ಟರು.
'ಗುಲಾಬಿ ಟಾಕೀಸ್' ಚಿತ್ರದಲ್ಲಿನ ನಟನೆಗಾಗಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದ ಉಮಾಶ್ರೀ ಅವರು ಮಾತನಾಡುತ್ತಾ, ರಾಷ್ಟ್ರ ಪ್ರಶಸ್ತಿ ನನಗೆ ಖುಷಿ ಕೊಟ್ಟಿದೆ. ಇನ್ನೂ ಮಾಡಬೇಕಾದಂತಹ ಪಾತ್ರಗಳು ಸಾಕಷ್ಟಿವೆ. ಪ್ರಕಾಶ್ ನನಗಿಂತಲೂ ಉತ್ತಮ ನಟ. ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಅವರು ನನಗಿಂತಲೂ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದು ಪ್ರಕಾಶ್ ರೈ ಅವರನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ 'ಗುಲಾಬಿ ಟಾಕೀಸ್' ಚಿತ್ರತಂಡವನ್ನುಕೆಎಫ್ ಸಿಸಿ ಸನ್ಮಾನಿಸಿತು. ಗುಲಾಬಿ ಟಾಕೀಸ್ ಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಚಿತ್ರೋದ್ಯಮದಲ್ಲಿ ಕಲಾತ್ಮಕ ಮತ್ತು ಕಮರ್ಷಿಯಲ್ ಚಿತ್ರಗಳೆಂದು ಗುರುತಿಸುವುದನ್ನು ಬಿಡಬೇಕು. ಕಲಾತ್ಮಕ ಚಿತ್ರಗಳಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಕನ್ನಡ ಚಿತ್ರಗಳನ್ನು ಮತ್ತಷ್ಟು ಜನಪ್ರಿಯವಗಿಸಲು ವಾಣಿಜ್ಯ ಮಂಡಳಿ ಇನ್ನೂ ಮುಂದೆ ಬರಬೇಕು ಎಂದು ಪ್ರಕಾಶ್ ರೈ ಈ ಸಂದರ್ಭದಲ್ಲಿವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಕೆಎಫ್ ಸಿಸಿ ಅಧ್ಯಕ್ಷೆ ಡಾ.ಜಯಮಾಲಾ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ, ಮಾಜಿ ಕೆಎಫ್ ಸಿಸಿ ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ, ನಟಿ ತಾರಾ, ನಿರ್ಮಾಪಕರಾದ ಕೆಸಿಎನ್ ಚಂದ್ರಶೇಖರ್, ರಾಕ್ ಲೈನ್ ವೆಂಕಟೇಕ್ ಮುಂತಾದ ಗಣ್ಯರು ವಾಣಿಜ್ಯ ಮಂಡಳಿಯ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











