ಎನ್ಕೌಂಟರ್ ಸಿನಿಮಾಗಳು ಬಂದಿವೆ!
ಮತ್ತೆರಡು ಖಾಕಿ ಚಿತ್ರಗಳ ನೋಡುವ ಸೌಭಾಗ್ಯ ಕನ್ನಡ ಚಿತ್ರರಸಿಕರಿಗೆ ಸಿಕ್ಕಿದೆ. ಬಹು ನಿರೀಕ್ಷೆಯ ದೊಡ್ಡ ಬಜೆಟ್ನ 'ಎನ್ಕೌಂಟರ್ ದಯಾನಾಯಕ್" ಮತ್ತು ಸ್ಲಿಮ್ ದರ್ಶನ್ ನಟಿಸಿರುವ 'ಅಯ್ಯ" ಚಿತ್ರಗಳು ಪ್ರೇಕ್ಷಕರ ಮುಂದಿವೆ. ಶುಕ್ರವಾರವೇ(ಫೆ.11) ತೆರೆಕಾಣಬೇಕಿದ್ದ 'ಜೂಟಾಟ" ಚಿತ್ರಕ್ಕೆ ಚಿತ್ರಿಮಂದಿರ ಸಿಕ್ಕಿಲ್ಲ.
ಸಾಂಗ್ಲಿಯಾನ, ಐಪಿಎಸ್ ಕೆಂಪಯ್ಯ, ಹೆಸರಿನ ಚಿತ್ರಗಳು ತೆರೆಕಂಡ ನಂತರ ಈಗ ದಯಾನಾಯಕ್ ರೀಲುಗಳಲ್ಲಿ ಸೇರಿದ್ದಾರೆ. ಎನ್ಕೌಂಟರ್ ಮೂಲಕವೇ ತನ್ನ ದಕ್ಷತೆ ನಿರೂಪಿಸಿರುವ ದಯಾನಾಯಕ್ರ ಬದುಕು ಚಿತ್ರಕ್ಕೆ ಸ್ಫೂರ್ತಿ ನೀಡಿದೆ. ವಿಲನ್ ಪಾತ್ರಗಳಲ್ಲಿ ಈ ಹಿಂದೆ ಕಾಣಿಸಿದ್ದ ಸಚಿನ್ಗೆ ಈ ಚಿತ್ರದಲ್ಲಿ ಹೀರೋ ಆಗಿ ಬಡ್ತಿ ಸಿಕ್ಕಿದೆ.
ಮುಂಬೈನ ದೊಡ್ಡ ಬಳಗವೇ ಚಿತ್ರದಲ್ಲಿದೆ. ಐಟಂ ಹುಡುಗಿಯರಾದ ಡೈಸಿ, ಅಂತರಾ ಬಿಸ್ವಾಸ್, ನಟ ದೀಪಕ್ ಶಿರ್ಕೆ, ಕೌಶಲ್, ಮಂಜ್ರೇಕರ್ ಮತ್ತಿತರರ ದಂಡು ಚಿತ್ರದಲ್ಲಿದೆ. ಅನಂತನಾಗ್ ಆ್ಯಕ್ಷನ್ ಪಾತ್ರದಲ್ಲಿ ನಟಿಸಿರುವುದು ಚಿತ್ರದ ವಿಶೇಷ.
ಖಾಕಿ ದರ್ಶನ್ : 'ಕಲಾಸಿಪಾಳ್ಯ" ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ದರ್ಶನ್, ರಕ್ಷಿತಾ, ಓಂಪ್ರಕಾಶ್ ಸಮ್ಮಿಲನದ "ಅಯ್ಯ" ತೆರೆಕಂಡಿದೆ. ಇದು ಮತ್ತೊಂದು ಕಲಾಸಿಪಾಳ್ಯ ಆಗಲಿ ಎನ್ನುವ ಕನಸು ಈ ಮೂವರದು.
ಕತ್ತಿ-ಲಾಂಗ್ ಹಿಡಿದು ರೌಡಿ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ದರ್ಶನ್ ಈ ಚಿತ್ರದಲ್ಲಿ ಗನ್ ಹಿಡಿದಿದ್ದಾರೆ. ಮೊದಲ ಸಲ ಖಾಕಿ ಧರಿಸಿ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ಕೆಟ್ಟ ಪಾತ್ರಗಳ ಪಕ್ಕಕ್ಕಿಟ್ಟು ಅವರು ಹಿಂದೆ ನಟಿಸಿದ್ದ 'ನಮ್ಮ ಪ್ರೀತಿಯ ರಾಮು" ಎನ್ನುವ ಸಭ್ಯ ಚಿತ್ರತೋಪಾಗಿತ್ತು.
ಅಯ್ಯ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುವರು ಎಂಬ ಕುತೂಹಲ ಗಾಂಧಿನಗರದಲ್ಲಿದೆ. ಚಿತ್ರ ಗೆದ್ದರೆ ಪ್ರಭಾಕರ್, ಅಂಬರೀಷ್, ದೇವರಾಜ್, ಸಾಯಿಕುಮಾರ್ರಂತೆ ದರ್ಶನ್ ಖಾಕಿ ಪಾತ್ರಗಳ ಮುಂದುವರೆಸಿದರೆ ಅಚ್ಚರಿಯೇನಿಲ್ಲ.
ಎಲ್ಲದರ ನಡುವೆ ಹೊಸ ಚಿತ್ರಗಳಾದ ಶಾಸ್ತ್ರಿ ಹಾಗೂ ಮುತ್ತಪ್ಪರೈಗೆ ದರ್ಶನ್ ಸಜ್ಜಾಗಿದ್ದಾರೆ.


Click it and Unblock the Notifications











