ಸುದ್ದಿಗೋಷ್ಠಿಗಳಲ್ಲಿ ಒಣಹವೆಗೆ ಕ್ಷಣಗಣನೆ

ಕನ್ನಡ ಚಿತ್ರಗಳು ಮೇಲಿಂದ ಮೇಲೆ ಢುಂಕಿ ಹೊಡೆಯುತ್ತಿರುವುದರಿಂದ ನಿರ್ಮಾಪಕರು ತತ್ತರಿಸಿದ್ದಾರೆ. ವಿಶೇಷವಾಗಿ 2008 ನೇ ಸಾಲಿನಲ್ಲಿ ಬಿಡುಗಡೆಯಾದ 110 ಚಿತ್ರಗಳ ಪೈಕಿ 80 ರಿಂದ 90 ಚಿತ್ರಗಳು ಡ್ರೈಕ್ಲೀನ್ ಆಗಿರುವುದರಿಂದ ವೃಥಾ ಹಣ ಪೋಲು ಮಾಡುವುದು ನಿರ್ಮಾಪಕರ ಸಂತತಿಗೆ ಕ್ಷೇಮವಲ್ಲ ಎಂದು ನಂಬಲಾಗಿದೆ. ಈ ನಂಬಿಕೆಯನ್ನು ಹುಟ್ಟು ಹಾಕಿದವರು ಮಾಜಿ ನಿರ್ಮಾಪಕ ಮತ್ತು ಕನ್ನಡ ಚಲನಚಿತ್ರರಂಗದ ಧುರೀಣ ಕೆಸಿಎನ್ ಚಂದ್ರಶೇಖರ್.
ಇನ್ನು ಮೇಲೆ ಏನಿದ್ದರೂ ಸಿನಿಮಾ ಕಾರ್ಯಕ್ರಮಗಳನ್ನು ಬೆಳಗ್ಗೆ ಇಡ್ಲಿ ಸಾಂಬಾರ್ ಜತೆ ಅಥವಾ ಮಧ್ಯಾನ್ಹ ಜನತಾ ಮೀಲ್ಸ್ ಜತೆ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ. ಸಂಜೆವೇಳೆ ಆರಂಭವಾಗಿ ರಾತ್ರಿ 12 ಗಂಟೆಯವರೆಗೆ ಸಾಗುವ, ಕುಳಿತು ಮಾತಾಡುವ ಮಾಧ್ಯಮಗೋಷ್ಠಿಗಳಿಗೆ ಕಣ್ಣು ಕೋರೈಸುವ ಬೆಳಕಿನ ವ್ಯವಸ್ಥೆ, ಪಾನ ಸರಬರಾಜು, ಸಭಾಂಗಣಗಳ ದುಬಾರಿ ಫೀಸು ಮತ್ತಿತರ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಬಹುದು ಎಂಬುದು ಲೆಕ್ಕಾಚಾರ.
ಒಂದು ಆಡಿಯೋ ಕ್ಯಾಸೆಟ್ ಬಿಡುಗಡೆ ಸಮಾರಂಭಕ್ಕೆ ಏನಿಲ್ಲವೆಂದರೂ 1 ಲಕ್ಷರೂಪಾಯಿವರೆಗೆ ವೆಚ್ಚ ಮಾಡಿದ ನಿರ್ಮಾಪಕರಿದ್ದಾರೆ. ನೂತನ ಆದೇಶವು In word and spirit ಜಾರಿಗೆ ಬಂದದ್ದೇ ಆದಲ್ಲಿ ನಿರ್ಮಾಪಕನಿಗೆ ಹಣ ಮಿಗಿತಾಯವೇನೋ ಆಗುತ್ತದೆ, ಆದರೆ ನಾನಾ ಮಾಧ್ಯಮಗಳ ಮೂಲಕ ದಕ್ಕುವ 20 ಲಕ್ಷರೂಪಾಯಿಯಷ್ಟು ಬೆಲೆ ಕಟ್ಟಬಹುದಾದ ಪ್ರಚಾರ ಸಿಗುವುದಿಲ್ಲ ಎಂದು
ಚಾಲ್ತಿಯಲ್ಲಿರುವ, ಹೆಸರುಹೇಳಲು ಇಚ್ಛಿಸಿದ ನಿರ್ಮಾಪಕರೊಬ್ಬರು ದಟ್ಸ್ ದನ್ನಡಕ್ಕೆ ತಿಳಿಸಿದರು.
ಇದೇ ವೇಳೆ, 'ಡಬ್ಬಿಂಗ್ ಮುಗಿದಿದೆ, ಚಿತ್ರ ಚೆನ್ನಾಗಿ ಮೂಡಿಬಂದಿದೆ' ಎಂದು ಅರಹುವುದಕ್ಕೆ ಕರೆಯಲಾಗುವ ಪ್ರೆಸ್ ಕಾನ್ಫರೆನ್ಸ್ ಕರೆಯುವುದಕ್ಕೆ ಅಬ್ಬಬ್ಬಾ ಎಂದರೆ 2,000 ರೂಪಾಯಿ ಸಾಕು ಎಂದು ಚಿತ್ರ ಮಾಧ್ಯಮ ಸಂಪರ್ಕ ಕ್ಷೇತ್ರದಲ್ಲಿ ಪಳಗಿದ ಪಿಆರ್ ಒ ಒಬ್ಬರು ಅಭಿಪ್ರಾಯಪಟ್ಟರು.
ಜನವರಿ 12 ಸೋಮವಾರ ಸಂಜೆ ನಟ ನಿರ್ದೇಶಕ ರಮೇಶ್ ಕ್ರಿಕೆಟ್ ಕ್ಲಬ್ಬಿನಲ್ಲಿ ಒಂದು ಸುಂದರ ಸಂಜೆ ಏರ್ಪಾಟುಮಾಡಿದ್ದರು. ವೆಂಕಟ ಇನ್ ಸಂಕಟ ಚಿತ್ರದ ಶೂಟಿಂಗು ತಮ್ಮ ತಂಡ ಅಂದುಕೊಂಡಂತೆಯೇ, ಅಚ್ಚುಕಟ್ಟಾಗಿ, ಜಗಳ ಕದನ ಇಲ್ಲದೆ ಮುಗಿದಿದೆ. ಆ ಆನಂದವನ್ನು ಹಂಚಿ ತಿಂದು ಕುಡಿಯಲು ಸಮಾರಂಭ ಆಯೋಜಿಸಿದ್ದರು. ಇಂದು ಮಂಗಳವಾರ, ನಾಳೆ ಬುಧವಾರ. ಈ ಎರಡು ದಿನಗಳ ಸಂಜೆ ಸಮಯದಲ್ಲಿ ಯಾವುದೇ ಸಂಜೆ ಪಾರ್ಟಿ ಇನ್ನೂ ನಿಷ್ಕರ್ಷ ಆಗಿಲ್ಲದಿರುವುದರಿಂದ ವೆಂಕಟ ಇನ್ ಸಂಕಟ ಚಿತ್ರದ ಸೋಮವಾರದ ಸಂಜೆ ಸಮಾರಂಭವು ಮಾಧ್ಯಮ ಪಾನಗೋಷ್ಠಿಗಳಿಗೆ Last Supper ಆಗುವುದರಲ್ಲಿ ಎರಡು ಮಾತಿಲ್ಲ.
( ದಟ್ಸ್ ಕನ್ನಡ ಚಿತ್ರವಾರ್ತೆ)
ಘಾ ನಿರ್ಮಾಪಕರಿಗೆ ಗುಂಡು ಪಾರ್ಟಿ ನಿಷೇಧ!


Click it and Unblock the Notifications











