ನಿರ್ಮಾಪಕರಿಗೆ ಭರವಸೆ ಕೊಟ್ಟ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಲಿರುವ ಸದ್ಯದ ಚಿತ್ರ 'ಅಂದರ್ ಬಾಹರ್'. ಮೊನ್ನೆ ತಾನೇ ಮುಹೂರ್ತ ಮುಗಿಸಿಕೊಂಡು ಶೂಟಿಂಗ್ ನಡೆಸುತ್ತಿರುವ ಅಂದರ್ ಬಾಹರ್ ಚಿತ್ರತಂಡ, ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇದಕ್ಕೂ ಮೊದಲು ಶಿವಣ್ಣ, 'ಲಕ್ಷ್ಮೀ' ಚಿತ್ರ ಮುಗಿಸಬೇಕಿತ್ತು. ಆದರೆ ಅದು ಆರ್ಥಿಕ ಮುಗ್ಗಟ್ಟಿನಿಂದ ಅರ್ಧಕ್ಕೇ ನಿಂತುಹೋಗಿದೆ.
ಹಾಗಾಗಿ, ಇದೀಗ ಶಿವಣ್ಣ ಅಂದರ್ ಬಾಹರ್ ಪ್ರಾರಂಭಿಸಿದ್ದಾರೆ. ಅದರ ಬಗ್ಗೆ ಕೆಲವು ನಿರ್ಮಾಪಕರಲ್ಲಿ ಸಹಜವಾಗಿ ಗೊಂದಲವೆದ್ದಿತ್ತು. ಹಾಗಾಗಿ ಶಿವಣ್ಣ ಈ ಕುರಿತು "ಲಕ್ಷ್ಮೀ ಚಿತ್ರದ ಶೂಟಿಂಗ್ ಮುಂದುವರಿದಿಲ್ಲ. ಹಾಗಾಗಿ ಅಂದರ್ ಬಾಹರ್ ಪ್ರಾರಂಭಿಸಿದ್ದೇನೆ. ನಾನು ಒಮ್ಮೆ ಒಂದೇ ಚಿತ್ರವನ್ನು ಒಪ್ಪೊಕೊಳ್ಳುವುದು. ಅದು ಮುಗಿದಮೇಲೆಯೇ ಮತ್ತೊಂದು" ಎಂದಿದ್ದಾರೆ.
"ನನ್ನ ಚಿತ್ರದ ಎಲ್ಲಾ ನಿರ್ಮಾಪಕರು ತಮ್ಮ ಚಿತ್ರವೇ ಮೊದಲು ಆಗಬೇಕೆಂದು ಬಯಸುತ್ತಾರೆ. ಅವರು ಹೀಗೆ ಒತ್ತಡ ಹೇರಿದರೆ ನನಗೆಲ್ಲೋ ವಯಸ್ಸಾಗುತ್ತಿದೆ ಎಂಬ ಅನುಮಾನ ಕಾಡುತ್ತದೆ. ದಯವಿಟ್ಟು ಅದಕ್ಕೆ ಅವಕಾಶ ಕೊಡಬೇಡಿ. ನಾನು ಒಪ್ಪಿಕೊಂಡಂತೆ ಒಂದಾದಮೇಲೊಂದರಂತೆ ಚಿತ್ರವನ್ನು ಮುಗಿಸಿಕೊಡುತ್ತೇನೆ" ಎಂದು ಭರವಸೆ ನೀಡಿದ್ದಾರೆ. ಇನ್ನಾದರೂ ಶಿವಣ್ಣನ ಚಿತ್ರನಿರ್ಮಾಪಕರು ಅವರ ಚಿತ್ರವೇ ಮೊದಲು ಎಂದು ಹೇಳುವುದನ್ನು ನಿಲ್ಲಿಸಬಹುದೇ? (ಒನ್ ಇಂಡಿಯಾ ಕನ್ನಡ)


Click it and Unblock the Notifications











