ನೆರೆ ಸಂತ್ರಸ್ತರಿಗೆ ನೆರವು ಕೇವಲ ವದಂತಿ: ರಜನಿ
ಕರ್ನಾಟಕ ನೆರೆ ಸಂತ್ರಸ್ತರಿಗೆ ಸಹಾಯ ಮಾಡುತ್ತೇನೆ ಎಂದು ರಜನಿಕಾಂತ್ ಎಲ್ಲೂ ಹೇಳಿಲ್ಲ. ಅವರು ಸಹಾಯ ಮಾಡುವುದಾಗಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿ ಸುಳ್ಳು ಎಂದು ರಜನಿಕಾಂತ್ ಅವರ ಚೆನ್ನೈ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ. ಇದೊಂದು ಕೇವಲ ವದಂತಿ ಅಷ್ಟೇ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ನೆರೆ ಪೀಡಿತ 25 ಗ್ರಾಮಗಳನ್ನು ರಜನಿಕಾಂತ್ ದತ್ತು ತೆಗೆದುಕೊಳ್ಳಲಿದ್ದಾರೆ ಎಂಬ ವರದಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಉತ್ತರ ಕರ್ನಾಟಕದ ನೆರೆ ಪೀಡಿತ ಗ್ರಾಮಗಳಿಗೆ ರಜನಿ ಸಹಾಯ ಹಸ್ತ ಚಾಚಲಿದ್ದಾರೆ ಎಂದು ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿವರ ನೀಡಿದ್ದರು. ಆದರೆ ಇದೆಲ್ಲಾ ಕೇವಲ ವದಂತಿ ಅಷ್ಟೇ ಎಂದು ರಜನಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.
ಈ ಬಗ್ಗೆ ರಜನಿಕಾಂತ್ ತಕ್ಷಣಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಚೆನ್ನೈನ ಅವರ ಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ಬಗ್ಗೆ ನಮಗೇನು ಗೊತ್ತಿಲ್ಲ. ಹಾಗೇನಾದರೂ ಇದ್ದರೆ ಸ್ವತಃ ರಜನಿಕಾಂತ್ ಅವರೇ ಪತ್ರಿಕಾಗೋಷ್ಠಿ ಕರೆದು ಈ ವಿಷಯ ತಿಳಿಸಲಿದ್ದಾರೆ ಎಂದು ಹೇಳಿದ್ದರು.
ಇದೀಗ ರಜನಿಕಾಂತ್ ಅವರ ಚೆನ್ನೈ ಕಚೇರಿಯ ಸಹಾಯಕ ಸುಧಾಕರ್ ಈ ಕುರಿತು ಮಾತನಾಡುತ್ತಾ, ರಜನಿ ಅವರ ಮನಸ್ಸಿನಲ್ಲಿ ಆ ರೀತಿಯ ಆಲೋಚನೆ ಏನೂ ಇಲ್ಲ. ನೆರೆ ಸಂತ್ರಸ್ತಿರಿಗೆ ರಜನಿ ಸಹಾಯ ಮಾಡುತ್ತ್ತಾರೆ ಎಂಬ ವದಂತಿಯನ್ನು ಯಾರೋ ಹಬ್ಬಿಸಿದ್ದಾರೆ ಅಷ್ಟೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











