'ಸಿಹಿ ಮುತ್ತು' ಚಿತ್ರದ ಐಟಂ ಸಾಂಗ್ ನಲ್ಲಿ ದರ್ಶನ್
'ಸಿಹಿ ಮುತ್ತು' ಚಿತ್ರಕ್ಕಾಗಿ ಬಾಲಿವುಡ್ ನಟನೊಬ್ಬನನ್ನು ಅತಿಥಿಯಾಗಿ ಕರೆತರಬೇಕು ಎಂಬ ನಿರ್ದೇಶಕ ಅಶೋಕ್ ಕಶ್ಯಪ್ ಅವರ ಪ್ರಯತ್ನ ವಿಫಲವಾಗಿದೆ. ಕಡೆಗೆ ವಿಧಿಯಿಲ್ಲದೆ ಚಿತ್ರ ಹಾಡೊಂದಕ್ಕೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಐಟಂ ಸಾಂಗ್ ನ ಚಿತ್ರೀಕರಣ ಸಾಮಿಸ್ ಡ್ರೀಮ್ ಲ್ಯಾಂಡ್ ನಲ್ಲಿ ಭರದಿಂದ ಸಾಗುತ್ತಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಹಾಡಿನ ಚಿತ್ರೀಕರಣ ಬುಧವಾರ ಆರಂಭವಾಯಿತು. ದರ್ಶನ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಧ್ಯಾನ್, ಪ್ರೇಮ್ ಕುಮಾರ್, ಕೋಮಲ್ ಕುಮಾರ್ ಮತ್ತು ಡಿಂಪಲ್ ಚೋಪ್ಡಾ ಚಿತ್ರದ ತಾರಾಗಣದಲ್ಲಿದ್ದಾರೆ.
ಸಿಹಿ ಮುತ್ತು ಚಿತ್ರ ಮಾರ್ಚ್ 31, 2008ರಲ್ಲೆ ಅದ್ದೂರಿಯಾಗಿ ಸೆಟ್ಟೇರಿತ್ತು. ಒಂದು ವರ್ಷ ಒಂಭತ್ತು ತಿಂಗಳ ಮುಗಿಯುತ್ತಿದ್ದರೂ ಚಿತ್ರೀಕರಣ ಎಡವುತ್ತಾ ಕುಂಟುತ್ತಾ ಸಾಗುತ್ತಿದೆ. ಚಿತ್ರದ ವಿಶೇಷ ಹಾಡಿಗಾಗಿ ಬಾಲಿವುಡ್ ನಟ ಸಿಕ್ಕದೇ ಇರುವುದೇ ಈ ವಿಳಂಬಕ್ಕೆ ಕಾರಣ ಎನ್ನುತ್ತಾರೆ ಅಶೋಕ್. ಈಚಿತ್ರದ ಮೂಲಕ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಸ್ವತಂತ್ರ ನಿರ್ದೇಶಕರಾಗಿ ಬದಲಾಗುತ್ತಿದ್ದಾರೆ.
ಬಾಲಿವುಡ್ ನಟ ವಿವೇಕ್ ಒಬೆರಾಯ್ ಕನ್ನಡಕ್ಕೆ ಕರುತರುವ ಪ್ರಯತ್ನವನ್ನು ಅಶೋಕ್ ಕಶ್ಯಪ್ ಮಾಡಿದ್ದರು. ಅಂದಹಾಗೆ ಸಿಹಿಮುತ್ತು ಚಿತ್ರದ ಈ ಹಾಡಿಗಾಗಿ ಬರೋಬ್ಬರಿ ರು.40 ಲಕ್ಷ ಖರ್ಚು ಮಾಡಲಾಗುತ್ತಿದೆಯಂತೆ. ಒಟ್ಟಿನಲ್ಲಿ ವಿವೇಕ್ ಒಬೆರಾಯ್ ಗೆ ದಕ್ಕದ ಸಿಹಿಮುತ್ತು ದರ್ಶನ್ ಪಾಲಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











