ಲೋಕೇಶ್ ಬಗ್ಗೆ ಮೌನ ಮುರಿದ ಗಿರಿಜಾ ಲೋಕೇಶ್!

ಲೋಕೇಶ್ ನಮ್ಮನ್ನಗಲಿ ಏಳು ವರ್ಷಗಳಾದವು. ಅಲ್ಲಿಂದ ಇಲ್ಲಿಯವರೆಗೆ ಯಾರೊಬ್ಬರೂ ಲೋಕೇಶ್ ಸಾಧನೆ, ಅವರ ಕುಟುಂಬದವರ ಬಗ್ಗೆ ಪ್ರೀತಿ-ಕಾಳಜಿ ವಹಿಸಿದವರಿಲ್ಲವಂತೆ. ಪ್ರತಿ ವರ್ಷದಂತೆ ಈ ವರ್ಷವೂ ರಂಗಭೂಮಿಗೆ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಕಲಾಕ್ಷೇತ್ರದಲ್ಲಿ ಸನ್ಮಾನಿಸಲಿದ್ದಾರೆ. ಜೊತೆಗೆ ಲೋಕೇಶ್ ಆಡಿದ ನಾಟಕಗಳ ಮರು ಮೆಲುಕು ಕಾರ್ಯಕ್ರಮ ನಡೆಯಲಿದೆ.
ಗಿರಿಜಮ್ಮನಿಗೆ ಉದ್ಯಮದ ಮೇಲೆ ಬೇಸರ ಬರಲು ಮುಖ್ಯ ಕಾರಣ-ಕಳೆದ ವರ್ಷ ನಡೆದ ಲೋಕೇಶ್ ಸ್ಮರಣಾರ್ಥ ಸಮಾರಂಭ. ಅಂದು ಹೆಚ್ಚಿನ ಉದ್ಯಮದವರನ್ನು ಆಹ್ವಾನಿಸಲಾಗಿತ್ತು. ಅಂಬರೀಷ್, ರವಿಚಂದ್ರನ್ ಯಾರೊಬ್ಬರೂ ಅಲ್ಲಿಗೆ ಬರಲಿಲ್ಲ. ಕಡೇ ಪಕ್ಷ ಲೋಕೇಶ್ ಅವರು ಸಲ್ಲಿಸಿದ ಸೇವೆಯನ್ನಾದರೂ ನೆನಪಿಸಿಕೊಂಡು ಬರಬಹುದಿತ್ತು ಎನ್ನುವುದು ಗಿರಿಜಮ್ಮನ ನೋವಿನ ನುಡಿ!
ಅವರೇ ಹೇಳುವಂತೇ-ಇದೇ ರವಿಚಂದ್ರನ್ ತಂದೆ ವೀರಾಸ್ವಾಮಿಯವರು ಲೋಕೇಶ್ರನ್ನು ತನ್ನ ಮಗ ಎಂದು ಆತ್ಮೀಯವಾಗಿ ಕಾಣುತ್ತಿದ್ದರು. ಆದರೆ, ಅವರ ಮಗ ಸೌಜನ್ಯಕ್ಕೂ ಸೃಜನ್ ಲೋಕೇಶ್ಗೆ ಸಣ್ಣ ಪಾತ್ರ ಹೋಗಲಿ, ಕಂಡಲ್ಲಿ ಸರಿಯಾಗಿ ಮಾತೂ ಆಡಿಸುವುದಿಲ್ಲವಂತೆ. ಇದನ್ನು ಹೇಳುತ್ತಾ ಗಿರಿಜಮ್ಮನ ಕಣ್ಣು ಹಸಿಯಾಗುತ್ತದೆ. ಅಂಬರೀಷ್ ಧೋರಣೆ ಬಗ್ಗೆಯೂ ಅವರು ನೋವಿನಿಂದ ಮಾತನಾಡುತ್ತಾರೆ.
ಒಂದು ಕಾಲದಲ್ಲಿ ಇದೇ ಲೋಕೇಶ್ ಉದ್ಯಮದ ಗೆಂಡೆತಿಮ್ಮನಾಗಿ ಮೆರೆದಿದ್ದರು. ಆದರೆ, ಇಂದು ಯಾರೊಬ್ಬರಿಗೂ ಅವರ ನೆನಪಿನ ಉತ್ಸವದಲ್ಲಿ ಭಾಗವಹಿಸಬೇಕು ಎಂಬ ಕನಿಷ್ಟ ಆದರವೂ ಇಲ್ಲ. ಬಸಂತ್ ಕುಮಾರ್ ಪಾಟೀಲರಿಗಂತೂ ಇಂಥವುದರ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ವ್ಯವಧಾನ ಇಲ್ಲ. ತಮ್ಮ ಸೀಟನ್ನು ಇನ್ನಷ್ಟು ತಿಂಗಳು ಭದ್ರವಾಗಿರಿಸಮ್ಮಾ ಎಂದು ಭದ್ರಕಾಳಿಯಲ್ಲಿ ಪ್ರಾರ್ಥನೆ ಮಾಡುವುದರಲ್ಲೇ ಅವರ ಟೈಮೆಲ್ಲಾ ತೊಳೆದುಹೋಗುತ್ತಿದೆ!


Click it and Unblock the Notifications











