ಕನ್ನಡ ನಾಡೋಡಿಗಳ್ ಶೂಟಿಂಗ್ ಫಿಕ್ಸ್
ವಿಜಯ ದಶಮಿಯ ಶುಭದಿನ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮತ್ತೊಂದು ಚಿತ್ರ ಸೆಟ್ಟೇರಿದೆ. ಇಂದು ಕಂಠೀರವ ಸ್ಟುಡಿಯೋದಲ್ಲಿ ತಮಿಳಿನ ಸಮುತಿರಕಣಿ ನಿರ್ದೇಶನದ ಸೂಪರ್ ಹಿಟ್ ಚಿತ್ರ 'ನಾಡೋಡಿಗಳ್' ಚಿತ್ರದ ಕನ್ನಡ ಅವತರಣಿಕೆಗೆ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಮಹೂರ್ತನೇರವೇರಿತು. ಫಸ್ಟ್ ಕ್ಲಾಪ್ ಮಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಚಿತ್ರಕ್ಕೆ ಶುಭ ಹಾರೈಸಿದರು.
ಈ ಚಿತ್ರವನ್ನು ನಿರ್ಮಿಸಲು ನಮ್ಮ ಕುಟುಂಬದ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರು. ನಮ್ಮ ಬ್ಯಾನರ್ ನ ಅಡಿಯಲ್ಲಿ ಬರುತ್ತಿರುವ 79 ನೇ ಚಿತ್ರ ಇದು,ಇಲ್ಲಿನ ಪರಿಸರಕ್ಕೆ ತಕ್ಕಂತೆ ಕಥೆಯನ್ನು ಸ್ವಲ್ಪ ಬದಲಾಯಿಸಲಾಗುವುದು. ಸುಮಾರು 90 ದಿನಗಳ ಶೂಟಿಂಗ್ ಮುಗಿಸಿ ನಿಮ್ಮ ಮುಂದೆ ಚಿತ್ರ ಬರಲಿದೆ. ನನಗಂತೂ ಈ ಚಿತ್ರದ ಮೇಲೆ ಅಪಾರ ನಂಬಿಕೆಯಿದೆ. ಅಪ್ಪುಗೆ ತಕ್ಕ ಕಥೆ ಇದೆ ಎಂದು ಖುಷಿಯಿಂದ ಮಾತನಾಡಿದರು ಡಾ. ರಾಜ್ ಬ್ಯಾನರ್ ನ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಘವೇಂದ್ರ ರಾಜ್ ಕುಮಾರ್ .
ಬಾಕ್ಸಾಫೀಸ್ ನಲ್ಲಿ ಹಿಟ್ ಚಿತ್ರಗಳ ಸರಣಿಯನ್ನು ಮುಂದುವರೆಸಿರುವ ಪುನೀತ್ ಗೆ ಬಹು ತಾರಾಗಣವಿರುವ ಚಿತ್ರದಲ್ಲಿ ನಟಿಸಲು ಯಾವುದೇ ಮುಜುಗರವಿಲ್ಲ. ಇನ್ನೂ ಹೆಚ್ಚಿನ ಸಂತೋಷ ನೀಡಿದೆಯಂತೆ. ಈ ಚಿತ್ರದಲ್ಲಿ ಕಥೆಯೆ ಪ್ರಧಾನವಾಗಿದೆ. ಎಲ್ಲರ ಪಾತ್ರಕ್ಕೆ ತನ್ನದೆ ಆದ ಸ್ಕೋಪ್ ಇದೆ ಎಂದರು.
ಗಜ, ರಾಮ್, ಪ್ರೀತ್ಸೆ ಪ್ರೀತ್ಸೆ ಚಿತ್ರದ ನಂತರ ದಂಡಂ ದಶಗುಣಂ ಚಿತ್ರ ಮುಗಿಸಿ ಬಂದಿರುವ ನಿರ್ದೇಶಕ ಮಾದೇಶ್, ಶೂಟಿಂಗ್ ಸ್ಪಾಟ್ ಬಗ್ಗೆ ಹೇಳುತ್ತಾ ಬೆಂಗಳೂರು, ಮೈಸೂರು, ಶ್ರವಣಬೆಳಗೊಳ, ಚಿತ್ರದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಡಾ. ರಾಜ್ ಬ್ಯಾನರ್ ನಲ್ಲಿ ಕೆಲಸ ಮಾಡುತ್ತಿರುವುದು ನನ್ನ ಪುಣ್ಯ್ಯ ಎಂದರು.
ಜಾಕಿಯಲ್ಲಿ ಅದ್ಭುತವಾಗಿ ಕ್ಯಾಮೆರಾ ವರ್ಕ್ ನೀಡಿದ ಸತ್ಯ ಹೆಗಡೆ , ಈ ಚಿತ್ರದಲ್ಲೂ ತಮ್ಮ ಕಮಾಲ್ ತೋರಲಿದ್ದಾರೆ.
ಅಂದಹಾಂಗೆ, ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗೀಶ್ ಕೂಡಾ ಅಭಿನಯಿಸುತ್ತಿದ್ದಾರೆ. ರಾಧಿಕಾ ಪಂಡಿತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS


Click it and Unblock the Notifications











