ಅಮೃತ ಕಲಶಕ್ಕೆ ಭಾರತ ಬಿಂದುಗಳು

ಕನ್ನಡ ಚಿತ್ರರಂಗಕ್ಕೆ ಅಳಿಲು ಸೇವೆ ಸಲ್ಲಿಸಿದ ಕಲಾವಿದರನ್ನು ಸನ್ಮಾನಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ 50 ಕ್ಕೂ ಹೆಚ್ಚು ಕಲಾವಿದರ ಪಟ್ಟಿಯನ್ನು ತಯಾರಿಸಿದ್ದಾರೆ. ಮತ್ತೊಂದು ಮುಖ್ಯವಾದ ವಿಚಾರವೆಂದರೆ, ಅಮೃತ ಮಹೋತ್ಸವಕ್ಕೆ ಕೆಲವೊಂದು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು ಎಂಬ ಕಾರಣಕ್ಕೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪುರಚ್ಚಿ ತಲೈವಿ ಡಾ.ಜಯಲಲಿತ ಅವರನ್ನು ಆಹ್ವಾನಿಸಲಾಗುತ್ತಿದೆ.
ರಮ್ಯಾ ಮತ್ತು ಧ್ಯಾನ್ ನಟಿಸಿದ್ದ 'ಅಮೃತ ಧಾರೆ' ಚಿತ್ರದಲ್ಲಿ ಅಮಿತಾಬ್ ಅತಿಥಿ ಪಾತ್ರ ಪೋಷಿಸಿದ್ದರು. ಎಸ್.ಆರ್.ಪುಟ್ಟಣ್ಣ ಕಣಗಾಲರ 'ಕಥಾ ಸಂಗಮ', ಸಹೋದರ ಸವಾಲ್ ಮುಂತಾದ ಚಿತ್ರಗಳಲ್ಲಿ ರಜನಿಕಾಂತ್, ರವಿಚಂದ್ರನ್ 'ಸಿಪಾಯಿ' ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ರಾಮ ಶಾಮ ಭಾಮ, ಪುಷ್ಪಕ ವಿಮಾನದಲ್ಲಿ ಕಮಲ ಹಾಸನ್ ನಟಿಸಿದ್ದರು. ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಕರ್ನಾಟಕ ಮೂಲದ ಪ್ರಕಾಶ್ ರೈ, ಅರ್ಜುನ್, ಮುರಳಿ ಅವರನ್ನು ಅಮೃತ ಮಹೋತ್ಸವಕ್ಕೆ ಆಹ್ವಾನಿಸಲಾಗುತ್ತಿದೆ. ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಈ ಕಲಾವಿದರು ಇಂದು ಅನ್ಯ ಭಾಷೆಗಳಲ್ಲಿ ಮಿಂಚುತ್ತಿರುವುದು ಗೊತ್ತೇ ಇದೆ. ಕಲಾವಿದರ ಸನ್ಮಾನಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ಸಿಂಗಾರಗೊಳ್ಳುತ್ತಿದೆ.
ಹಿನ್ನೆಲೆ ಗಾಯಕರಾದ ಡಾ.ಕೆ.ಜೆ.ಯೇಸುದಾಸ್, ಡಾ.ಪಿ.ಬಿ.ಶ್ರೀನಿವಾಸ್, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಪಿ.ಸುಶೀಲಾ, ಎಲ್.ಆರ್.ಈಶ್ವರಿ, ವಾಣಿ ಜಯರಾಮ್ ಸೇರಿದಂತೆ ಮುಂತಾದವರನ್ನು ಸನ್ಮಾನ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ದುಡಿದ ಮಹನೀಯರ 75 ಕನ್ನಡ ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಪ್ರಧಾನ ಸಂಪಾಕತ್ವದಲ್ಲಿ ಪುಸ್ತಕಗಳನ್ನು ರಚಿಸಲಾಗಿದೆ. ಇದಲ್ಲದೆ ಕನ್ನಡ ಚಿತ್ರರಂಗದ 108 ಖ್ಯಾತ ಕಲಾವಿದರನ್ನು ಸನ್ಮಾನಿಸಲಾಗುತ್ತದೆ. ಈ ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಫೆ.17 ರಿಂದ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ರಜೆ ಘೋಷಣೆಯಾಗಿದೆ. ಆದರೆ ಚಿತ್ರ ಪ್ರದರ್ಶನಕ್ಕೆ 15 ದಿನಗಳ ರಜೆ ಅನ್ವಯಿಸುವುದಿಲ್ಲ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ ಓದಿಗೆ
ಕನ್ನಡ ಚಿತ್ರರಂಗಕ್ಕೆ 15 ದಿನಗಳ ರಜೆ ಬೇಕೆ?
ರವಿ ಗರಡಿಯಲ್ಲಿ ಸುಂದರ ಸುಂದರಿಯರು!


Click it and Unblock the Notifications











