ನಯನತಾರೆಗಿಂತ ರಶ್ಮಿ ಸಂಭಾವನೆ ರು.3ಲಕ್ಷ ಕಡಿಮೆ
ಎಲ್ಲಾ ಸುಸೂತ್ರವಾಗಿ ನಡೆದಿದ್ದರೆ ದಕ್ಷಿಣದ ಖ್ಯಾತ ತಾರೆ ನಯನತಾರಾ ಕನ್ನಡಕ್ಕೆ 'ಸ್ವರಾಂಜಲಿ' ಚಿತ್ರದ ಮೂಲಕ ಅಡಿಯಿಡಬೇಕಾಗಿತ್ತು. ಸ್ವರಾಂಜಲಿ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಶ್ರೀನಿವಾಸ್ ರು.14 ಲಕ್ಷದ ಸಂಭಾವನೆ ಕೊಡಲು ಮುಂದಾಗಿದ್ದರು. ಆದರೆ 'ಸ್ವರಾಂಜಲಿ' ಚಿತ್ರ ಸೆಟ್ಟೇರಲು ತಡವಾದ ಕಾರಣ ನಯನತಾರಾ ಕೈಬಿಟ್ಟಿದ್ದಾರೆ.ನಯನತಾರಾ ಸ್ಥಾನಕ್ಕೆ ದುನಿಯಾ ರಶ್ಮಿ ಆಯ್ಕೆಯಾಗಿದ್ದು, ಶ್ರೀನಿವಾಸ್ ತಮ್ಮ ಮಗ ವಿಜಯಕುಮಾರ್ ಗಾಗಿ ಈ ಚಿತ್ರ ಮಾಡುತ್ತಿದ್ದಾರೆ.
ನಯನತಾರಾ ಸಂಭಾವನೆಗೆ ಹೋಲಿಸಿದರೆ ದುನಿಯಾ ರಶ್ಮಿಗೆ ರು.3 ಲಕ್ಷ ಕಡಿಮೆ! ಸ್ವರಾಂಜಲಿ ಚಿತ್ರವನ್ನು ಶ್ರೀನಿವಾಸ್ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ನಯನತಾರಾ ಕಾಲ್ ಶೀಟ್ ಗಾಗಿ ಈ ಹಿಂದ ತಮ್ಮದೇ ನಿರ್ಮಾಣದ 'ತಂಗಿಯ ಮನೆ'ಚಿತ್ರಕ್ಕಾಗಿ ಪ್ರಯತ್ನಿಸಿದ್ದೂ ಉಂಟು.ಅಲ್ಲೂ ನಯನತಾರಾ ಕೈಗೆ ಸಿಗಲಿಲ್ಲ. ಇದೀಗ ವಿಧಿಯಿಲ್ಲದೆ ದುನಿಯಾ ರಶ್ಮಿ ಅವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ.
ಶ್ರೀನಿವಾಸ್ ತಮ್ಮ ಮಗ ವಿಜಯಕುಮಾರ್ ಗಾಗಿ 'ತಂಗಿಯ ಮನೆ' ಎಂಬ ಚಿತ್ರ ಮಾಡಿ ಬರೋಬ್ಬರಿ ರು.1 ಕೋಟಿ ಕಳೆದುಕೊಂಡಿದ್ದಾರೆ. ಸ್ವರಾಂಜಲಿ ಚಿತ್ರ ಶ್ರೀನಿವಾಸ್ ನಿರ್ಮಿಸುತ್ತಿರುವ ಎರಡನೆಯ ಚಿತ್ರ. ನಿರ್ದೇಶನ ಮತ್ತು ನಿರ್ಮಾಣದ ಜತೆಗೆ ಕತೆ, ಚಿತ್ರಕತೆ, ಸಂಭಾಷಣೆಯ ಹೊಣೆಯನ್ನೂ ಶ್ರೀನಿವಾಸ್ ಹೊತ್ತಿರುವುದು ವಿಶೇಷ.
ಚಿತ್ರಕತೆಯನ್ನು ಕೇಳಿ ಶರತ್ ಲೋಹಿತಾಶ್ವ ಸಹ ನಟಿಸಲು ಒಪ್ಪಿದ್ದಾರಂತೆ. ಉಳಿದಂತೆ ಚಿತ್ರದಲ್ಲಿ ಸುಂದರರಾಜ್, ರಮೇಶ್ ಭಟ್, ಪದ್ಮಾ ವಾಸಂತಿ ಮುಂತಾದವರಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂನ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಮಣ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸ್ವರಾಂಜಲಿ ಚಿತ್ರದದ್ವಿತೀಯಾರ್ಧದಲ್ಲಿ ರಮಣ ಕಾಣಿಸಲಿದ್ದಾರೆ.
ಹಾಸ್ಯನಟ ಎಂಎಸ್ ಉಮೇಶ್ ಕನ್ನಡ ಮೇಷ್ಟ್ರ ಪಾತ್ರದಲ್ಲಿ ಕಾಣಿಸಲಿದ್ದಾರೆ. ಮೈಸೂರು, ಮೇಲುಕೋಟೆ, ಸಕಲೇಶಪುರ, ಬೆಂಗಳೂರು ಮತ್ತು ಉಳಿದ ತಾಣಗಳಲ್ಲಿ 60 ದಿನಗಳ ಕಾಲ ಚಿತ್ರೀಕರಣನಡೆಯಲಿದೆ. ಕುಟುಂಬ ಪ್ರಧಾನ ಚಿತ್ರವಾಗಿರುವ ಸ್ವರಾಂಜಲಿಯಲ್ಲಿ 5 ಹಾಡುಗಳಿವೆ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್.
ಸ್ವರಾಂಜಲಿ ಮತ್ತು ಅಪ್ಪಣ್ಣಯ್ಯ ತಂದೆ ಮಗಳು. ಮಗಳ ವಿದ್ಯಾಭ್ಯಾಸ ಅವಳ ಬೇಕು ಬೇಡಗಳನ್ನು ಅಪ್ಪಣ್ಣಯ್ಯ ನೆರವೇರಿಸುತ್ತಿರುತ್ತಾನೆ. ಹೀಗೆ ಸಾಗುತ್ತಿರಬೇಕಾದರೆ ಮಗಳಿಗೆ ಅಪ್ಪನೇ ಖಳನಟನಾಗಿ ಬದಲಾಗುತ್ತಾನೆ. ಇಲ್ಲಿಂದ ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಬರೀ ಇದಿಷ್ಟೇ ಕತೆಯಲ್ಲ. ಚಿತ್ರದಲ್ಲಿ ಹೊಸ ಹೊಸ ಬೆಳವಣಿಗೆಗಳಿವೆ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











