ಮತ್ತೆ ಮತ್ತೆ ಜಟಿಲವಾಗುತ್ತಿದೆ ಥಿಯೇಟರ್ ಸಮಸ್ಯೆ
ಯುಗಾದಿ ಹಬ್ಬದಂದು ಬಿಡುಗಡೆಗೆ ನಾಲ್ಕು ಚಿತ್ರಗಳು ಸಿದ್ಧವಾಗಿವೆ. ಕ್ರೇಜಿಸ್ಟಾರ್ ರವಿಚಂದ್ರನ್ ರ 'ನರಸಿಂಹ', ಸಾಯಿಕುಮಾರ್ ಮುಖ್ಯಪಾತ್ರದಲ್ಲಿರುವ 'ಆ ಮರ್ಮ', ಅರ್ಜುನ್ ಸರ್ಜಾ ಅಭಿನಯದ 'ಪ್ರಸಾದ್' ಹಾಗೂ ಕುಮಾರ್ ನಾಯಕತ್ವದ 'ಸೈಲೆನ್ಸ್', ಇವಿಷ್ಟೂ ಚಿತ್ರಗಳು ಅಂದೇ ಬಿಡುಗಡೆ ಘೋಷಿಸಿವೆ. ನವೀನ್ ಕೃಷ್ಣ ಅಭಿನಯದ ಜೀವನ Jok-ಲ್ಲಿ ಚಿತ್ರ ಒಂದು ದಿನ ಮೊದಲು, ಅಂದರೆ ಮಾರ್ಚ್ 22, 2012ರಂದು ಬಿಡುಗಡೆಯಾಗಲಿದೆ.
ಕನ್ನಡ ಚಿತ್ರೋದ್ಯಮದಲ್ಲಿ ಚಿತ್ರಮಂದಿರದ ಸಮಸ್ಯೆ ಕೂಗು ಇತ್ತೀಚಿಗೆ ತೀರಾ ಕೇಳಿಬರುತ್ತಿದೆ. ಆದರೆ ವಾದಕ್ಕೆ ಸರಿಯಾದ ಚರ್ಚೆ, ಪರಿಹಾರ ಮಾತ್ರ ನಡೆಯುತ್ತಿಲ್ಲ. ಮತ್ತೆ ಮತ್ತೆ ಮೂರಕ್ಕಿಂತ ಹೆಚ್ಚು ಚಿತ್ರಗಳು ಒಂದೇ ದಿನ ತೆರೆಗೆ ಅಪ್ಪಳಿಸಿ ಒಂದೇ ವಾರಕ್ಕೆ ಅಪ್ಪಚ್ಚಿಯಾಗುವುದು ತಪ್ಪುತ್ತಿಲ್ಲ. ಆಶ್ಚರ್ಯವೆಂದರೆ ಅದೇ ದಿನ ಇನ್ನೂ ಎರಡು ಪರಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಮೊದಲು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರಗಳೂ ಇವೆ.
ಚಿತ್ರರಂಗದಲ್ಲಿ ಒಗ್ಗಟ್ಟಿದೆ ಅಂತ ಆಗಾಗ ವೇದಿಕೆಯಲ್ಲಿ ಟಾಂ ಟಾಂ ಆಗುತ್ತಲೇ ಇರುತ್ತದೆ. ಒಗ್ಗಟ್ಟು ಖಂಡಿತ ಇದೆ ಎಂಬುದನ್ನು ಒಪ್ಪಬಹುದು ಕೂಡ. ಆದರೆ, ಇಂತಹ ವಿಚಾರಗಳಲ್ಲಿ ನಿರ್ಮಾಪಕರು ಮತ್ತು ನಿರ್ದೇಶಕರು ಒಂದೆಡೆ ಕುಳಿತು ಚರ್ಚಿಸಿ, ಬಹಳಷ್ಟು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದನ್ನು ತಪ್ಪಿಸಿದರೆ ಒಳ್ಳೆಯದಲ್ಲವೇ? ಈ ಕುರಿತು ಚಿತ್ರೋದ್ಯಮ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳುವುದು ಸದ್ಯದ ಅಗತ್ಯಗಳಲ್ಲೊಂದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











