ಪ್ರೀತಿಯಿಂದ ರಮೇಶ್ ಜತೆ ರಮನೀತೋ ಚೌದರಿ
ಕಸ್ತೂರಿ ವಾಹಿನಿಯಲ್ಲಿ ನಟ ರಮೇಶ್ ಅರವಿಂದ್ ನಡೆಸಿಕೊಡುತ್ತಿರುವ 'ಪ್ರೀತಿಯಿಂದ ರಮೇಶ್' ಕಾರ್ಯಕ್ರಮ ಇದೀಗ ಚಿತ್ರದ ಶೀರ್ಷಿಕೆಯಾಗಿ ಬದಲಾಗಿದೆ. ಈ ಚಿತ್ರದ ನಾಯಕ ನಟ ಸಹ ರಮೇಶ್ ಅವರೇ ಎಂಬುದು ವಿಶೇಷ. ಪ್ರೀತಿಯಿಂದ ರಮೇಶ್ ಕಾರ್ಯಕ್ರಮ ಕಸ್ತೂರಿ ವಾಹಿನಿಯಲ್ಲಿ 100 ಕಂತುಗಳನ್ನು ಪೂರೈಸಿದೆ ಸಹ.
ಜನಪ್ರಿಯ ನಟನೊಬ್ಬ ನಿರೂಪಿಸಿದ ಕಾರ್ಯಕ್ರಮವೊಂದು ಚಿತ್ರದ ಶೀರ್ಷಿಕೆಯಾಗುತ್ತಿರುವುದು ಕನ್ನಡದ ಮಟ್ಟಿಗೆ ಇದೇ ಮೊದಲು. ರಮನೀತೋ ಚೌದರಿ, ಕಿರಣ್, ಅನಂತನಾಗ್ ಈ ಚಿತ್ರದ ಮುಖ್ಯ ಪಾತ್ರಧಾರಿಗಳು. ಎನ್ ರವಿಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಾಂತಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಅವರು ನಿರ್ಮಿಸುತ್ತಿರುವ 15 ಕನ್ನಡ ಚಿತ್ರ ಇದಾಗಿದೆ.
ರೋಮಿಯೋ ಜ್ಯೂಲಿಯಟ್, ಬೈತಾರೆ ಬೈತಾರೆ ಮತ್ತು ಹ್ಯಾಪಿ ನ್ಯೂ ಇಯರ್ ನಿರ್ದೇಶಿಸಿದ್ದ ಗುಣಕುಮಾರ್ ಆಕ್ಷನ್, ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಅವರೇ ಕತೆ, ಚಿತ್ರಕತೆಯನ್ನೂ ರಚಿಸಿದ್ದಾರೆ. ಐದು ಹಾಡುಗಳುಳ್ಳ ಪ್ರೀತಿಯಿಂದ ರಮೇಶ್ ಚಿತ್ರಕ್ಕೆ ಎ ಟಿ ರವೀಶ್ ಸಂಗೀತ ಸಂಯೋಜನೆ ಇದೆ. ಛಾಯಾಗ್ರಹಣ ಎ ಸಿ ಮಹೇಂದ್ರ. ರವಿ ಸಂಕಲನ, ವಿಜಯ್ಪ್ರಸಾದ್ ಸಂಭಾಷಣೆ, ಟೈಗರ್ ಮಧು, ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್ ಹಾಗೂ ಶಿವನಂಜೇಗೌಡರ ಗೀತರಚನೆಯಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











