ಬೇಸರಗೊಂಡು ಹುಟ್ಟುಹಬ್ಬ ಬೇಡ ಎಂದ ರವಿಚಂದ್ರನ್
ಕನಸುಗಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಬೇಸರಗೊಂಡಿದ್ದಾರೆ. ಇದೇ ಮೇ.30ರಂದು ಅವರು 51ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಆದರೆ ಈ ಸಂಭ್ರಮ, ಸಡಗರ ಅವರ ಮುಖದಲ್ಲಿಲ್ಲ. ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಕನಸುಗಾರ ಬೇಸರದಿಂದ ಪ್ರಕಟಿಸಿದ್ದಾರೆ. ಯಾಕೆ ರವಿಚಂದ್ರನ್ ಅವರಿಗೆ ಏನಾಯಿತು?
ಅವರ ಬಹುನಿರೀಕ್ಷಿತ 'ಮಂಜಿನ ಹನಿ' ಕಡೆಗೂ ಒಂದು ಹಂತಕ್ಕೆ ಬಂದು ನಿಂತಿದೆ. ಈ ಚಿತ್ರದ ಮೇಲೆ ರವಿಚಂದ್ರನ್ ಬಹಳಷ್ಟು ಕನಸುಗಳನ್ನು ಹೊತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ದಿನವೇ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ ಎಂದು ರವಿ ಹೇಳಿದ್ದಾರೆ.
"ತನ್ನ ಅಭಿಮಾನಿಗಳು ಯಾರು ಮೇ.30ರಂದು ಕೇಕು, ಹಾರ, ತುರಾಯಿ ಹಿಡಿದು ಡಾ.ರಾಜ್ ಕುಮಾರ್ ರಸ್ತೆಯ ತನ್ನ ಮನೆಗೆ ಬರಬೇಡಿ" ಎಂದು ರವಿಚಂದ್ರನ್ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಹಿಂದೊಮ್ಮೆ ರವಿಚಂದ್ರನ್ ತಮ್ಮ ಹುಟ್ಟುಹಬ್ಬದದಿನ 'ಮಂಜಿನ ಹನಿ'ಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.
ಆದರೆ ಕಾರಣಾಂತರಗಳಿಂದ 'ಮಂಜಿನಿ ಹನಿ' ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ತಮ್ಮ ಹುಟ್ಟುಹಬ್ಬದ ದಿನವೇ ತಮ್ಮ ಮಗ ಮನೋರಂಜನ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುವ ಕನಸನ್ನೂ ರವಿ ಕಂಡಿದ್ದರು. ಈ ಕನಸು ಅವರ ಹುಟ್ಟುಹಬ್ಬದ ದಿನ ನೆರವೇರುವುದು ಬಹುತೇಕ ಅನುಮಾನ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರವಿಚಂದ್ರನ್ ತಮ್ಮ 50ನೇ ಹುಟ್ಟುಹಬ್ಬಕ್ಕೆ ಗುಡ್ಬೈ ಹೇಳಿದ್ದಾರೆ. ಬಹುಶಃ ಅವರ 'ಮಂಜಿನ ಹನಿ' ಚಿತ್ರ ಜೂನ್ ಅಂತ್ಯಕ್ಕೆ ತೆರೆಕಾಣುವ ಸಾಧ್ಯತೆಗಳಿವೆ. ಸದ್ಯಕ್ಕೆ ಆ ಚಿತ್ರದ ಗ್ರಾಫಿಕ್ಸ್ ಕೆಲಸವನ್ನು ಸ್ವತಃ ರವಿಚಂದ್ರನ್ ಅವರೇ ತಮ್ಮ ಮನೆಯಲ್ಲಿ ಪೂರೈಸುತ್ತಿದ್ದಾರೆ. ಮೇ.30ರಂದು ಅಭಿಮಾನಿಗಳು ಏನು ಮಾಡುತ್ತಾರೋ ಕಾದುನೋಡಬೇಕು. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











