ಮಂತ್ರಿಮಾಲ್ನಲ್ಲಿ ಮಾಜಿಮುಖ್ಯಮಂತ್ರಿ ಸಿನೆಮಾ ಕಹಾನಿ

ಈ ತರಹ ಕುತೂಹಲ ಮತ್ತು ಅಚ್ಚರಿಯನ್ನು ಹುಟ್ಟುಹಾಕಿದವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ಅಧಿಕಾರ ಇರಲಿ ಇಲ್ಲದಿರಲಿ, ಕುಟುಂಬದವರನ್ನೆಲ್ಲಾ ಒಟ್ಟುಗೂಡಿಸಿಕೊಂಡು ವಿದೇಶ ಪ್ರಯಾಣ ಮಾಡುವುದನ್ನು, ಹೊಸ ಕನ್ನಡ ಚಿತ್ರ ಬಂದಾಗ ಪಟಾಲಂ ಕಟ್ಟಿಕೊಂಡು ಸಿನೆಮಾ ನೋಡುವುದನ್ನು ಯಡಿಯೂರಪ್ಪ ಯಾವತ್ತೂ ಮಿಸ್ ಮಾಡಿಕೊಳ್ಳುವುದಿಲ್ಲ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಲೈಫು ಇಷ್ಟೇನೆ ಚಿತ್ರವನ್ನೂ ನೋಡಿದ್ದರು.
ದೆಹಲಿಯಲ್ಲಿ ಹೈಕಮಾಂಡಿನಿಂದ 'ಪ್ರಸಾದ' ಸಿಗದಿದ್ದರೇನಂತೆ, ಯಡಿಯೂರಪ್ಪನವರು ತಮ್ಮೆಲ್ಲ ರಾಜಕೀಯ ಜಂಜಡಗಳನ್ನೆಲ್ಲ ಬದಿಗಿಟ್ಟು ಮಂತ್ರಿ ಮಾಲಿಗೆ ತಮ್ಮಿಬ್ಬರು ಹೆಣ್ಣುಮಕ್ಕಳಾದ ಅರುಣಾ ಮತ್ತು ಉಮಾ, ಪಕ್ಕದಲ್ಲಿ ಮಗ ವಿಜಯೇಂದ್ರರ ಜೊತೆಗೂಡಿ, ಅಶೋಕ್ ಖೇಣಿ ನಿರ್ಮಾಣದ, ಖ್ಯಾತ ನಟ ಅರ್ಜುನ್ ಸರ್ಜಾ ಅಭಿನಯಿಸಿದ 'ಪ್ರಸಾದ್' ಕನ್ನಡ ಚಿತ್ರ ಭಾನುವಾರ ಸಂಜೆ 7 ಗಂಟೆಗೆ ನೋಡಲು ಬಂದಿದ್ದರು. ನಾನು ಮತ್ತು ನಮ್ಮೆಜಮಾನ್ರು ನೋಡಲು ಹೋಗಿದ್ದು ವಿದ್ಯಾ ಬಾಲನ್ ಅವರ 'ಕಹಾನಿ'.
ಥಿಯೇಟರ್ ಹೊರಗೆ ಮತ್ತು ಒಳಗೆ ಕರ್ನಾಟಕದ ಮಾಜಿ 'ಯಜಮಾನ್ರು' ಸೃಷ್ಟಿಸಿದ ಕಹಾನಿಯನ್ನೂ ಕೇಳಿಬಿಡಿ. ಯಡಿಯೂರಪ್ಪ ಬರುತ್ತಿದ್ದಂತೆ ಥಿಯೇಟರ್ನಲ್ಲಿನ ವಿಐಪಿ ಲಾಂಜಿಗೆ ಅವರನ್ನು ಕರೊದೊಯ್ಯಲಾಯಿತು. ಸುದ್ದಿ ತಿಳಿದು ಕ್ಯಾಮೆರಾ, ಪೆನ್ನು ಪೇಪರು ಹಿಡಿದು ಬಂದಿದ್ದ ಪತ್ರಕರ್ತರನ್ನು ನಯವಾಗಿಯೇ ದೂರ ಸರಿಸಲಾಯಿತು. ಅಷ್ಟಾದರೂ ಖಾಸಗಿ ಕ್ಷಣಗಳನ್ನು ಯಡಿಯೂರಪ್ಪನವರು ಕಳೆಯಬೇಡವೆ?
ನಂತರ, ಭದ್ರತಾ ಸಿಬ್ಬಂದಿಗಳು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಮೇಲೆ ಸಿನೆಮಾ ಹತ್ತು ನಿಮಿಷ ತಡವಾಗಿ ಶುರುವಾಯಿತು. ಸೆಕ್ಯೂರಿಟಿ ಸಿಬ್ಬಂದಿಯವರ ಕಲರವದ ಹೊರತಾಗಿ ಮತ್ತೆಲ್ಲವೂ ಶಾಂತವಾಗಿತ್ತು. ಕಾವಲು ಪಡೆ ಮಾತ್ರ ಮೈಯೆಲ್ಲ ಕಣ್ಣಾಗಿತ್ತು. ಯಡಿಯೂರಪ್ಪನವರು ಬಂದರು, ಸಿನೆಮಾ ನೋಡಿದರು, ಬಿಟ್ಟನಂತರ ಮುಖ್ಯ ದ್ವಾರದ ಮುಖಾಂತರ ಹೊರನಡೆದರು. ಉಳಿದ ಪ್ರೇಕ್ಷಕರು ಮಾತ್ರ ಹಿಂಬದಿಯ ಬಾಗಿಲಿನಿಂದ ಹೊರಬರಬೇಕಾಯಿತು. ಇದಿಷ್ಟು ಯಡಿಯೂರಪ್ಪನವರು ಸಿನೆಮಾ ನೋಡಿದ ಕಹಾನಿ.


Click it and Unblock the Notifications











