ಕ್ಯಾನ್ಸರ್ ರೋಗಿಗೆ ಮರುಜೀವ ಕೊಟ್ಟ ಹ್ಯಾಟ್ರಿಕ್ ಹೀರೋ
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಭಿಮಾನಿಯೊಬ್ಬ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನೋಡಬೇಕು. ಅವರೊಂದಿಗೆ ಕ್ಷಣಕಾಲ ಮಾತನಾಡಬೇಕು ಎಂದು ಹಂಬಲಿಸುತ್ತಿದ್ದ. ಆ ಕನಸನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು (ಜ.26) ನೆರವೇರಿಸಿದ್ದಾರೆ.
ಗಾರ್ಮೆಂಟ್ ಉದ್ಯೋಗಿ ಮಂಜುನಾಥ(20) ಇನ್ನೂ ಹದಿಹರಯದ ಹುಡುಗ. ಈ ಚಿಕ್ಕ ವಯಸ್ಸಿನಲ್ಲೇ ಆತ ಕ್ಯಾನ್ಸರ್ನೊಂದಿಗೆ ಬದುಕು ದೂಡಬೇಕಾದ ಪರಿಸ್ಥಿತಿ. ಬೆಂಗಳೂರಿನ ಕರುಣಾಶ್ರಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನಿಗೆ ಶಿವಣ್ಣ ಎಂದರೆ ಎಲ್ಲಿಲ್ಲದ ಅಭಿಮಾನ, ಅಕ್ಕರೆ.
ಶಿವಣ್ಣನನ್ನು ಮಾತನಾಡಬೇಕು ಎಂಬುದು ಮಂಜುನಾಥನ ಬಹುದಿನಗಳ ಆಸೆ. ಇಂದು ಶಿವರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡುವ ಮೂಲಕ ಮಂಜುನಾಥನ ಆಸೆಯನ್ನು ನೆರವೇರಿಸಿದರು.ಆತನೊಂದಿಗೆ ಕೆಲ ಸಮಯ ಕಳೆದು ಮಂಜುನಾಥನ ಮುಖದಲ್ಲಿ ಹೊಸ ಹುರುಪು ತಂದರು. ಅಭಿಮಾನಿ ದೇವರ ಆಸೆ ಪೂರೈಸಿದ ಸಾರ್ಥಕತೆ ಶಿವಣ್ಣನ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಈ ಸಂದರ್ಭದಲ್ಲಿ ಆತ ಶಿವಣ್ಣ ಅಭಿನಯದ 'ಮೈಲಾರಿ' ಚಿತ್ರವನ್ನು ಒಮ್ಮೆ ನೋಡುವ ಬಯಕೆಯನ್ನು ವ್ಯಕ್ತಪಡಿಸಿದ. ಬೆಂಗಳೂರಿನ ನರ್ತಕಿ ಚಿತ್ರಮಂದಿರಲ್ಲಿ 'ಮೈಲಾರಿ' ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. 'ಮೈಲಾರಿ' ಚಿತ್ರದ ಹಾಡುಗಳ ಸಿಡಿಯನ್ನು ಕಳುಹಿಸುವ ವ್ಯವಸ್ಥೆ ಮಾಡುವುದಾಗಿ ಶಿವಣ್ಣ ಹೇಳಿದರು. ಶಿವಣ್ಣನ ಮಾತು ಕೇಳಿ ಮಂಜುನಾಥ ಮೂಕವಿಸ್ಮಿತನಾಗಿದ್ದ.
ಶಿವಣ್ಣ ತುಂಬ ಭಾವುಕರಾಗಿ ಮಾತನಾಡುತ್ತಾ, ಮಂಜುನಾಥನದು ಇನ್ನೂ ಸಣ್ಣ ವಯಸ್ಸು. ನೋವಿನ ಜತೆ ಪ್ರೀತಿ ಹಂಚಿಕೊಳ್ಳಬೇಕಾಯಿತಲ್ಲಾ ಅನ್ನಿಸುತ್ತಿದೆ. ಬಾಳಿ ಬದುಕ ಬೇಕಾದ ಹುಡುಗನಿಗೆ ಹೀಗಾಗಬಾರದಿತ್ತು. ನನ್ನ ಪ್ರೀತಿ ಮಂಜುನಾಥನಿಗೆ ಸಂಜೀವಿನಿಯಂತಾದರೆ ಅಷ್ಟೇ ಸಾಕು. ವೈದ್ಯರು ಅಪ್ಪಣೆ ಕೊಟ್ಟರೆ ಮೈಲಾರಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ದೇವರೇ ಯಾರಿಗೂ ಈ ರೀತಿಯ ನೋವು ಕೊಡಬೇಡಪ್ಪ ಎಂದು ಶಿವಣ್ಣ ಕಂಬನಿ ಮಿಡಿದರು. ತನ್ನ ಅಭಿಮಾನಿಯನ್ನು ಈ ಪರಿಸ್ಥಿತಿಯಲ್ಲಿ ನೋಡಿದ್ದು ನಿಜಕ್ಕೂ ನನಗೆ ತುಂಬಾ ನೋವಾಗಿದೆ. ಈ ಸಂದರ್ಭದಲ್ಲಿ 'ಮೈಲಾರಿ' ಚಿತ್ರದ ನಿರ್ದೇಶಕ ಆರ್ ಚಂದ್ರು, ನಿರ್ಮಾಪಕ ಶ್ರೀಕಾಂತ್ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಶಿವಣ್ಣನ ಭೇಟಿಯಿಂದ ಮಂಜುನಾಥನಿಗೆ ಹೊಸ ಜೀವ ಬಂದಂತಾಗಿತ್ತು. [ಹ್ಯಾಟ್ರಿಕ್ ಹೀರೋ]


Click it and Unblock the Notifications