ವಿಮಾನ ಕಂಡುಹಿಡಿದ ನಿಜವಾದ ವಿಜ್ಞಾನಿ ಕನ್ನಡಿಗ
ಮಂಗಳೂರಿನಲ್ಲಿ ಶನಿವಾರ ನಡೆದ ಏರ್ ಇಂಡಿಯಾ ವಿಮಾನ ದುರಂತ ನಡುವೆ ವಿಮಾನಕ್ಕೆ ಸಂಬಂಧ ಪಟ್ಟಂತೆ ಕುತೂಹಲಕಾರಿ ಸಂಗತಿಯೊಂದು ಬೆಳಕು ಕಂಡಿದೆ. ವಿಮಾನ ಕಂಡುಹಿಡಿದವರು ಯಾರು? ಎಂದು ಕೇಳಿದರೆ ರೈಟ್ ಸಹೋದರರುಅಂತ ಸಣ್ಣ ಮಕ್ಕಳು ಸಹ ಉತ್ತರಿಸುತ್ತಾರೆ. ಇದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ಸಣ್ಣ ಮಕ್ಕಳಿರಲಿ ದೊಡ್ಡವರೂ ಅರಗಿಸಿಕೊಳ್ಳಲಾಗದ ಸತ್ಯ ಏನೆಂದರೆ ವಿಮಾನ ಕಂಡುಹಿಡಿದದ್ದು ಕರ್ನಾಟಕದವರು ಎಂಬುದು.
ಹೌದು ಇತಿಹಾಸದ ಪುಟಗಳಲ್ಲಿ ದಾಖಲಾಗದ ಮಹತ್ವದ ಸಂಗತಿಯೊಂದು ಕನ್ನಡ ಚಿತ್ರವೊಂದರ ಮೂಲಕ ಅನಾವರಣಗೊಳ್ಳುತ್ತಿದೆ. ರೈಟ್ ಸಹೋದರರಿಗೂ ಮುನ್ನ ಬೆಂಗಳೂರು ಸಮೀಪದ ಆನೇಕಲ್ ನಲ್ಲಿದ್ದ ಸುಬ್ಬರಾಯ ಶಾಸ್ತ್ರಿಗಳು ವಿಮಾನ ತಯಾರಿಸಿ ಉಡಾಯಿಸಿದ್ದರು ಎಂಬುದೇ ಆ ಸತ್ಯ ಕಥೆ. ಸುದ್ದಿಯ ತುಣುಕೊಂದನ್ನು ಹುಡುಕುತ್ತಾ ಹೊರಟವನಿಗೆ ಕಡೆಗೆ ಸಿಕ್ಕಿದ್ದು ನಿಜವಾದ ವಿಮಾನ ತಯಾರಿಸಿದ ನಿಜವಾದ ವಿಜ್ಞಾನಿ.
| ಇತಿಹಾಸದ ಪುಟಗಳಲ್ಲಿ ಮುಚ್ಚಿಹೋದ ಸಂಗತಿಯೊಂದನ್ನು ಹೊರಗೆ ತರುವ ವಿನೂತನ ಪ್ರಯತ್ನವೇ 'ಪ್ರಪಾತ' | |
1903ರಲ್ಲಿ ಮಾರುತ್ಸಕ ಎಂಬ ವಿಮಾನವನ್ನು ಸುಬ್ಬರಾಯ ಶಾಸ್ತ್ರಿಗಳು ಮುಂಬೈನಲ್ಲಿ ಉಡಾಯಿಸಿದ್ದರು. ಬ್ರಿಟೀಷರ ಕುತಂತ್ರದಿಂದ ಈ ಸಂಗತಿ ಇತಿಹಾಸದಲ್ಲಿ ದಾಖಲಾಗಲಿಲ್ಲ. ಜಗದೀಶ ಚಂದ್ರ ಬೋಸರು ಬರೆದಿರುವ ಸುಬ್ಬರಾಯ ಶಾಸ್ತ್ರಿಗಳ ಜೀವನ ಚರಿತ್ರೆಯಲ್ಲಿ ಈ ಬಗ್ಗೆ ಉಲ್ಲೇಖವಿದೆ.
ಈ ಮಹತ್ವದ ಸಂಗತಿಯ ಬಗ್ಗೆ ದಶಕಗಳಿಂದ ಸಂಶೋಧನೆ ನಡೆಯುತ್ತಲೇ ಇದೆ. ಇದನ್ನೇ ಶ್ರೀಸಾಮನ್ಯನೊಬ್ಬ ಹುಡುಕಲು ಹೋದಾಗ ನಡೆಯುವ ಕಥೆಯೇ 'ಪ್ರಪಾತ' ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುಚೇಂದ್ರ ಪ್ರಸಾದ್. ಚಿತ್ರಕ್ಕಾಗಿ ಬಹಳಷ್ಟು ಶ್ರಮಿಸಿರುವ ಅವರು ಏಳೆಂಟು ವರ್ಷಗಳಿಂದ ಚಿತ್ರವನ್ನು ಸಿದ್ಧಪಡಿಸಿದ್ದಾರೆ.
ಸಿದ್ಧಸೂತ್ರಕ್ಕೆ ಜೋತು ಬೀಳದ ನಿರ್ದೇಶಕರು ಮುಂದಿನ ತಲೆಮಾರಿಗೆ ನಮ್ಮ ಪೂರ್ವಜರ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಎರಡುವರೆ ಗಂಟೆಗಳ ಕಾಲ ಚಿತ್ರರಸವತ್ತಾಗಿ ಹೆಜ್ಜೆ ಹೆಜ್ಜೆಗೆ ಪ್ರೇಕ್ಷಕರ ಕುತೂಹಲ ಇಮ್ಮಡಿಸಲಿದೆ. ಈಗಾಗಲೆ ಈ ಚಿತ್ರದ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅದೂ ಸದಭಿರುಚಿಯ ಪ್ರೇಕ್ಷಕರಿಗಾಗಿ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ಪ್ರಪಾತವನ್ನು ಕೊಂಡೊಯ್ಯುವ ಯೋಚನೆ ಇದೆ.


Click it and Unblock the Notifications











