ಬೆಂಕಿಯಲ್ಲಿ ಅರಳಿದ ಹೂವು ಬಾಲಚಂದರ್ಗೆ ಫಾಲ್ಕೆ
ಭಾರತೀಯ ಚಲನಚಿತ್ರ ಕ್ಷೇತ್ರಕ್ಕೆ ಸಲ್ಲಿಸಿದ ಅಪ್ರತಿಮ ಸಾಧನೆಗಾಗಿ 2010ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅನುಭವಿ ಚಲನಚಿತ್ರ ನಿರ್ದೇಶಕ ಕೆ ಬಾಲಚಂದರ್ ಅವರನ್ನು ವರಿಸಿದೆ. ಭಾರತೀಯ ಸಿನಿಮಾಗಳ ಅಭಿವೃದ್ಧಿ ಹಾಗೂ ಏಳಿಗೆಗೆ ಸಲ್ಲಿಸಿದ ಅಸಾಧಾರಣ ಸೇವೆಗಾಗಿ ಭಾರತ ಸರ್ಕಾರ ಈ ಗೌರವನ್ನು ಅವರಿಗೆ ನೀಡುತ್ತಿದೆ. ಪ್ರಶಸ್ತಿಯು ಸ್ವರ್ಣ ಕಮಲ, ರು.10 ಲಕ್ಷ ನಗದು ಹಾಗೂ ಶಾಲುವನ್ನು ಒಳಗೊಂಡಿದೆ.
ಚಲನಚಿತ್ರ ನಿರ್ದೇಶಕರಾಗಿ, ಚಿತ್ರಕತೆ ರಚನೆಕಾರರಾಗಿ ಹಾಗೂ ನಿರ್ಮಾಪಕರಾಗಿ ಚಲನಚಿತ್ರ ಕ್ಷೇತ್ರದಲ್ಲಿ 45 ವರ್ಷಗಳ ಸುದೀರ್ಘ ಹಾದಿಯನ್ನು ಸವೆಸಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ 100ಕ್ಕೂ ಅಧಿಕ ಚಿತ್ರಗಳನ್ನು ರಚಿಸಿ, ನಿರ್ಮಿಸಿ ನಿರ್ದೇಶಿಸಿದ್ದಾರೆ. ತಮ್ಮದೇ ಆದಂತಹ ವಿಶಿಷ್ಟ ಶೈಲಿಯ ಚಿತ್ರಗಳಿಗೆ ಬಾಲಚಂದರ್ ಹೆಸರಾದವರು. ಅವರು ರಚನೆಯ ಬಹುತೇಕ ಚಿತ್ರಗಳು ಮಾನವೀಯ ಸಂಬಂಧಗಳು ಹಾಗೂ ಸಾಮಾಜಿಕ ಕಳಕಳಿಯ ಕಥಾವಸ್ತುವನ್ನೊಳಗೊಂಡವಾಗಿವೆ. ಪ್ರಕಾಶ್ ರೈ, ರಜನಿಕಾಂತ್, ಕಮಲ ಹಾಸನ್, ವಿವೇಕ್ ಮುಂತಾದ ಎಷ್ಟೋ ಮಂದಿ ತಾರೆಗಳಿಗೆ ಲೈಫು ಕೊಟ್ಟ ಖ್ಯಾತಿ ಬಾಲಚಂದರ್ ಅವರಿಗೆ ಸಲ್ಲುತ್ತದೆ.
ಜುಲೈ 1930ರಲ್ಲಿ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನನ. ನಾಟಕ ರಚನೆಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಬಾಲಚಂದರ್, ಮೇಜರ್ ಚಂದ್ರಕಾಂತ್, ಸರ್ವಸ್ ಸುಂದರಂ ಮುಂತಾದ ನಾಟಕಗಳ ಮೂಲಕ ಮನೆಮಾತಾಗಿದ್ದರು. ಈ ನಾಟಕಗಳು ಮನರಂಜನೆಯ ಜೊತೆ ಉತ್ತಮ ವಿಮರ್ಶೆಗೂ ಪಾತ್ರವಾಗಿದ್ದವು.
ನಗೇಶ್ ಮುಖ್ಯಭೂಮಿಕೆಯಲ್ಲಿದ್ದ ತಮ್ಮ ಚೊಚ್ಚಲ 'ನೀರ್ಕುಮಿಝಿ' ಚಿತ್ರದ ಮೂಲಕ 1965ರಲ್ಲಿ ಬೆಳ್ಳಿ ಪರದೆಗೆ ಬಾಲಚಂದರ್ ಅಡಿಯಿಟ್ಟಿದ್ದರು. ಇಲ್ಲಿಯವರೆಗೆ ಅವರು ನಿರ್ದೇಶಿಸಿ, ನಿರ್ಮಿಸಿದ ಚಿತ್ರಗಳು ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾಗಿವೆ. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳು ಅವರನ್ನು ಪ್ರಶಸ್ತಿಗಳ ಮೂಲಕ ಗೌರವಿಸಿವೆ.
ಅಪೂರ್ವ ರಾಗಂಗಳ್, ಅವರ್ಗಳ್, 47 ನಟ್ಕಳ್, ಸಿಂಧು ಭೈರವಿ, ಏಕ್ ತುಜೇ ಕೆ ಲಿಯೇ(ಹಿಂದಿ), ತೆಲುಗಿನಲ್ಲಿ ಮರೋ ಚರಿತ್ರಾ ಹಾಗೂ ರುದ್ರವೀಣ ಹಾಗೂ ಕನ್ನಡದಲ್ಲಿ 'ಬೆಂಕಿಯಲ್ಲಿ ಅರಳಿದ ಹೂವು' ಚಿತ್ರಗಳು ಬಾಲಚಂದರ್ ಅವರಅಸಾಧಾರಣ ಪ್ರತಿಭೆಗೆ ಕನ್ನಡಿ ಹಿಡಿಯುವ ಚಿತ್ರಗಳು.
ಕಳೆದ ಐದು ವರ್ಷಗಳಿಂದ ಬಾಲಚಂದರ್ ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದು ಬೆಳ್ಳಿತೆರೆಯ ಮೇಲೆ ಪ್ರದರ್ಶಿಸಿದ ಪ್ರತಿಭೆಯನ್ನೇ ಇಲ್ಲೂ ಧಾರೆ ಎರೆಯುತ್ತಿದ್ದಾರೆ. 1987ರಲ್ಲಿ ಪದ್ಮ ಶ್ರೀ ಪ್ರಶಸ್ತಿ, 1973ರಲ್ಲಿ ತಮಿಳುನಾಡು ಸರ್ಕಾರದ ಪ್ರತಿಷ್ಠಿತ 'ಕಲೈಮಾಮಿಣಿ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆಂಧ್ರ ಸರ್ಕಾರದ'ನಂದಿ ಸ್ವರ್ಣ ಪ್ರಶಸ್ತಿ' ಹಾಗೂ 'ಫಿಲಂಫೇರ್ ಪ್ರಶಸ್ತಿ'ಗೂ ಭಾಜರಾಗಿದ್ದಾರೆ.


Click it and Unblock the Notifications











