'ಆಪ್ತರಕ್ಷಕ' ಗೆದ್ದರೆ ಅಷ್ಟೇ ಸಾಕು; ವಿಷ್ಣು ಅಭಿಮತ
ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯಿಸುತ್ತಿರುವ 200ನೇ ಚಿತ್ರ ಎಂಬ ವಿಶೇಷತೆಗೆ 'ಆಪ್ತ ರಕ್ಷಕ' ಚಿತ್ರ ಪಾತ್ರವಾಗಿದೆ. ಆದರೆ ವಿಷ್ಣು ಮಾತ್ರ ಈ ಅಂಕೆ ಸಂಖ್ಯೆಗಳ ಬಗ್ಗೆ ಒಂಚೂರು ಗಲಿಬಿಲಿಗೊಂಡಿದ್ದಾರೆ. ಸದ್ಯಕ್ಕೆ ಮೈಸೂರು, ಮೇಲುಕೋಟೆ ನಡುವೆ 'ಆಪ್ತರಕ್ಷಕ' ಸುತ್ತುತ್ತಿದ್ದಾನೆ.
ಪಿ ವಾಸು ನಿರ್ದೇಶನದ 'ಆಪ್ತಮಿತ್ರ' ಚಿತ್ರದ ಎರಡನೇ ಭಾಗ 'ಆಪ್ತರಕ್ಷಕ'. ''ಸುತ್ತಾಟದಿಂದ ಬಳಲಿಕೆಯಾಗಿದೆ. ಆದರೆ ಅಷ್ಟೇ ಎಂಜಾಯ್ ಮಾಡಿದ್ದೇನೆ. ನನ್ನ ಚಿತ್ರಗಳ ಸಂಖ್ಯೆ 200ರ ಗಡಿ ಮುಟ್ಟಿವೆಯೇ ಇಲ್ಲವೇ ಎಂಬುದು ನನಗೆ ನಿಜಕ್ಕೂ ಗೊತ್ತಿಲ್ಲ. ಇದೊಂದು ರೀತಿ ಕ್ರಿಕೆಟ್ ಆಟವಿದ್ದಂತೆ, ನಿರ್ಣಯ ಥರ್ಡ್ ಅಂಪೈರ್ ಗೆ ಬಿಟ್ಟಿದ್ದು ಎನ್ನ್ನುತ್ತಾರೆ ವಿಷ್ಣು.
ಕೆಲವರು ಹೇಳುತ್ತಾರೆ ಈಗಾಗಲೇ ನಾನು 200ನೇ ಚಿತ್ರವನ್ನು ಮುಗಿಸಿದ್ದೆನೆ ಎಂದು. ಮತ್ತೆ ಕೆಲವು ಹೇಳುತ್ತಾರೆ 200ನೇ ಚಿತ್ರಕ್ಕೆ ಇನ್ನು ಒಂದೇ ಒಂದು ಚಿತ್ರ ಬಾಕಿ ಇದೆ ಎಂದು. ಮತ್ತೂ ಕೆಲವರು ಆಪ್ತಮಿತ್ರ ಚಿತ್ರವೇ 200ನೇ ಚಿತ್ರ ಎನ್ನುತ್ತಾರೆ ಎಂದು ವಿಷ್ಣು ಪ್ರತಿಕ್ರಿಯಿಸಿದರು.
ನನ್ನ ಮಟ್ಟಿಗೆ 'ಆಪ್ತರಕ್ಷಕ' ಚಿತ್ರ ಸಕ್ಸಸ್ ಆದರೆ ಅಷ್ಟೇ ಸಾಕು. 37 ವರ್ಷಗಳ ನನ್ನ ವೃತ್ತಿ ಬದುಕಿನಲ್ಲಿ ನನ್ನೊಂದಿಗಿರುವ ಪ್ರತಿಯೊಬ್ಬರೂ ಈ ಗೆಲುವನ್ನು ಸಂಭ್ರಮಿಸಬೇಕು. ಕೆಟ್ಟ ಮತ್ತು ಒಳ್ಳೆ ದಿನಗಳಲ್ಲೂ ನನ್ನೊಂದಿಗಿರುವ ಪ್ರತಿಯೊಬ್ಬರಿಗಾಗಿಯೂ ಈ ಚಿತ್ರ ಎಂದು ಸಾಹಸ ಸಿಂಹ ಹೇಳಿದರು.
ಶೇ.80 ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಆಪ್ತಮಿತ್ರ ನೋಡಿದವರು ಈ ಚಿತ್ರವನ್ನು ನೋಡೇ ನೋಡುತ್ತಾರೆ. ಆಪ್ತಮಿತ್ರ ನೋಡದವರು ಆಪ್ತ ರಕ್ಷಕ ನೋಡಿದ ಬಳಿಕ ಖಂಡಿತ ನೋಡುತ್ತಾರೆ. ಆಪ್ತಮಿತ್ರ ಅನಿರೀಕ್ಷಿತ ಗೆಲುವು. ಆದರೆ ಆಪ್ತರಕ್ಷಕ ಚಿತ್ರದ ಮೇಲೆ ಅಪಾರ ಭರವಸೆ ಇದೆ. ಒಂಚೂರು ದಿಗುಲು ಉಂಟು. ಆದರೆ ವಾಸು ಅವರ ನಿರ್ದೇಶನ ಎಲ್ಲವನ್ನೂ ಮರಿಸಿದೆ. ಮೂಲ ಚಿತ್ರಕ್ಕಿಂತಲೂ ಉತ್ತಮವಾಗಿ ಈ ಚಿತ್ರ ಮೂಡಿಬಂದಿದೆ ಎಂದು ವಿಷ್ಣು ಆಶಾಭಾವ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











