ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್ ನಾರಾಯಣ್ ಪುತ್ರ: ಸಿಎಂ ಸೇರಿ ಗಣ್ಯರು ಭಾಗಿ
ಕನ್ನಡದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರ ಮನೆ ಮದುವೆ ಸಂಭ್ರಮದಿಂದ ಕೂಡಿದೆ. ನಟ, ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ್ ಅವರ ಪುತ್ರ ಪವನ್ ಕುಮಾರ್ ಇಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ.
ಫೆಬ್ರವರಿ 21ರ ಬೆಳಗ್ಗೆ 7.30 ರಿಂದ 8.30 ಗಂಟೆಗೆ ನಡೆದ ಶುಭ ಲಗ್ನದಲ್ಲಿ ಪವಿತ್ರಾ ಅವರನ್ನು ಪವನ್ ಕುಮಾರ್ ವರಿಸಿದ್ದಾರೆ. ನಂತರ 10 ಗಂಟೆಗೆ ಆರತಕ್ಷತೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು.
ಎಸ್ ನಾರಾಯಣ್ ಅವರ ಪುತ್ರನ ವಿವಾಹಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಗಣ್ಯರು ಆಗಮಿಸಿದ್ದರು. ಸಚಿವ ಗೋಪಾಲಯ್ಯ ಸಹ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚಿತ್ರರಂಗದಿಂದಲೂ ಅನೇಕ ಗಣ್ಯರು ಪವನ್ ಕುಮಾರ್ ಮದುವೆಗೆ ಆಗಮಿಸಿ ನವಜೋಡಿಗೆ ಶುಭಹಾರೈಸಿದ್ದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ನಟ ಶರಣ್, ಶ್ರೀಮುರಳಿ, ಸುಧಾರಾಣಿ, ಮಾಳವಿಕಾ ಅವಿನಾಶ್, ಮುಖ್ಯಮಂತ್ರಿ ಚಂದ್ರು, ಅಮೂಲ್ಯ ಅವರು ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟ ಆದಿತ್ಯ, ಸುಂದರ್ ರಾಜ್, ಪ್ರಮಿಳಾ ಜೋಶಾಯ್ ಹಾಗೂ ಹಿರಿಯ ನಟ ದೇವರಾಜ್ ಸೇರಿದಂತೆ ಹಲವರು ಎಸ್ ನಾರಾಯಣ್ ಪುತ್ರನ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಅಂದ್ಹಾಗೆ, ಪವನ್ ಕುಮಾರ್ 'ರತ್ನ' ಎಂಬ ಸಿನಿಮಾದಲ್ಲಿ ನಾಯಕನಟನಾಗಿ ನಟಿಸಿದ್ದರು. ಅದಾದ ಬಳಿಕ ನವಮಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.


Click it and Unblock the Notifications











