ನಾದ ಬ್ರಹ್ಮ ಹಂಸಲೇಖ ಅವರನ್ನು ನಟ ಚೇತನ್ ಭೇಟಿ ಆಗಿದ್ದು ಯಾಕೆ?
ನಾದ ಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ಇತ್ತೀಚೆಗೆ ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಮಾನತೆ ಹಾಗೂ ಅಸ್ಪೃಶ್ಯತೆ ಬಗ್ಗೆ ಸಂದೇಶ ಸಾರುವ ವೇಳೆ ಪೇಜಾವರ ಶ್ರೀಗಳ ವಿಷಯವನ್ನು ಪ್ರಸ್ತಾಪಿಸಿದ್ದರು.
ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಪರ ಹಾಗೂ ವಿರೋಧ ಚರ್ಚೆಗಳು ಕೂಡ ಹುಟ್ಟಿವು. ಹಾಗಾಗಿ ಈ ವಿಚಾರವಾಗಿ ನಾದಬ್ರಹ್ಮ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಹಂಸಲೇಖ ಅವರು ಕ್ಷಮೆಯಾಚಿಸಿದ ಬಳಿಕವೂ ಅವರ ವಿರುದ್ಧ ದೂರುಗಳು ದಾಖಲಾಗಿವೆ. ಈಗ ನಟ ಚೇತನ್ ಕುಮಾರ್ ಹಂಸ ಲೇಖ ಅವರನ್ನು ಭೇಟಿ ಮಾಡಿದ್ದಾರೆ. ಇವರ ಭೇಟಿ ಕುತೂಹಲಕ್ಕೆ ಕಾರಣ ಆಗಿದೆ.

ಸಾಮಾಜಿಕ ಪರಿವರ್ತನೆ ಬಗ್ಗೆ ಚಿಂತನೆ ಅವರಲ್ಲಿದೆ: ಚೇತನ್ ಕುಮಾರ್
ವಿವಾದದ ಬಳಿಕ ನಟ ಚೇತನ್ ಹಂಸಲೇಖ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಂಸಲೇಖ ಭೇಟಿಯ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಚೇತನ್ ಮಾತನಾಡಿದ್ದಾರೆ.
"ಹಂಸಲೇಖ ಅವರು ಬಹಳ ಗಟ್ಟಿ ವ್ಯಕ್ತಿತ್ವ ಉಳ್ಳವರು. ನಮ್ಮ ಸಮಾಜಕ್ಕೆ ಯುವಕರ ಕೊಡುಗೆಗಳು ಏನಾಗಿರಬೇಕು. ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ಯಾಕೆ ಆಗಬೇಕು. ಈ ಬದಲಾವಣೆಗೆ ಇಂದಿನ ಯುವಕರು ಹೇಗೆ ಮುಂದಾಗಬೇಕು ಎನ್ನುವ ಬಗ್ಗೆ ಅವರು ಸಾಕಷ್ಟು ಚಿಂತನೆ ನಡೆಸಿದ್ದಾರೆ. ಅವರು ಚಿತ್ರರಂಗಕ್ಕೆ ಮಾತ್ರವಲ್ಲ ನಮ್ಮ ಸಾಮಾಜಕ್ಕೆ ಅವರ ಚಿಂತನೆಗಳು ಮುಖ್ಯ ಆದುವು". ಎಂದಿದ್ದಾರೆ.

ವಾಕ್ ಸ್ವಾತಂತ್ರದ ಬಗ್ಗೆ ನಟ ಚೇತನ್ ಮಾತು!
ಹಂಸಲೇಖ ಅವರ ಭೇಟಿಯ ವಿಚಾರವನ್ನು ಹೊರತು ಪಡಿಸಿ ನಟ ಚೇತನ್ ಮಾತನಾಡಿದ್ದಾರೆ. "ಇದು ವಾಕ್ ಸ್ವತಂತ್ರದ ಪ್ರಶ್ನೆ. ಇಂದು ಅವರು ನಾಳೆ ಮತ್ತೊಬ್ಬರು. ಕೆಲವು ವಿಚಾರಗಳ ಬಗ್ಗೆ ಮಾತನಾಡ ಬಾರದು ಎನ್ನುವಂತೆ ಕಟ್ಟಿ ಹಾಕಲಾಗುತ್ತಿದೆ. ವಾಕ್ಸ್ವಾತಂತ್ರ ಕಿತ್ತು ಕೊಳ್ಳುವ ಪ್ರಯತ್ನ ಇದು. ಎಲ್ಲರಿಗೂ ಮಾತನಾಡುವ ಮತ್ತು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ಹಕ್ಕಿದೆ. ಅದನ್ನು ಯಾರು ಕಸಿದು ಕೊಳ್ಳ ಬಾರದು" ಎಂದಿದ್ದಾರೆ.

ಹಂಸಲೇಖ ಕ್ಷಮೆ ಬಳಿಕ ತಣ್ಣಗಾದ ವಿವಾದ!
ಹಂಸಲೇಖ ಪೇಜಾವರ ಶ್ರೀಗಳ ಬಗ್ಗೆ ಮಾತನಾಡುತ್ತಲೇ ವಿವಾದ ಭುಗಿಲೆದ್ದಿತ್ತು. ಅವರ ವಿರುದ್ಧ ದೂರುಗಳು ದಾಖಲಾಗಿದ್ದವು. ಆದರೆ ಅವರು ಕ್ಷಮೆ ಕೇಳಿದ ಬಳಿಕ ಈಗ ಈ ವಿವಾದ ಕೊಂಚ ತಣ್ಣಗೆ ಆದ ಹಾಗಿದೆ. ಅವರ ವಿರುದ್ಧ ದೂರು ನೀಡಿದ್ದ ಕೆಲವರು ಹಿಂಪಡೆದಿದ್ದಾರೆ. ಈ ವಿಚಾರ ಸತತವಾಗಿ ಎಡು ಮೂರು ದಿನ ಭಾರಿ ಸುದ್ದಿಯಲ್ಲಿ ಇತ್ತು. ಆದರೆ ಹಂಸಲೇಖ ಅವರು ತಮ್ಮ ಪತ್ನಿಯ ಬಳಿಯೂ ಈ ವಿಚಾರವಾಗಿ ಕ್ಷಮೆ ಕೇಳಿದ್ದೇನೆ ಎಂದು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ನಂತರ ಈ ವಿವಾದ ಶಾಂತವಾಗಿದೆ.

ಎಂದಿನಂತೆ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗಿ!
ಇನ್ನೂ ಈ ವಿವಾದ ಭುಗಿಲೇಳುತ್ತಲೇ, ಹಂಸಲೇಖ ಅವರು ಟಿವಿ ರಿಯಾಲಿಟಿ ಶೋನಲ್ಲಿ ಭಾಗವಹಿಸುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಹಾಡಿನ ಈ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಮಹಾಗುರುಗಳ ಸ್ಥಾನದಲ್ಲಿ ಇದ್ದಾರೆ. ಹಾಗಾಗಿ ಮಹಾಗುರುಗಳು ಇಲ್ಲದೆ ಕಾರ್ಯಕ್ರಮ ಹೇಗೆ ನಡೆಯುತ್ತೆ ಎನ್ನು ಸುದ್ದಿಗಳು ಹರಿದಾಡಿದ್ದವು. ಆದರೆ ಹಂಸಲೇಖ ಅವರು ಎಂದಿನಂತೆ ಈ ವಾರವೂ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.


Click it and Unblock the Notifications











