ದರ್ಶನ್ ಅಭಿಮಾನಿಗಳಿಂದ ಮುತ್ತಿಗೆ: ಜಾತಿ ಬಗ್ಗೆ ಮಾತನಾಡಿದ್ದು ಬೇಸರವಾಯ್ತು ಎಂದ ಜಗ್ಗೇಶ್
ಕನ್ನಡದ ಹಿರಿಯ ನಟ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು, ಧಿಕ್ಕಾರ ಕೂಗಿ, ಜಗ್ಗೇಶ್ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದರು. ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ಜಗ್ಗೇಶ್ ಅವರು ನಿರ್ಮಾಪಕರೊಬ್ಬರ ಬಳಿ ಫೋನಿನಲ್ಲಿ ಮಾತನಾಡುತ್ತಾ, ದರ್ಶನ್ ಅವರ ಅಭಿಮಾನಿಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಜಗ್ಗೇಶ್ ಹಾಗೂ ನಿರ್ಮಾಪಕನ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ದರ್ಶನ್ ಅಭಿಮಾನಿಗಳು, ಇಂದು ಮೈಸೂರಿನ ಬನ್ನೂರು ಬಳಿ ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ಏರು ದನಿಯಲ್ಲಿ ವಾಗ್ವಾದ ಮಾಡಿದ್ದಾರೆ. ಅವರ ಬಲವಂತಕ್ಕೆ ಮಣಿದು ಜಗ್ಗೇಶ್ ಸಹ ಕ್ಷಮೆ ಕೇಳಿದ್ದಾರೆ. ಘಟನೆ ನಂತರ ಖಾಸಗಿ ಮಾಧ್ಯಮಕ್ಕೆ ಎಲ್ಲ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ ನಟ ಜಗ್ಗೇಶ್.

ನಾನು ಮಾತನಾಡಿದ್ದು ಬೇರೆ ದರ್ಶನ್ ಬಗ್ಗೆ: ಜಗ್ಗೇಶ್
''ಇಂದಿನ ಘಟನೆ ಬೇಸರ ತಂದಿದೆ. 15-20 ಜನ ಬಂದು ಕ್ಷಮೆ ಕೇಳುವಂತೆ ಒತ್ತಾಯ ಮಾಡಿದರು. ಅವರ್ಯಾರೂ ನನ್ನ ಮಾತನ್ನು ಕೇಳಿಸಿಕೊಳ್ಳಲು ಸಹ ತಯಾರಿರಲಿಲ್ಲ. ಆ ಆಡಿಯೋ ಕ್ಲಿಪ್ನಲ್ಲಿ ನಾನು ಮಾತನಾಡಿರುವುದು ವೆಬ್ ಡಿಸೈನರ್ ದರ್ಶನ್ ಎಂಬ ವ್ಯಕ್ತಿ ಬಗ್ಗೆ. ಮತ್ತೊಬ್ಬ ಟ್ರೋಲ್ ಪೇಜ್ ಅಡ್ಮಿನ್ಗೆ ಹಣ ಕೊಡಿ, ಈ ವೆಬ್ ಡಿಸೈನರ್ ದರ್ಶನ್ ತುಸು ತರ್ಲೆ, ತಿಂಡಿಪೋತ ಅವನಿಗೆ ಕೊಡಬೇಡಿ' ಎಂದು ಹೇಳಿದ್ದೆ. ಆದರೆ ಅದನ್ನು ನಟ ದರ್ಶನ್ಗೆ ಹೇಳಿದ್ದೀನಿ ಎನ್ನುವಂತೆ ತಿರುಚಿಬಿಟ್ಟರು'' ಎಂದು ಹೇಳಿದ್ದಾರೆ ಜಗ್ಗೇಶ್.

ನಾನು ದರ್ಶನ್ ಚೆನ್ನಾಗಿದ್ದೇವೆ: ಜಗ್ಗೇಶ್
''ಆರ್ಎಸ್ಎಸ್ ಬೆಂಬಲದ ಪತ್ರಿಕೆಗೆ ಜಾಹೀರಾತು ಕೊಡಿ ಎಂದು ಹೇಳಿದ್ದೆ, ಇದು ಒಂದು ಚಾನೆಲ್ಗೆ ಸರಿಬರಲಿಲ್ಲ, ಅವರು ನನ್ನ ವಿರುದ್ಧ ಸುಳ್ಳು ವರದಿಗಳನ್ನು ಬಿತ್ತರ ಮಾಡಿದರು. ನನ್ನ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ತಂದಿಟ್ಟರು. ನಾನು ದರ್ಶನ್ ಚೆನ್ನಾಗಿದ್ದೇವೆ, ಮೊನ್ನೆಯಷ್ಟೆ ಅವನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದೀನಿ, ಅವನು ಥ್ಯಾಂಕ್ಸ್ ಹೇಳಿದ್ದಾನೆ, ಇದಕ್ಕಿಂತಲೂ ಉದಾಹರಣೆ ಬೇಕೆ' ಎಂದು ಪ್ರಶ್ನಿಸಿದರು ಜಗ್ಗೇಶ್.

'ನನ್ನ ಜಾತಿಯ ಬಗ್ಗೆ ಕೆಲವರು ಮಾತನಾಡಿದ್ದು ಬಹಳ ಬೇಸರವಾಯ್ತು'
'ಇಂದಿನ ಘಟನೆಯಲ್ಲಿ ಕೆಲವರು ನನ್ನ ಜಾತಿ ಬಗ್ಗೆ ಮಾತನಾಡಿದರು ಅದು ಬಹಳ ಬೇಸರ ತರಿಸಿತು. ''ಇನ್ನು ಒಕ್ಕಲಿಗರ ಆಟ ನಡೆಯಲ್ಲ'' ಎಂದರು. ನಾನು ಯಾವತ್ತೂ ಜಾತಿ ಹೆಸರು ಹೇಳಿಕೊಂಡು ಸಿನಿಮಾ ಮಾಡಿಲ್ಲ. ನಾವೆಲ್ಲ ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರನ್ನು ಅನುಸರಿಸಿಕೊಂಡು ಕಲಿತವರು. ಇವತ್ತು ನಡೆದಿದ್ದು ಏನು ಎಂದರೆ, ನಾವು ಬಹಳ ಶಕ್ತಿವಂತರು, ನಾವು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡುತ್ತೀವಿ ಎಂಬುದನ್ನು ತೋರಿಸಲು ಮಾಡಿದ ಹುನ್ನಾರದಂತಿತ್ತು. ಇವತ್ತಿನ ಘಟನೆಯಲ್ಲಿ ತುಸು ರಾಜಕೀಯದ ವಾಸನೆ ಬರುತ್ತಿದೆ' ಎಂದು ಅನುಮಾನ ವ್ಯಕ್ತಪಡಿಸಿದರು ನಟ ಜಗ್ಗೇಶ್.

'ಒಬ್ಬರ ಮೇಲೆ ಒಬ್ಬರಿಗೆ ತಂದಿಡುವುದೇ ಕೆಲವರ ಕೆಲಸವಾಗಿದೆ'
'ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುಳ್ಳು ಸುದ್ದಿ ಹರಿದಾಡುತ್ತಿದೆ. ಕೆಲವು ಯೂಟ್ಯೂಬರ್ಸ್ಗಳಿಗಂತೂ ಕೆಲಸವೇ ಇಲ್ಲ. ಒಬ್ಬರ ಮೇಲೆ ಮತ್ತೊಬ್ಬರಿಗೆ ತಂದಿಡುವುದೇ ಅವರ ಕೆಲಸ. ಕೆಲವು ದಿನಗಳ ಹಿಂದೆ ನಾನು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದೆ, ನಾನು ಯಶ್ಗೆ ಹೇಳಿದ್ದೇನೆ ಎಂದು ಅದನ್ನು ತಿರುಚಿದರು. ಯಶ್ ಫ್ಯಾನ್ಗಳು ನನ್ನ ಮೇಲೆ ಮುಗಿಬೀಳುವಂತೆ ಮಾಡಿದರು. ಸಿನಿಮಾದಲ್ಲಿ ರಾಜಕೀಯ ತುಂಬಾ ಆಗಿಬಿಟ್ಟಿದೆ' ಎಂದು ಬೇಸರ ವ್ಯಕ್ತಪಡಿಸಿದರು ನಟ ಜಗ್ಗೇಶ್.

ದರ್ಶನ್ ನನಗೆ ಶತ್ರುವಲ್ಲ, ನಾನು ಅವನಿಗೆ ಶತ್ರುವಲ್ಲ: ಜಗ್ಗೇಶ್
''ಕನ್ನಡ ಚಿತ್ರರಂಗ ಸರ್ವನಾಶವಾದರೆ ಅದಕ್ಕೆ ಸ್ಟಾರ್ ವಾರ್ ಕಾರಣವಾಗುತ್ತೆ, ದೊಡ್ಡೋರು-ಚಿಕ್ಕೋರು ಎಂಬ ಮರ್ಯಾದೆ ಇಲ್ಲ. ದಯವಿಟ್ಟು ಕಲಾವಿದರು-ಕಲಾವಿದರು ಕಿತ್ತಾಡಬೇಡಿ, ಇದು ಉದ್ಯಮಕ್ಕೆ ಒಳ್ಳೆಯದಲ್ಲ. ನಿಜವಾಗಿಯೂ ಹೋರಾಟ ಮಾಡುವ ಮನೋಭಾವ ಇದ್ದರೆ ಉದ್ಯಮದ ಏಳಿಗೆಗಾಗಿ ಹೋರಾಡಿ. ದರ್ಶನ್ ಫ್ಯಾನ್ಸ್ ಸಾಕಷ್ಟು ಒಳ್ಳೆಯವರು, ನನಗೂ ಸಾಕಷ್ಟು ಹುಡುಗರ ಪರಿಚಯ ಇದೆ. ನನಗೆ ದರ್ಶನ್ ಶತ್ರುವಲ್ಲ, ನಾನು ಅವನಿಗೆ ಶತ್ರುವಲ್ಲ. ಅವನೊಬ್ಬ ಒಳ್ಳೆಯ ನಟ ಒಳ್ಳೆಯ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟಿದ್ದಾನೆ, ಸಾಕಷ್ಟು ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಕರೆತಂದಿದ್ದಾನೆ' ಎಂದರು ಜಗ್ಗೇಶ್.


Click it and Unblock the Notifications











