ಚಿಕಿತ್ಸೆಗೂ ಹಣ ಇಲ್ಲ: ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟ
Recommended Video
ಇತ್ತೀಚಿಗಷ್ಟೆ ಒಂದು ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಮಾತನಾಡುತ್ತಾ ಭಾವುಕರಾಗಿದ್ದರು. 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಒಬ್ಬ ಕಲಾವಿದನ ಇಂದಿನ ಬದುಕನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದರು.
ಜಗ್ಗೇಶ್ ಅಂದು ಮಾತನಾಡಿದ ಕಲಾವಿದ ಯಾರು ಎನ್ನುವದನ್ನು ಇದೀಗ ತಿಳಿಸಿದ್ದಾರೆ. ಅವರು ಕನ್ನಡ ಚಿತ್ರರಂಗದ ಪೋಷಕ ನಟ ಕಿಲ್ಲರ್ ವೆಂಕಟೇಶ್. ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಈ ಕಲಾವಿದ ಇಂದು ಅವಕಾಶಗಳೆ ಇಲ್ಲದೆ ಕುಳಿತಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಕಿಲ್ಲರ್ ವೆಂಕಟೇಶ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರ ಪರಿಸ್ಥಿತಿಯ ಬಗ್ಗೆ ನಟ ಜಗ್ಗೇಶ್ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರ ಸ್ಥಿತಿ ಕಂಡರೆ ನಿಜಕ್ಕೂ ಬೇಸರವಾಗುತ್ತದೆ.

ಲಿವರ್ ಸಮಸ್ಯೆ
ನಟ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಜೊತೆಗೆ ಚಿಕಿತ್ಸೆಗೆ ಹಣದ ಅಗತ್ಯ ಕೂಡ ಇದೆ. ಒಂದು ಕಡೆ ಸಾವು ಬದುಕಿನ ನಡುವೆ ವೆಂಕಟೇಶ್ ಹೋರಾಡುತ್ತಿದ್ದರೆ, ಅವರ ಕುಟುಂಬ ಆಸ್ಪತ್ರೆಗೆ ಹಣ ಕಟ್ಟಲು ಒದ್ದಾಡುತ್ತಿದ್ದಾರೆ.

ನಟ ಜಗ್ಗೇಶ್ ಟ್ವೀಟ್
ಕಿಲ್ಲರ್ ವೆಂಕಟೇಶ್ ಬಗ್ಗೆ ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ. ''250 ಕನ್ನಡ ಚಿತ್ರ ನಟಿಸಿದ ಮಿತ್ರ ಕಿಲ್ಲರ್ ವೆಂಕಟೇಶ ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ. ಇವನ ವಿಷಯವೇ ನಾನು ಚಂದನವನ ಅವಾರ್ಡ್ ವೇದಿಕೆಯಲ್ಲಿ ಮಾತಾಡಿದ್ದು. ತುಂಬಾ ದುಃಖವಾಯಿತು ಹಿರಿಯ ಕಲಾವಿದರ ಸ್ಥಿತಿ ಕಂಡು.'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕೈಲಾದ ಸಹಾಯ ಮಾಡಿದ ಜಗ್ಗೇಶ್
''ನನ್ನ ಕೈಲಾದ ಸಹಾಯ ಮಾಡಿ ಇವನ ಉಳಿಸಿಕೊಳ್ಳಲು ಯತ್ನಿಸುತ್ತಿರುವೆ. ರಾಯರೆ ಕಾಪಾಡಬೇಕು ಇಂಥ ಕಲಾವಿದರ..ಹರಿ ಓಂ'' ಎಂದು ಜಗ್ಗೇಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಕಿಲ್ಲರ್ ವೆಂಕಟೇಶ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ ಜಗ್ಗೇಶ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

250ಕ್ಕೂ ಹೆಚ್ಚು ಸಿನಿಮಾಗಳು
ಕಿಲ್ಲರ್ ವೆಂಕಟೇಶ್ ಒಂದು ಕಾಲದಲ್ಲಿ ಬೇಡಿಕೆಯ ಖಳನಟ ಹಾಗೂ ಪೋಷಕನಟರಾಗಿದ್ದರು. 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 'ರಣಧೀರ' ಸಿನಿಮಾದಲ್ಲಿ ಜಗ್ಗೇಶ್ ಹಾಗೂ ಕಿಲ್ಲರ್ ವೆಂಕಟೇಶ್ ಜೊತೆಗೆ ನಟಿಸಿದ್ದರು. ಆ ನಂತರ ಜಗ್ಗೇಶ್ ಹೀರೋ ಆದರು. ಆದರೆ, ಪೋಷಕ ಪಾತ್ರಗಳಲ್ಲಿಯೇ ವೆಂಕಟೇಶ್ ಉಳಿದುಕೊಂಡರು. ಬರುಬರುತ್ತಾ ಸಿನಿಮಾ ಅವಕಾಶಗಳು ಕಡಿಮೆಯಾಯಿತು. ಈಗ ಯಾವುದೇ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ.


Click it and Unblock the Notifications











