'ಕಾಂತಾರ'ಕ್ಕೆ ಧರ್ಮ, ಜಾತಿ ಬಣ್ಣ ಬಳಿಯಬೇಡಿ: ನಟ ಕಿಶೋರ್
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಸಿನಿಮಾದ ವಿಷಯವನ್ನಿಟ್ಟುಕೊಂಡು ಅದಕ್ಕೆ ಧರ್ಮ, ಜಾತಿ, ವೈದಿಕ-ಅವೈದಿಕ, ಬ್ರಾಹ್ಮಣ್ಯ-ಮೂಲ ನಿವಾಸಿಗಳು ಇತರ ಕೋನಗಳನ್ನು ನೀಡಿ ಪರಸ್ಪರ ನಿಂದನೆ ನಡೆಯುತ್ತಿದೆ.
'ಕಾಂತಾರ'ದಲ್ಲಿ ತೋರಿಸಲಾಗಿರುವ ದೈವಾರಾಧನೆ, ಭೂತಕೋಲಗಳು ಹಿಂದು ಧರ್ಮದ ಭಾಗವಲ್ಲ ಎಂದಿರುವುದಂತೂ ದೊಡ್ಡ ಮಟ್ಟಿನ ವಿವಾದ ಹುಟ್ಟುಹಾಕಿದೆ. ಚೇತನ್ ಹೇಳಿಕೆಗೆ, ನಟ ರಿಷಬ್ ಶೆಟ್ಟಿ, ಉಪೇಂದ್ರ ಹಾಗೂ ಇತರರು ಸ್ಪಂದಿಸಿದ್ದಾರೆ. ಇದೀಗ 'ಕಾಂತಾರ' ಸಿನಿಮಾದಲ್ಲಿ ನಟಿಸಿರುವ ನಟ ಕಿಶೋರ್ ಸಹ ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ನಟ ಕಿಶೋರ್, ''ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ಮನವಿ. ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ??'' ಎಂದು ಪ್ರಶ್ನೆ ಮಾಡಿದ್ದಾರೆ.

'ಜಾತಿ, ಧರ್ಮ, ಭಾಷೆ ಮೀರಿ ಜನಗಳನ್ನು ಬೆಸೆಯುತ್ತಿದೆ'
''ಎಲ್ಲ ಒಳ್ಳೆಯ ಸಿನಿಮಾಗಳಂತೆ 'ಕಾಂತಾರ' ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನು ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿಹೋದೀತು'' ಎಂದು ಎಚ್ಚರಿಸಿದ್ದಾರೆ ಕಿಶೋರ್.

ದ್ವೇಷದ ದಲ್ಲಾಳಿಗಳು: ಕಿಶೋರ್ ಆಕ್ರೋಶ
''ಕೇವಲ ಓಟಿಗಾಗಿ ಪಟೇಲ್ ಗಾಂಧಿ, ಬೋಸ್, ನೆಹರೂ ಸಹಿತ ಕೋಟಿ ಕೋಟಿ ಸ್ವತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ, ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನ ಒಂದು ಕ್ಷಣ ಯೋಚಿಸಿ. ನಮ್ಮ ಸಿನಿಮಾಗಳು ನಮ್ಮ ಹೆಮ್ಮೆ. ಅವುಗಳನ್ನು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ'' ಎಂದು ಮನವಿ ಮಾಡಿದ್ದಾರೆ ಕಿಶೋರ್.

ಕೃಷಿಕರ ಸಮಸ್ಯೆ ಬಗ್ಗೆ ಮಾತನಾಡುವ ಕಿಶೋರ್
ನಟ ಕಿಶೋರ್, ಸಮಾಜಪರ ಆಲೋಚನೆಗಳನ್ನು ಇಟ್ಟುಕೊಂಡಿರುವ ಅಪರೂಪದ ನಟ. ನಟನೆ ಜೊತೆಗೆ ಕೃಷಿ ಚಟುವಟಿಕಗಳಲ್ಲಿ ಸಹ ತೊಡಗಿಕೊಂಡಿರುವ ಕಿಶೋರ್, ಆಗಾಗ್ಗೆ ಕೃಷಿಕರ ಸಮಸ್ಯೆಗಳ ಬಗ್ಗೆಯೂ ಮಾತನಾಡುವುದುಂಟು. ಜೊತೆಗೆ ಧರ್ಮ, ಜಾತಿ ಆಧಾರದಲ್ಲಿ ವ್ಯಕ್ತಿಗಳನ್ನು ಒಡೆದು ಆಳುವ ರಾಜಕಾರಣದ ವಿರುದ್ಧವೂ ಮಾತನಾಡುತ್ತಾ ಬಂದಿದ್ದಾರೆ. ಇದೀಗ 'ಕಾಂತಾರ' ಸಿನಿಮಾದ ಚರ್ಚೆಗೆ ಕಿಶೋರ್ ಧುಮುಕಿರುವುದು ಕುತೂಹಲ ಕೆರಳಿಸಿದೆ. ಸ್ವತಂತ್ರ್ಯ ಆಲೋಚನೆಯ ಹಾಗೂ ಸಿನಿಮಾದಲ್ಲಿ ಪಾತ್ರವೂ ಆಗಿರುವ ಕಿಶೋರ್ ಅವರ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವವೂ ಇದೆ.

ಅರಣ್ಯಾಧಿಕಾರಿ ಪಾತ್ರದಲ್ಲಿ ನಟಿಸಿರುವ ಕಿಶೋರ್
ನಟ ಕಿಶೋರ್, 'ಕಾಂತಾರ' ಸಿನಿಮಾದಲ್ಲಿ ಅರಣ್ಯಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಸರ್ಕಾರ ಹಾಗೂ ಅರಣ್ಯವಾಸಿಗಳ ನಡುವಿನ ತಿಕ್ಕಾಟದ ರೂಪಕದಂತೆ ಕಿಶೋರ್ ಹಾಗೂ ರಿಷಬ್ ಶೆಟ್ಟಿ ನಡುವಿನ ದೃಶ್ಯಗಳಿವೆ. ಮೊದಲಾರ್ಧದ ವರೆಗೆ ಕಿಶೋರ್ ವಿಲನ್ ರೀತಿ ಕಾಣುತ್ತಾರಾದರೂ ಆ ಬಳಿಕ ಅವರ ಪಾತ್ರದಲ್ಲಿ ಬದಲಾವಣೆ ಆಗುತ್ತದೆ. ಅಂತಿಮವಾಗಿ, ದೈವವು ಕಿಶೋರ್ ಹಾಗೂ ಗ್ರಾಮದ ಜನರ ಕೈಗಳನ್ನು ಒಟ್ಟಿಗೆ ಹಿಡಿದುಕೊಂಡು ಸರ್ಕಾರ, ಜನಗಳು ಒಟ್ಟಿಗೆ ಜೊತೆಯಾಗಿ ಸಾಗಬೇಕು ಎಂಬ ಸಂದೇಶವನ್ನು ನೀಡುತ್ತದೆ. ಈ ದೃಶ್ಯದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.


Click it and Unblock the Notifications











