ಕೋಮಲ್ ವಿರುದ್ಧ ಭ್ರಷ್ಟಾಚಾರ ಆರೋಪ: ಸಂಬಂಧವೇ ಇಲ್ಲ ಎಂದ ನಟ
ನಟ ಕೋಮಲ್ ವಿರುದ್ಧ ಭ್ರಷ್ಟಾಚಾರ ಆರೋಪವೊಂದು ಕೇಳಿ ಬಂದಿದೆ. ನಟರಾಗಿರುವ ಜೊತೆಗೆ ಉದ್ಯಮಿಯೂ ಆಗಿರುವ ಕೋಮಲ್ ಮಕ್ಕಳಿಗೆ ಹಂಚಬೇಕಿದ್ದ ಸ್ವೆಟರ್ನಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಂಘಟನೆ ಆರೋಪ ಮಾಡಿದ್ದು ಪ್ರತಿಭಟನೆ ಸಹ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿನ ವಿದ್ಯಾರ್ಥಿಗಳಿಗೆ ಸ್ವೆಟರ್ ಹಂಚುವ ಟೆಂಡರ್ ಅನ್ನು ಕೋಮಲ್ ಪಡೆದಿದ್ದರು. ಆದರೆ ಶಾಲೆಗಳು ಆರಂಭವಿಲ್ಲದ ಈ ಕಾಲದಲ್ಲಿ ಮಕ್ಕಳಿಗೆ ಸ್ವೆಟರ್ ವಿತರಣೆಯೇ ಆಗಿಲ್ಲ. ಹಾಗಿದ್ದಾಗ್ಯೂ ಕೋಮಲ್ ಹೆಸರಿನ ಒಂದು ಕೋಟಿಗೂ ಹೆಚ್ಚು ಮೊತ್ತದ ಬಿಲ್ ನೀಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಸದಸ್ಯರು ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಸ್ವೆಟರ್ಗಳನ್ನು ತೆಗೆದುಕೊಂಡು ಬಂದು ಕಚೇರಿ ಎದುರು ರಾಶಿ ಹಾಕಿ ಹರಾಜು ಕೂಗಿದರು. ಕೋಮಲ್ ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ಘೋಷಣೆಗಳನ್ನು ಕೂಗಿದ ಡಿಎಸ್ಎಸ್ ಸದಸ್ಯರು ಪ್ರಕರಣದ ಬಗ್ಗೆ ಶೀಘ್ರವೇ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ: ಕೋಮಲ್
ಈ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿದ ನಟ ಕೋಮಲ್, ''ಆ ಪ್ರಕರಣಕ್ಕೂ ನನಗೂ ಸಂಭಂಧವೇ ಇಲ್ಲ. ಸ್ವೆಟರ್ ನೀಡುವ ಟೆಂಡರ್ ಅನ್ನು ಯಾವುದೇ ಖಾಸಗಿ ವ್ಯಕ್ತಿಗೆ ಸರ್ಕಾರ ನೀಡುವುದೇ ಇಲ್ಲ. ಬದಲಿಗೆ ಅದನ್ನು ಸರ್ಕಾರದ್ದೇ ಸಂಸ್ಥೆಯಾದ ಕೈಮಗ್ಗ ಇಲಾಖೆಗೆ ನೀಡಲಾಗುತ್ತದೆ. ಅವರೇ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿಗೆ ಸ್ವೆಟರ್ ವಿತರಣೆ ಮಾಡುತ್ತಾರೆ. ಯಾವುದೇ ಖಾಸಗಿ ವ್ಯಕ್ತಿಗೆ ಈ ಟೆಂಡರ್ ದೊರಕುವುದಿಲ್ಲ'' ಎಂದಿದ್ದಾರೆ.

ನನ್ನ ಹೆಸರು, ಅಣ್ಣನ ಹೆಸರು ಎಳೆದು ತರುತ್ತಿದ್ದಾರೆ: ಕೋಮಲ್
''ವಿನಾ ಕಾರಣ ಈ ಪ್ರಕರಣದಲ್ಲಿ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನನ್ನ ಹೆಸರು ಮಾತ್ರವೇ ಅಲ್ಲದೆ ನನ್ನ ಅಣ್ಣನವರ ಹೆಸರು (ಜಗ್ಗೇಶ್) ಕೆಲವು ಅಧಿಕಾರಿಗಳ ಹೆಸರನ್ನು ಎಳೆದು ತರಲಾಗುತ್ತಿದೆ. ಆದರೆ ಈ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ. ನಾನು ಆ ಟೆಂಡರ್ ಪಡೆಯಲು ಯತ್ನಿಸಿಯೂ ಇಲ್ಲ. ಆ ಟೆಂಡರ್ ನನಗೆ ಸಿಕ್ಕೂ ಇಲ್ಲ. ನನ್ನ ಹೆಸರನ್ನು ವಿನಾ ಕಾರಣ ಎಳೆದು ತರುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಯೋಜಿಸಿದ್ದು ಈ ಬಗ್ಗೆ ನಮ್ಮ ವಕೀಲರ ಬಳಿ ಮಾತುಕತೆ ನಡೆಸುತ್ತಿದ್ದೇನೆ' ಎಂದಿದ್ದಾರೆ ಕೋಮಲ್.

ಸ್ವೆಟರ್ಗಳು ಸರಬರಾಜಾಗಿವೆ ಎಂದು ಹೇಳುತ್ತಿದ್ದಾರೆ: ಕೋಮಲ್
''ಬೇಕಾದರೆ ಈ ಬಗ್ಗೆ ತನಿಖೆ ನಡೆಯಲಿ, ನಾನು ತಪ್ಪಿತಸ್ಥನೆಂದು ಗೊತ್ತಾದಲ್ಲಿ ಶಿಕ್ಷೆಗೆ ಗುರಿ ಪಡಿಸಲಿ. ನನಗೂ ಈ ಹಗರಣಕ್ಕೂ ಸಂಬಂಧವೇ ಇಲ್ಲ ಆದರೂ ಸುಖಾ ಸುಮ್ಮನೆ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ಹೋಗಲಿ, ನಾವೇನೂ ಶಿಲಾಯುಗದಲ್ಲಿ ಜೀವನ ಮಾಡುತ್ತಿದ್ದೇವೆಯೇ? ಸ್ವೆಟರ್ ಅನ್ನೇ ನೀಡದೆ ಬಿಲ್ ಹೇಗೆ ನೀಡಲು ಸಾಧ್ಯ? ಸ್ವೆಟರ್ ಅನ್ನೇ ಕೊಡದೆ ಯಾವ ಅಧಿಕಾರಿಯೂ ಬಿಲ್ ಕೊಡುವ ಧೈರ್ಯ ಮಾಡುವುದಿಲ್ಲ. ನನಗೆ ಇರುವ ಸಂಪರ್ಕಗಳಿಗೆ ಕರೆ ಮಾಡಿ ನಾನೂ ಸಹ ಮಾಹಿತಿ ಪಡೆದೆ. ಎಲ್ಲ ಕಡೆಗೆ ಸ್ವೆಟರ್ಗಳು ಸರಬರಾಜು ಆಗಿವೆ ಎಂದೇ ಹೇಳಿದ್ದಾರೆ. ಆದರೆ ನನ್ನ ಹೆಸರು ಸುಖಾ-ಸುಮ್ಮನೆ ಏಕೆ ಬಳಸುತ್ತಿದ್ದಾರೆ ಎಂಬುದು ಅವರಿಗೂ ಆಶ್ಚರ್ಯ ತಂದಿದೆ'' ಎಂದಿದ್ದಾರೆ ನಟ ಕೋಮಲ್.

ಟ್ವೀಟ್ ಮಾಡಿದ್ದ ನಟ ಜಗ್ಗೇಶ್
ಇದೇ ವರ್ಷದ ಏಪ್ರಿಲ್ನಲ್ಲಿ ಕೋಮಲ್ ಕೊರೊನಾಕ್ಕೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿದ್ದರು ಆಗ ಟ್ವೀಟ್ ಮಾಡಿದ್ದ ನಟ ಜಗ್ಗೇಶ್, ''ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಸ್ವಂತ ವ್ಯವಹಾರ ಬೆಂಗಳೂರಿನ ಕಾರ್ಪೊರೇಷನ್ ನಲ್ಲಿ ಶುರುಮಾಡಿ ಯಶಸ್ವಿಯಾದ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಾಕಿ ಬಿಲ್ ಅನ್ನು ಪಡೆಯಲು ಕೆಲ ಲಂಚ ಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಬಿಲ್ ಅನ್ನು ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೋನ ಮಾರಿ ಮೈಸೇರಿ ತುಂಬ ಗಂಭೀರ ಸ್ಥಿತಿ ತಲುಪಿಬಿಟ್ಟಿದ್ದ'' ಎಂದಿದ್ದರು.


Click it and Unblock the Notifications











