ಮೊದಲ ಸಿನಿಮಾ ಮರೆತ ರಶ್ಮಿಕಾ ಮಂದಣ್ಣ: ಪ್ರಮೋದ್ ಶೆಟ್ಟರು ನೀಡಿದರು ಕಾರಣ
ಕನ್ನಡತಿ ನಟಿ ರಶ್ಮಿಕಾ ಮಂದಣ್ಣ, ಕಡಿಮೆ ಸಮಯದಲ್ಲಿಯೇ ಪ್ಯಾನ್ ಇಂಡಿಯಾ ನಟಿಯಾಗಿ ಯಶಸ್ಸು ಗಳಿಸಿದ್ದಾರೆ. ಆದರೆ ತಮಗೆ ನಟಿಯಾಗಿ ಗುರುತು ನೀಡಿದ ಕನ್ನಡ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಅಂತರ ಕಾಯ್ದುಕೊಂಡಿದ್ದಿರಲಿ, ತಾವು ನಟಿಸಿದ ಮೊದಲ ಸಿನಿಮಾ ಬಗ್ಗೆಯೇ ಅಸಡ್ಡೆ ತೋರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಆರೋಪಿಸಿದ್ದಾರೆ. ಅದಕ್ಕೆ ಕಾರಣ ರಶ್ಮಿಕಾರ ಇತ್ತಿಚಿನ ಸಂದರ್ಶನ.
ಸಂದರ್ಶನದಲ್ಲಿ ತಮ್ಮ ಮೊದಲ ಸಿನಿಮಾ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, ನಿರ್ಮಾಣ ಸಂಸ್ಥೆಯ ಹೆಸರನ್ನು ಉದ್ದೇಶಪೂರ್ವಕವಾಗಿ ಹೇಳದೆ ಮರೆ ಮಾಚಿದ್ದಾರೆ. ಅಲ್ಲದೆ, ನಿರ್ಮಾಣ ಸಂಸ್ಥೆಯವರೇ ನನ್ನ ಹಿಂದೆ ಬಿದ್ದು ನಟಿಸಲು ಕೇಳಿಕೊಂಡರು ಎಂದು ಹೇಳಿದ್ದಾರೆ. ರಶ್ಮಿಕಾರ ಈ ಉಡಾಫೆ ಧೋರಣೆಗೆ ನಿರ್ದೇಶಕ ರಿಷಬ್ ಶೆಟ್ಟಿ ಬೇರೊಂದು ಸಂದರ್ಶನದಲ್ಲಿ ಅವರದ್ದೇ ರೀತಿ ಠಕ್ಕರ್ ನೀಡಿದ್ದಾರೆ. ಈ ಚರ್ಚೆ ಹೀಗೆ ಸಾಗುತ್ತಿರುವ ಸಮದಲ್ಲಿಯೇ ಶೆಟ್ಟಿ ಗ್ಯಾಂಗ್ನ ಸದಸ್ಯ, ನಟ ಪ್ರಮೋದ್ ಶೆಟ್ಟಿ, ರಶ್ಮಿಕಾರ ಈ ಉಡಾಫೆ ಆಟಿಟ್ಯೂಡ್ ಬಗ್ಗೆ ಮಾತನಾಡಿದ್ದಾರೆ.

ಎಲ್ಲರಿಗೂ ಅವರದ್ದೇ ಆದ ಮಹತ್ವವಿದೆ: ಪ್ರಮೋದ್ ಶೆಟ್ಟಿ
ರಶ್ಮಿಕಾರ ಬಗ್ಗೆ ಮಾತನಾಡುತ್ತಾ, ''ಎಲ್ಲ ಬೆರಳುಗಳೂ ಒಂದೇ ಸಮ ಇರಲ್ಲ. ಆದರೆ ಪ್ರತಿಯೊಂದು ಬೆರಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಎಲ್ಲ ಬೆರಳು ಸೇರಿಸಿದರಷ್ಟೆ ಮುಷ್ಟಿಯಾಗಲು ಸಾಧ್ಯ. ಅದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಮಹತ್ವವಿರುತ್ತದೆ ಅದನ್ನು ಎಲ್ಲರೂ ಮನಗಾಣಬೇಕು'' ಎಂದಿದ್ದಾರೆ ಪ್ರಮೋದ್ ಶೆಟ್ಟಿ.

ನಾವು ಬಂದ ಹಾದಿ ಮರೆಯಬಾರದು: ಪ್ರಮೋದ್ ಶೆಟ್ಟಿ
ತಮ್ಮ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರನ್ನು ರಶ್ಮಿಕಾ ಹೇಳಲ್ಲಿ ಎಂಬುದಕ್ಕೆ ಪ್ರತಿಯಾಗಿ, ''ನಾನು ಸದಾ ರಂಗಭೂಮಿಯ ಬಗ್ಗೆ ಏಕೆ ಮಾತನಾಡುತ್ತೇನೆ ಎಂದರೆ, ಅದು ನನ್ನನ್ನು ಬೆಳೆಸಿದೆ. ನಾನಿಂದು ಏನಾಗಿದ್ದೇನೋ ಅದಕ್ಕೆ ರಂಗಭೂಮಿಯೇ ಕಾರಣ. ಇಲ್ಲಿ ಕುಳಿತುಕೊಳ್ಳುವ ಯೋಗ್ಯತೆಯನ್ನು ಅದು ದಯಪಾಲಿಸಿದ್ದೇ ರಂಗಭೂಮಿ. ಅದರನ್ನು ಮರೆತರೆ ನನ್ನ ಅಸ್ಥಿತ್ವವೇ ಇಲ್ಲ. ನನಗೆ ಕಲಿಸಿದ ಶಾಲೆ, ಗುರುಗಳು ಇದನ್ನೆಲ್ಲ ಮರೆಯುವಂತಿಲ್ಲ. ಇವತ್ತಿಗೂ ಅದನ್ನು ಬಹಳ ಧೈರ್ಯದಿಂದ, ಹೆಮ್ಮೆಯಿಂದ ನಾನು ಹೇಳಿಕೊಳ್ಳುತ್ತೇನೆ'' ಎಂದಿದ್ದಾರೆ ಪ್ರಮೋದ್ ಶೆಟ್ಟಿ.

'ಹೆಸರು ಹೇಳಿದರೆ ಚಿಕ್ಕವರಾಗ್ತೀವಿ ಎಂಬ ಭಯ ಇರಬೇಕು'
''ಬೇರೆಯವರ ವಿಷಯ (ರಶ್ಮಿಕಾ)ದ ಬಗ್ಗೆ ಹೇಳುವುದಾದರೆ, ಅವರು ಬಂದಿರುವ ದಾರಿ ಬಗ್ಗೆ ಹೇಳಿಕೊಳ್ಳದೇ ಇರುವುದು ಅವರ ಅನಿವಾರ್ಯತೆ ಇರಬಹುದೇನೋ? ಅಥವಾ ಹೆಸರು ಹೇಳಿದರೆ ನಾವು ಚಿಕ್ಕವರಾಗ್ತೀವಿ ಎಂದು ಎನಿಸಿರಬಹುದೇನೋ. ಅದೆಲ್ಲ ಅವರವರ ವ್ಯಕ್ತಿತ್ವಕ್ಕೆ ಬಿಟ್ಟಿದ್ದು. ಅದರ ಬಗ್ಗೆ ನಾವು ಮಾತನಾಡಿ ಸುಮ್ಮನೆ ಅವರನ್ಯಾಕೆ ದೊಡ್ಡವರನ್ನಾಗಿ ಮಾಡಬೇಕು'' ಎಂದಿದ್ದಾರೆ ಪ್ರಮೋದ್ ಶೆಟ್ಟಿ.

'ಈಗ ಹೇಳಿಕೊಳ್ಳಬಹುದೇನೋ ಕನ್ನಡ ಚಿತ್ರರಂಗದವಳು ಎಂದು'
ಮಾತು ಮುಂದುವರೆಸಿ, ''ಅವರ ಬೆಳವಣಿಗೆಯಲ್ಲಿ ಅವರ ಶ್ರಮವೂ ಇದೆ. ಕೇವಲ ಅದೃಷ್ಟದಿಂದ ಹಿಟ್ ಆಗಿಬಿಟ್ಟಳು ಎಂದೆಲ್ಲ ಇಲ್ಲ. ಆದರೆ ಮೊದಲ ಸಿನಿಮಾ, ಬ್ರೇಕ್ ಕೊಟ್ಟ ಸಿನಿಮಾ ಬಗ್ಗೆ ನೆನಪಿರಬೇಕಿತ್ತು. ಸಿನಿಮಾವನ್ನು ಮರೆತಿದ್ದಾರೆ ಎನಿಸಲ್ಲ. ಆದರೆ ಹೇಳಿದರೆ ತಾನು ಚಿಕ್ಕವಳಾಗುವ ಭಯ ಅವರಿಗಿರಬೇಕು. ಅದಕ್ಕಾಗಿ ಹೇಳ್ತಿಲ್ಲ. ಇವತ್ತು ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಇಡೀ ಪ್ರಪಂಚವೇ ಮಾತನಾಡುತ್ತಿದೆ. ಈಗ ಹೇಳಿಕೊಳ್ಳಬಹುದೇನೋ ನಾನು ಕನ್ನಡದಲ್ಲಿ ಮೊದಲ ಸಿನಿಮಾ ಮಾಡಿದ್ದೀನಿ ಎಂದು'' ಎಂದಿದ್ದಾರೆ ಪ್ರಮೋದ್ ಶೆಟ್ಟಿ.


Click it and Unblock the Notifications











