ಕೊಡಗಿನ ಕಣ್ಣೀರಿಗೆ ಕರವಸ್ತ್ರ ಆದ ಸಂಚಾರಿ ವಿಜಯ್ ಮತ್ತು ತಂಡ
ದರ್ಶನ್, ಸುದೀಪ್, ಯಶ್, ಗಣೇಶ್, ಶಿವಣ್ಣ, ಸಂಯುಕ್ತಾ ಹೊರನಾಡು, ಜಗ್ಗೇಶ್, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವರು ತಮ್ಮ ಕೈಲಾದ ಸಹಾಯವನ್ನ ಕೊಡಗಿನ ಜನತೆ ಮಾಡಿದ್ದಾರೆ. ಟ್ರಕ್, ಲಾರಿ, ವಾಹನಗಳ ಮೂಲಕ ಅಗತ್ಯ ವಸ್ತುಗಳನ್ನ ತಮ್ಮ ಅಭಿಮಾನಿಗಳ ಮೂಲಕ ಪೂರೈಸಿದ್ದಾರೆ.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು, ಕಳೆದ ಮೂರ್ನಾಲ್ಕು ದಿನದಿಂದ ಕೊಡಗಿನಲ್ಲೇ ಉಳಿದುಕೊಂಡು, ಕೊಡಗಿನ ಜನರ ಜೊತೆ ನಿಂತು ನೆರವಾಗುತ್ತಿದ್ದಾರೆ.

ಸಂಚಾರಿ ವಿಜಯ್, ಪತ್ರಕರ್ತ ಚಂದ್ರಚೂಡ್, ನಟ ಒರಟ ಪ್ರಶಾಂತ್, ಸಹ ನಿರ್ದೇಶಕ ಗೋರವಿ ಆಲ್ದೂರು ಸೇರಿದಂತೆ ಒಂದು ತಂಡವನ್ನ ಕಟ್ಟಿಕೊಂಡು ಕೊಡಗಿಗೆ ಹೋಗಿರುವ ಸಂಚಾರಿ ವಿಜಯ್ ಅವರು, ತಮ್ಮ ಕೈಲಾದ ಅಗತ್ಯ ವಸ್ತುಗಳನ್ನ ಸಂತ್ರಸ್ಥರಿಗೆ ತಲುಪಿಸಿದ್ದಾರೆ. ಅಷ್ಟೇ ಅಲ್ಲದೇ ಫೇಸ್ ಬುಕ್ ಲೈವ್ ನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿ, ಅವರಿಂದ ಕೂಡ ಕೆಲವು ಔಷಧಿ ಹಾಗೂ ಅಗತ್ಯ ವಸ್ತುಗಳನ್ನ ಪಡೆದು, ನಿರಾಶ್ರಿತರಿಗೆ ತಲುಪಿಸು ಕೆಲಸ ಮಾಡಿದ್ದಾರೆ.
ಸಾಮಾನ್ಯವಾಗಿ, ಸಿನಿಮಾ ನಟ-ನಟಿಯರು ಇಂತಹ ಸಮಯದಲ್ಲಿ ಹಣ ರೂಪದಲ್ಲಿ ಅಥವಾ ಅಗತ್ಯ ವಸ್ತುಗಳನ್ನ ಪೂರೈಸಿ ಸುಮ್ಮನಾಗ್ತಾರೆ. ಆದ್ರೆ, ಸಂಚಾರಿ ವಿಜಯ್ ಅವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ಯಾರಿಗೆ ಅಗತ್ಯ ವಸ್ತುಗಳು ಸಿಕ್ಕಿಲ್ವೋ ಅಂತವರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಸಾಮಾನ್ಯವಾಗಿ ನಿರಾಶ್ರಿತ ಕೇಂದ್ರ, ಗಂಜಿಕೇಂದ್ರಗಳಿಗೆ ಅಗತ್ಯ ವಸ್ತುಗಳು ಸಾಗುತ್ತಿದೆ. ಆದ್ರೆ, ದಿನಗೂಲಿ ಕಾರ್ಮಿಕರು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಜನರಿಗೆ ಅದು ಸರಿಯಾಗಿ ಸಿಗುತ್ತಿಲ್ಲ. ಇಂತಹ ಪ್ರದೇಶಗಳನ್ನ ಗುರುತಿಸಿ ಅವರಿಗೆ ಸಹಾಯ ಮಾಡುತ್ತಿದೆ ಸಂಚಾರಿ ವಿಜಯ್ ಮತ್ತು ತಂಡ.
ಸಿನಿಮಾ ನಟರು ಅಂದ್ರೆ ಕೇವಲ ತೆರೆಮೇಲೆ ಹೀರೋಯಿಸಂ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡು ಹೋಗುವುದು ಮಾತ್ರವಲ್ಲ, ಇಂತಹ ಕಷ್ಟದ ಸಮಯದಲ್ಲಿ ಜನರ ಜೊತೆ ಬೆರೆತು, ಜನರಲ್ಲಿ ತಾನು ಕೂಡ ಒಬ್ಬ ಆಗುವುದು ಎಲ್ಲದಕ್ಕಿಂತ ಮಿಗಿಲಾದ ಖುಷಿ. ಇಂತಹ ಕೆಲಸಕ್ಕೆ ಕೈಹಾಕಿರುವ ಸಂಚಾರಿ ವಿಜಯ್ ಮತ್ತು ತಂಡಕ್ಕೆ ಹ್ಯಾಟ್ಸಾಪ್.


Click it and Unblock the Notifications











