ಪುನೀತ್ ನಮನ: ಅಪ್ಪು ಇಷ್ಟದ ಹಾಡು ಹಾಡಿ, ಕಣ್ಣೀರಿಟ್ಟ ಶಿವಣ್ಣ!
ಪುನೀತ್ ನಮನ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗಿ ಆಗಿದ್ದರು. ಎಲ್ಲರೂ ಅಪ್ಪು ಕುರಿತಾಗಿ ಮಾತಾಡಿದರು. ಅಪ್ಪು ನಮ್ಮ ಜೊತೆಗೇನೆ ಇದ್ದಾನೆ ಎನ್ನುವುದನ್ನು ಪ್ರತಿಯೊಬ್ಬರೂ ಹೇಳಿದ್ದಾರೆ. ಯಾರು ಹೇಳಿದರು ಇದು ಕುಟುಂಬಕ್ಕೆ ಕೊನೆತನಕ ಜೊತೆಗೆ ಇರುವ ನೋವು.
ಈ ನೋವನ್ನು ನುಂಗಿ ಕೊಂಡು ಅಪ್ಪುಗಾಗಿ ಮಾಡುತ್ತಿರುವ ಕಾರ್ಯಕ್ರಮದಲ್ಲಿ ಇಡೀ ಕುಟುಂಬ ಭಾಗಿ ಆಗಿದೆ. ಪುನೀತ್ ನಮನ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿ ಆಗಿ ಕಾರ್ಯಕ್ರಮದ ಆರಂಭದಲ್ಲೇ ಎಲ್ಲರ ಕಣ್ಣಂಚಿನಲ್ಲಿ ನೀರು ತುಂಬಿತ್ತು.
ಸಹನಾ ಮೂರ್ತಿಯಂತೆ ಕಾಣುವ ಶಿವರಾಜ್ ಕುಮಾರ್ ಮನಸ್ಸಿಲ್ಲಿ ಅಪ್ಪು ಅಗಾಧ ನೋವು ತುಂಬಿ ಹೋಗಿದ್ದಾರೆ. ಆ ನೋವು ಏನು ಎನ್ನುವುದು ಅವರಿಗಷ್ಟೇ ಗೊತ್ತು.

ನಮ್ಮದೇ ದೃಷ್ಟಿ ಆಯಿತೆನೋ ನನ್ನ ತಮ್ಮನಿಗೆ: ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಕಾರ್ಯಕ್ರಮಕ್ಕೆ ಸಹಜವಾಗೇ ಬಂದರೂ, ಮುಂದಿನ ಸೀಟಿನಲ್ಲಿ ಕಣ್ಣೀರು ಒರೆಸುತ್ತಾ ಕೂತು ಬಿಟ್ಟಿದ್ದರು. ಇನ್ನೂ ಅಪ್ಪು ಬಗ್ಗೆ ಮಾತನಾಡುತ್ತಾ ಅಳು ತಡೆಯಲು ಅವರಿಗೆ ಸಾಧ್ಯವಾಗಲೇ ಇಲ್ಲ.
"ಎಲ್ಲರಿಗೂ ನಮಸ್ಕಾರ ಮಾತನಾಡಲು ತುಂಬಾ ಕಷ್ಟ ಆಗುತ್ತೆ. ಎಲ್ಲರೂ ಅವನ ಬಗ್ಗೆ ಮಾತನಾಡಿದ್ದಾರೆ. ರಾಘು ಅವನ ಬಗ್ಗೆ ದೊಡ್ಡ ದೊಡ್ಡ ಮಾತು ಆಡಿದ. ನಮಗೆ ನಾಚಿಕೆ ಆಗುತ್ತೆ ಅವನ ಬಗ್ಗೆ ಮಾತನಾಡೋಕೆ. ಅವನ ಬಗ್ಗೆ ಮಾತಾಡಿ, ಮಾತಾಡಿ.. ಹೆಚ್ಚು ಮಾತಾಡಿ ನಮ್ಮ ದೃಷ್ಟಿನೇ ಅವನಿಗೆ ಆಗಿ ಹೋಯಿತು ಎನಿಸುತ್ತಿದೆ. ಯಾವ ಸಂದರ್ಶನ ಆದರು, ವೇದಿಕೆ ಆದರೂ ನಾನು ಅವನನ್ನು ಹೊಗಳುತ್ತಿದೆ. ಏನು ನಿಮ್ಮ ತಮ್ಮನನ್ನು ಅಷ್ಟು ಹೊಗಳುತ್ತೀರಿ ಎಂದು ಎಲ್ಲರೂ ಕೇಳುತ್ತಿದ್ದರು". ಅವನ ಬಗ್ಗೆ ಅಷ್ಟು ಮಾತನಾಡುತ್ತಿದೆ.

ಶಿವಣ್ಣನಿಗೆ ಪುನೀತ್ ರಾಜ್ಕುಮಾರ್ ಅವರೇ ಸ್ಪೂರ್ತಿ!
"ನಾನು ಚಿತ್ರರಂಗಕ್ಕೆ ಬರಲು ನನಗೆ ಅವನೇ ಸ್ಪೂರ್ತಿ. ನನಗೆ ಅಭಿನಯಿಸಲು ಆಸಕ್ತಿ ಇರಲಿಲ್ಲ. ಅವನಿಂದ ಆಸಕ್ತಿ ಹುಟ್ಟಿತು. ಅವನು ಮಾಡಿ ಬಿಟ್ಟಿದ್ದನ್ನು ನಾವು ಮಾಡಿದ್ದೇವೆ. ನಾನು ಚಿತ್ರರಂಗಕ್ಕೆ ಬರುವಷ್ಟರಲ್ಲಿ ಅವನು ಸಾಕಷ್ಟು ಮಾಡಿದ್ದ".
"ಮದುವೆಯಾದ ಮೇಲೆ ದೂರ, ದೂರ ವಾಸ ಇದ್ದೆವು. ಆದರೆ ಯಾವಾಗಲೂ ನನ್ನ ಜೊತೆಗೆ ಮಾತು ಆಡುತ್ತಿದ್ದ. ಯಾವಾಗಲೂ ಶಿವಣ್ಣ, ಶಿವಣ್ಣ ಅಂತಿದ್ದ. ಏನೇ ಆದರು ಕೂಡ ಕಾಲ್ ಮಾಡಿ ಹೇಳುತ್ತಿದ್ದ. ಒಂದು ಕಾರ್ ತೆಗೆದುಕೊಂಡರು ನೀನು ತಗೋ ಅಂತಿದ್ದ. ಪ್ರತಿಯೊಂದು ಹೇಳುತ್ತಿದ್ದ. ಇಷ್ಟೊಂದು ಸಾಮಾಜಿಕ ಕಾರ್ಯ ಮಾಡಿದ್ದಾನೆ. ಅವನಿಗೆ ಈ ದೊಡ್ಡ ಬುದ್ಧಿ ಎಲ್ಲಿಂದ ಬಂತೋ ಗೊತ್ತಿಲ್ಲ".

ರಾಯಲ್ ಆಗಿ ಹುಟ್ಟು ರಾಯಲ್ ಆಗಿ ಹೋದ: ಶಿವರಾಜ್ಕುಮಾರ್
"ಈಗ ಹೇಳಬೇಕು ನನ್ನ ತಮ್ಮ ರಾಯಲ್ ಆಗಿ ಹುಟ್ಟಿದ, ರಾಯಲ್ ಆಗಿಯೇ ಹೋದ. ಅವನು ಮಾಡಬೇಕಾದದ್ದು ಇನ್ನೂ ಸಾಕಷ್ಟು ಇತ್ತು. ಆದರೆ ಒಳ್ಳೆ ಅವರನ್ನು ಇರುವುದಕ್ಕೆ ಬಿಡುವುದಿಲ್ಲ ಅನಿಸುತ್ತೆ ಆ ದೇವರು. ಅದಿಕ್ಕೆ ಆದಷ್ಟು ಬೇಗ ಅವನ ಬಳಿಗೆ ಕರೆದುಕೊಂಡು ಹೋಗಿದ್ದಾನೆ.
ನಾವು ಮಾಡಬೇಕಾಗಿರುವುದು ಇಷ್ಟೇ. ಅಪ್ಪು ನಮ್ಮಲ್ಲಿ ಇದ್ದಾನೆ. ಅವನನ್ನು ಜೀವಂತವಾಗಿ ಇಡಲು ನಾವು ಪ್ರಯತ್ನ ಪಡಬೇಕು. ಬೇರೆ ಯಾವುದನ್ನು ನಂಬುವುದಿಲ್ಲ ನಾನು. ಅವನಿಗೆ ದೀಪ ಹಚ್ಚೋದಿಲ್ಲ. ಅಪ್ಪಾಜಿ ಅಮ್ಮನಿಗೆ ದೀಪ ಹಚ್ಚಲು ಇಷ್ಟ ಪಡುವುದಿಲ್ಲ. ಹಾಗಿದ್ದಾಗ ಅಪ್ಪುಗೆ ಮಾಡೋಕೆ ಇಷ್ಟ ಪಡೋದಿಲ್ಲ.

ಅಪ್ಪುಗೆ ಇಷ್ಟು ಬೇಗ ಹೋಗುವ ಟೈಂ ಬಂತು ಅನ್ನೋದೆ ನೋವು: ಶಿವರಾಜ್ಕುಮಾರ್
ಇವತ್ತು ಅವನಿದ್ದು ನಾನು ರಾಘು ಅತ್ತಿದ್ದು ನೋಡಿ ಅವನು ಎಷ್ಟು ಸಂಕಟ ಪಡುತ್ತಿದ್ದನೋ ಏನೋ. ನಮ್ಮ ಸಂಕಟ ನೋಡಲಾರದೇ ಅಪ್ಪ, ಅಮ್ಮ, ಅಪ್ಪು ಹೋಗಿದ್ದಾರೆ ಎನಿಸುತ್ತದೆ. ಎಲ್ಲರಿಗೂ ಹೋಗುವ ಟೈಂ ಬರುತ್ತೆ. ಆದರೆ ಇವನಿಗೆ ಇಷ್ಟು ಬೇಗ ಬಂತು ಅನ್ನೋದೆ ಒಂದು ನೋವು ಅಷ್ಟೇ".
"ನಾವು ಇಷ್ಟು ದುಃಖ ಸಹಿಸಿ ಕೊಳ್ಳೋಕೆ ನಿಮ್ಮ ಸಹಕಾರಕಾರಣ. ಚಿತ್ರರಂಗ ನಮ್ಮ ಜೊತೆ ನಿಂತಿರುವುದನ್ನ ನಾವು ಯಾವತ್ತೂ ಮರೆಯುವುದಿಲ್ಲ. ಧ್ರುವ, ಸುದೀಪ್, ಯಶ್, ದರ್ಶನ್, ಗಣೇಶ್, ವಿಜಯ್ ಇವರಲ್ಲಿ ನನ್ನ ತಮ್ಮನನ್ನು ನೋಡುತ್ತೇನೆ. ಇನ್ನು ವಿಶಾಲ್ ಅವರನ್ನು ನೋಡಿದಾಗ ಅಪ್ಪು ನೋಡಿದ ಹಾಗೆ ಆಗುತ್ತದೆ". ಎನ್ನುವ ಭಾವುಕ ನುಡಿಗಳನ್ನು ಆಡುತ್ತಾ. ಅಪ್ಪು ಸಲುವಾಗಿ ಅಪ್ಪು ಇಷ್ಟದ ಹಾಡು 'ಮೈ ಶಾಯರ್ ತೋ ನಹೀ' ಹಾಡಿ ಶಿವರಾಜ್ಕುಮಾರ್ ಮಾತು ಮುಗಿಸಿದರು.


Click it and Unblock the Notifications











