ಪ್ರಧಾನಿ ಮೋದಿಯ ಬಗ್ಗೆ ಶಿವರಾಜ್ ಕುಮಾರ್ ಹೇಳಿದ್ದೇನು?
ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶಕ್ಕೆ ಒಳ್ಳೆಯದಾಗುತ್ತೆ ಎನ್ನುವ ಭರವಸೆ ಮತ್ತು ನಂಬಿಕೆಯಲ್ಲಿ ಜನರಿದ್ದಾರೆ. ಅವರಲ್ಲಿ ನಾನೂ ಒಬ್ಬ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಮೋದಿ ಪ್ರಧಾನಿಯಾದ ನಂತರ ಅವರ ಕಾರ್ಯವೈಖರಿ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ನಮ್ಮ ದೇಶಕ್ಕೆ ಮೋದಿಯವರಿಂದಾಗಿ ಒಳ್ಳೆಯ ದಿನಗಳು ಬರಲಿದೆ ಎಂದು ಶಿವರಾಜ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿ ಪಕ್ಷಪಾತವಿಲ್ಲದ ನಿಲುವನ್ನು ತಾಳಿದ್ದಾರೆ.

ದೇಶದ ಮತದಾರರು ಮೋದಿಯವರನ್ನು ಆರಿಸಿದ್ದಾರೆ. ಮೋದಿ ತಮ್ಮ ವೈಯಕ್ತಿಕ ಪ್ರತಿಷ್ಠೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ದೇಶದ ಬಗ್ಗೆ ಯೋಚಿಸುತ್ತಾರೆ ಎನ್ನುವ ನಂಬಿಕೆ ನಮ್ಮಲ್ಲಿದೆ. ದೇಶವನ್ನು ಸ್ವಚ್ಚಗೊಳಿಸುವ ಸಮಯ ಈಗ ಬಂದಿದೆ ಎಂದು ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ರಾಜಕಾರಣಿಗಳಿಗೆ ಶಿವರಾಜ್ ಕುಮಾರ್ ಕಿವಿಮಾತು)
ಪತ್ನಿ ಗೀತಾ ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಶಿವಣ್ಣ ತಾನು ಯಾವ ಪಕ್ಷದ ಪರವಾಗಿಯೂ ಇಲ್ಲವೆಂದು ಚುನಾವಣೆಯ ಸಂದರ್ಭದಲ್ಲಿ ಪದೇಪದೇ ಹೇಳುತ್ತಿದ್ದರು. ನಾನು ನನ್ನ ಪತ್ನಿಗೆ ಮತನೀಡಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ, ಯಾವ ಪಕ್ಷದ ಪರವಾಗಿಯೂ ಮತ ಕೇಳುತ್ತಿಲ್ಲ ಎಂದು ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದ್ದರು.
ಅಲ್ಲದೇ, ಪ್ರಚಾರದ ಸಂದರ್ಭದಲ್ಲಿ ಯಡಿಯೂರಪ್ಪ ಅಥವಾ ಮೋದಿಯ ಬಗ್ಗೆ ಟೀಕೆ ಮಾಡುವ ಗೋಜಿಗೆ ಶಿವಣ್ಣ ಹೋಗಿರಲಿಲ್ಲ. (ಜೋಗಿ ಸ್ಟೈಲಿನಲ್ಲಿ ಮತ ಕೇಳೋಕೆ ಸಂಸತ್ತು ಥಿಯೇಟ್ರಾ)
ನನ್ನ ಪತ್ನಿ ಕಣಕ್ಕಿಳಿದಿರುವುದರಿಂದ ಗಂಡನಾಗಿ ನಾನು ಮತಯಾಚಿಸಬೇಕಾಗಿದೆ. ಹಾಡುವುದು, ಕುಣಿಯುವುದು ಕಲಾವಿದನಾದ ನನ್ನ ಧರ್ಮ. ಅದನ್ನು ನಾನು ಮಾಡುತ್ತಿದ್ದೇನೆ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಹೇಳಿಕೆಗೆ ಶಿವಣ್ಣ ಪ್ರತಿಕ್ರಿಯಿಸಿದ್ದರು.
'ಜೋಗಿ ಸ್ಟೈಲಿನಲ್ಲಿ ಮತ ಕೇಳೋಕೆ ಸಂಸತ್ತು ಏನು ಥಿಯೇಟ್ರಾ' ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
(ಕೃಪೆ: ಟೈಮ್ಸ್ ಆಫ್ ಇಂಡಿಯಾ)


Click it and Unblock the Notifications











