'ಗಾಜನೂರು ಗಂಡು' ಶಿವಣ್ಣನಿಗೆ ಸುವರ್ಣ ಸಂಭ್ರಮ
ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುವ ಕ್ಷಣಗಳು ಮತ್ತೊಮ್ಮೆ ಸಮೀಪಿಸಿವೆ. ಈಗಾಗಲೆ ಅಭಿಮಾನಿಗಳಿಂದ 'ಸೆಂಚುರಿ ಸ್ಟಾರ್' ಬಿರುದನ್ನು ಸ್ವೀಕರಿಸಿ ಬೀಗುತ್ತಿರುವ 'ಗಾಜನೂರು ಗಂಡು' ಬಾಳದೋಣಿಯಲ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಹ್ಯಾಪಿ ಬರ್ತ್ ಡೇ ಶಿವಣ್ಣ.
ಜುಲೈ 12, 2012ಕ್ಕೆ 'ಯುವರಾಜ' ಶಿವರಾಜ್ ಕುಮಾರ್ ಐವತ್ತಕ್ಕೆ ಅಡಿಯಿಡುತ್ತಿದ್ದಾರೆ. ಈ ಸುವರ್ಣ ಸಂಭ್ರಮಕ್ಕೆ ಅಭಿಮಾನಿಗಳು ಪ್ರೀತಿಯ ಅಭಿಮಾನದಲ್ಲಿ ಮಿಂದೇಳಲು ಸಿದ್ಧವಾಗಿದ್ದಾರೆ. ಬುಧವಾರ (ಜು.12) ಮಧ್ಯರಾತ್ರಿಯಿಂದಲೇ ಶಿವಣ್ಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಲಿದೆ.
ಬುಧವಾರ ಮಧ್ಯರಾತ್ರಿ 12 ಗಂಟೆ ಸರಿಯುತ್ತಿದ್ದಂತೆ ಅಭಿಮಾನಿಗಳು ಶಿವಣ್ಣನ ನಾಗವಾರ ನಿವಾಸದ ಮುಂದೆ ಸರಪಟಾಕಿ ಸಿಡಿಸಿ ಬರ್ತ್ ಡೇ ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. ಆದರೆ ಶಿವಣ್ಣ ಬೆಂಗಳೂರಿನಲ್ಲಿ ಇಲ್ಲದಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕೊಂಚ ನಿರಾಸೆಮೂಡಿಸಲಿದೆ.ಬುಧವಾರ (ಜು.12) ಬೆಳಗ್ಗೆ ಕುಟುಂಬ ಸಮೇತ ಶಿವಣ್ಣ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಮೂಲಕ ತಮ್ಮ ಬರ್ತ್ ಡೇ ಸಡಗರಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿವರ್ಷ ನೆಚ್ಚಿನ ನಾಯಕನ ಹುಟ್ಟುಹಬ್ಬದ ಆಚರಣೆಯ ನೆನಪಿಗಾಗಿ ದೀನ ದಲಿತರಿಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡು ಬರುತ್ತಿದ್ದಾರೆ. ಈ ಬಾರಿಯ ಫಲಾನುಭವಿಗಳು ಎಚ್ಐವಿ ಸೋಂಕಿತ ಮಕ್ಕಳು.
ಈ ಬಾರಿ 'ಶಿವು ಅಡ್ಡ' ಅಭಿಮಾನಿಗಳ ಸಂಘ ಎಚ್ಐವಿ ಸೋಂಕಿತ ಮಕ್ಕಳಿಗೆ ಸಹಾಯಹಸ್ತ ಚಾಚಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಈ ಬಾರಿ ಶಿವಣ್ಣ ಹುಟ್ಟುಹಬ್ಬದ ನಿಮಿತ್ತ ಉದಾರ ಧನಸಹಾಯ ಮಾಡಲಿದ್ದಾರೆ.
ಹುಟ್ಟುಹಬ್ಬ ನಿಮಿತ್ತ ಜುಲೈ 25ರಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೈದರಾಬಾದ್ ಹಾಗೂ ಉತ್ತರ ಕರ್ನಾಟಕದ ಕನ್ನಡ ಮಾಧ್ಯಮ ಶಾಲೆಗಳ ಮೂಲಸೌಲಭ್ಯಗಳ ಅಭಿವೃದ್ಧಿಗೆ ಶಿವರಾಜ್ ಕುಮಾರ್ ರು.1 ಲಕ್ಷ ಧನ ಸಹಾಯ ಮಾಡುವ ಯೋಜನೆಯೂ ಇದೆ. ಕನ್ನಡ ಮಾಧ್ಯಮ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಜುಲೈ 26ರಂದು ಶಿವಣ್ಣನ ಹೊಸ ಚಿತ್ರ 'ಕಡ್ಡಿಪುಡಿ' ಸೆಟ್ಟೇರಲಿದೆ. ಸ್ವಯಂವರ ಚಂದ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳಲಿದ್ದಾರೆ. ರಾಧಿಕಾ ಪಂಡಿತ್ ಚಿತ್ರದ ನಾಯಕಿ. ಜುಲೈ 27ರ ವರಮಹಾಲಕ್ಷ್ಮಿ ಹಬ್ಬದಂದು 'ಶಿವ' ಚಿತ್ರ ತೆರೆಕಾಣುತ್ತಿದೆ. ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












