ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಮುಖಾಮುಖಿ
ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಸುರೇಶ್ ಹೆಬ್ಳೀಕರ್. ಅವರ 'ಕಾಡಿನ ಬೆಂಕಿ' ಚಿತ್ರ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತು. ಈ ಚಿತ್ರ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಪಡೆಯಿತು. ಪ್ರಥಮ ಉಷಾಕಿರಣ ಚಿತ್ರವೂ ಫಿಲಂ ಫೇರ್ ಪ್ರಶಸ್ತಿಗೆ ಭಾಜನವಾಗಿದೆ.
ಇಷ್ಟೆಲ್ಲಾ ಉಪಕಥೆಗೆ ಕಾರಣ ಈ ಬಾರಿಯ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಸುರೇಶ್ ಹೆಬ್ಳೀಕರ್ ಅವರು ಮುಖಾಮುಖಿಯಾಗುತ್ತಿದ್ದಾರೆ. ಬಾದಾಮಿ ಹೌಸ್ ನ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಅಕ್ಟೋಬರ್ 26ರಂದು ಸಂಜೆ 5.30ಕ್ಕೆ ಸುರೇಶ್ ಹೆಬ್ಳೀಕರ್ ತಮ್ಮ ಹೆಜ್ಜೆ ಗುರುತುಗಳನ್ನು ನೆನಪಿಸಿಕೊಳ್ಳಲಿದ್ದಾರೆ.

ಸುರೇಶ್ ನಂತರ ನಿರ್ಮಾಣ, ನಿರ್ದೇಶನಕ್ಕೆ ಕೈಹಾಕಿದರೂ ಅವರು ನಟನೆಯನ್ನು ಕೈಬಿಡಲಿಲ್ಲ. ಅಮರ ಮಧುರ ಪ್ರೇಮ, ಹಾವು ಏಣಿ ಆಟ, ಬಣ್ಣದ ಗೆಜ್ಜೆ, ಕಂಕಣ, ಗೋಲಿಬಾರ್, ಆಗಂತುಕ, ತಾಯಿ ಸಾಹೇಬ ಹೀಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಅವರ ನಿರ್ದೇಶನದ ಅಂತರಾಳ ಚಿತ್ರ ಪ್ರೇಕ್ಷಕರ ಗಮನ ಸೆಳೆಯಿತು. ಚಿತ್ರರಂಗದ ಬಹುತೇಕ ಎಲ್ಲಾ ವಿಭಾಗಗಳಲ್ಲೂ ಪರಿಣಿತಿ ಪಡೆದಿರುವ ಸುರೇಶ್ ಹೆಬ್ಳೀಕರ್ ನಟನೆ ಜೊತೆಗೆ ಗಾಯಕ, ಕಂಠದಾನ ಕಲಾವಿದರೂ ಹೌದು.
ಅಂತರಾಳ, ಪ್ರಥಮ ಉಷಾಕಿರಣ, ಕಾಡಿನ ಬೆಂಕಿ ಮೊದಲಾದ ಚಿತ್ರಗಳಿಗೆ ನಿರ್ದೇಶನ ನೀಡಿರುವ ಸುರೇಶ್ ಜನಪ್ರಿಯ, ಕಲಾತ್ಮಕ ಹಾಗೂ ಮನೋ ವಿಶ್ಲೇಷಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುರೇಶ್ ಚಿತ್ರಕತೆಗಳಲ್ಲಿ ಮನೋವಿಕಾರ ಸಮಸ್ಯೆಗಳು ಮತ್ತು ವೈಜ್ಞಾನಿಕ ಮನೋಭಾವ ಎದ್ದು ಕಾಣುತ್ತಿದ್ದು ಅದಕ್ಕೆ ಮನೋವಿಶ್ಲೇಷಕರೂ ನಿರ್ಮಾಪಕರೂ ಆದ ಡಾ. ಅಶೋಕ್ ಪೈ ಅವರೊಂದಿಗಿನ ಒಡನಾಡವೇ ಕಾರಣ ಎಂದು ಹೆಬ್ಳಿಕರ್ ವಿನಯದಿಂದ ಹೇಳುತ್ತಾರೆ.
ಪರಿಸರವಾದಿಯಾಗಿ ನಾಡಿನಾದ್ಯಂತ ಶ್ರಮಿಸಿರುವ ಸುರೇಶ್ ಹೆಬ್ಳೀಕರ್ ಅವರ ನಿರ್ದೇಶನದ ಪ್ರಥಮ ಉಷಾಕಿರಣ ಚಿತ್ರವು ರಜ್ಯ ಸರ್ಕಾರದ ತೃತೀಯ ಅತ್ಯುತ್ತಮ ಪ್ರಶಸ್ತಿ ಗಳಿಸಿದೆ. ಕಾಡಿನ ಬೆಂಕಿ ಚಿತ್ರಕ್ಕೂ ಹಲವು ಪ್ರಶಸ್ತಿಗಳು ಸಂದಿವೆ. ಕಿರುಚಿತ್ರಗಳಲ್ಲೂ ನಿಪುಣರಾದ ಸುರೇಶ್ ಹೆಬ್ಳೀಕರ್ ಅವರೊಂದಿಗೆ ಈ ಮಾಹೆಯ ಬೆಳ್ಳಿ ಹೆಜ್ಜೆ ಯಲ್ಲಿ ಮುಖಾಮುಖಿ. (ಒನ್ಇಂಡಿಯಾ ಕನ್ನಡ)


Click it and Unblock the Notifications











