ಹೆಸರು ಬದಲಾಯಿಸಿಕೊಂಡ ವಿಜಯ ರಾಘವೇಂದ್ರ
ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ವಿಜಯ ರಾಘವೇಂದ್ರ ಈಗ ಟ್ರ್ಯಾಕ್ ಗೆ ಮರಳಿದ್ದಾರೆ. ಈ ಬಾರಿ ಅವರು ಭರ್ಜರಿ ತಯಾರಿ ಮಾಡಿಕೊಂಡೇ ಮರಳಿರುವುದು ವಿಶೇಷ. ಇದರ ಜೊತೆಗೆ ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ.
ವಿಜಯ ರಾಘವೇಂದ್ರ ಅವರನ್ನು ಎಲ್ಲರೂ ಗುರುತಿಸುತ್ತಿದ್ದದ್ದು 'ಚಿನ್ನಾರಿ ಮುತ್ತ' ಪಾತ್ರದಿಂದ. ಹಾಗಾಗಿ ಅವರು ತಮ್ಮ ಹೆಸರನ್ನು ಚಿನ್ನಾರಿ ಮುತ್ತ ವಿಜಯ್ ಎಂದು ಬದಲಾಯಿಸಿಕೊಂಡಿದ್ದಾರೆ. ಹೆಸರಿನ ಬದಲಾವಣೆ ಜೊತೆಗೆ ಚಿತ್ರವನ್ನೂ ಕೈಗೆತ್ತಿಕೊಂಡಿದ್ದಾರೆ.
ಚಿತ್ರದ ಹೆಸರು 'ಕಿಸ್ಮತ್'. ಈ ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ಆಕ್ಷನ್ ಕಟ್ ಸಹ ಹೇಳುತ್ತಿರುವುದು ವಿಶೇಷ. ಈ ಮೂಲಕ ನಿರ್ದೇಶಕನ ಸ್ಥಾನ ಅಲಂಕರಿಸುತ್ತಿದ್ದಾರೆ. ಸ್ಪಂದನಸೃಷ್ಠಿ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಿರ್ಮಾಪಕರು ವಿಜಯರಾಘವೇಂದ್ರ ಅವರೇ.ನವೆಂಬರ್ ತಿಂಗಳ ಹದಿನೈದರಿಂದ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ರಾಜೇಶ್ ಮುರುಗೇಶನ್ ಸಂಗೀತ ನಿರ್ದೇಶನದ 'ಕಿಸ್ಮತ್'ಗೆ ರಾಜೇಶ್ ಯಾದವ್ ಅವರ ಛಾಯಾಗ್ರಹನವಿದೆ. ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಹರ್ಷ ನೃತ್ಯ ನಿರ್ದೇಶನ, ಮೋಹನ್ ಪಂಡಿತ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದಾರೆ.
ಆನಂದಪ್ರಿಯ ಗೀತರಚನೆ ಮಾಡಿದ್ದಾರೆ. ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ಅತಿಥಿ ಪಾತ್ರದಲ್ಲಿ ಸಾಯಿಕುಮಾರ್ ಅಭಿನಯಿಸುತ್ತಿದ್ದಾರೆ. ದಿಲೀಪ್ ರಾಜ್, ನಂದ, ತಬಲನಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹೆಸರಿನ ಜೊತೆಗೆ ವಿಜಯ್ 'ಕಿಸ್ಮತ್' ಬದಲಾಗುತ್ತದೋ ಏನೋ ನೋಡಬೇಕು. (ಒನ್ಇಂಡಿಯಾ ಕನ್ನಡ)


Click it and Unblock the Notifications












