ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ
ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರು ಕೊನೆಗೂ ಎಂಗೇಜ್ ಆಗಿದ್ದಾರೆ. ಅಂತೂ-ಇಂತೂ ಇಷ್ಟು ದಿನ ಗಾಂಧಿನಗರದ ಮಂದಿಗಿದ್ದ ಅನುಮಾನಗಳಿಗೆ ಶಾಶ್ವತವಾಗಿ ತೆರೆ ಬಿದ್ದಿದೆ.
ರಾಧಿಕಾ ಪಂಡಿತ್ ಅವರ ತಾಯಿ ಮಂಗಳಾ ಅವರ ತವರೂರಾದ ಗೋವಾದಲ್ಲಿ, ವರಲಕ್ಷ್ಮಿ ಹಬ್ಬದಂದು ಈ ನಿಶ್ಚಿತಾರ್ಥ ನೆರವೇರಿದ್ದು, ಅದ್ಧೂರಿ ಸಮಾರಂಭವನ್ನು ಗೋವಾದ ತಾಜ್ ವಿವಾಂತ್ ಹಾಲಿಡೇ ವಿಲೇಜ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂಭ್ರಮದ ಸಮಾರಂಭಕ್ಕೆ ಯಶ್-ರಾಧಿಕಾ ಪಂಡಿತ್ ಅವರ ಆಪ್ತರು, ಕುಟುಂಬಸ್ಥರು ಹಾಗೂ ಕನ್ನಡ ಚಿತ್ರರಂಗದ ದಿಗ್ಗಜರು ಮಾತ್ರ ಆಗಮಿಸಿದ್ದಾರೆ. ಮಿಕ್ಕಂತೆ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಹಾಗೂ ಮಾಧ್ಯಮಕ್ಕೆ ಪ್ರವೇಶ ದೊರೆತಿಲ್ಲ.[ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಕೋಟಿ ವೆಚ್ಚದಲ್ಲಿ ರೆಡಿಯಾದ ವೇದಿಕೆ]
ಕ್ಯೂಟ್ ಕಪಲ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಯಶ್ ಅವರು 'ನಂದಗೋಕುಲ' ಧಾರಾವಾಹಿ ಕಾಲದಿಂದ ಪರಿಚಯವಾಗಿ, ಒಳ್ಳೆ ಸ್ನೇಹವನ್ನು ಇಟ್ಟುಕೊಂಡಿದ್ದರು. ಆ ನಂತರ 'ಮೊಗ್ಗಿನ ಮನಸು' ಚಿತ್ರದಲ್ಲಿ ಒಂದಾದ ಜೋಡಿ, ಇದೀಗ ಲೈಫ್ ಲಾಂಗ್ ಒಂದಾಗಿ ಹೆಜ್ಜೆ ಹಾಕಲಿದ್ದಾರೆ.
ತಾರೆಯರ ರಾಯಲ್ ನಿಶ್ಚಿತಾರ್ಥದ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ.....

ಸಂಪ್ರದಾಯಬದ್ಧವಾಗಿ ನೆರವೇರಿದ ನಿಶ್ಚಿತಾರ್ಥ
ಪಕ್ಕಾ ಒಕ್ಕಲಿಗ ಸಂಪ್ರದಾಯದಲ್ಲಿ ಯಶ್-ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಡೆಯಿತು. ಸರಿಯಾಗಿ 11.10ಕ್ಕೆ ಯಶ್ ಅವರು ರಾಧಿಕಾ ಅವರ ಕೈಗೆ ವಜ್ರದ ಉಂಗುರ ತೊಡಿಸಿದ್ದಾರೆ. ಕುಟುಂಬ ವರ್ಗ, ಆಪ್ತರು ಹಾಗೂ ಸ್ಯಾಂಡಲ್ ವುಡ್ ದಿಗ್ಗಜರ ಸಮ್ಮುಖದಲ್ಲಿ ತಾರಾ ಜೋಡಿ ಪರಸ್ಪರ ಹಾರ ಬದಲಾಯಿಸಿಕೊಂಡು, ಬೆಲೆಬಾಳುವ ವಜ್ರದ ಉಂಗುರ ತೊಡಿಸಿದರು.[ಟ್ವೀಟ್ಸ್ : ಯಶ್ -ರಾಧಿಕಾ ರಾಕಿಂಗ್ ಜೋಡಿ ನೂರ್ಕಾಲ ಬಾಳಿ]

ಹಬ್ಬದ ದಿನ ಎಂಗೇಜ್ ಆದ ತಾರಾ ಜೋಡಿ
ವರಮಹಾಲಕ್ಷ್ಮಿ ಹಬ್ಬದ ಪವಿತ್ರ ದಿನವಾದ ಇಂದು ಯಶ್ ಮತ್ತು ರಾಧಿಕಾ ಪಂಡಿತ್ ಪರಸ್ಪರ ಉಂಗುರ ಬದಲಾಯಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ವರಲಕ್ಷ್ಮಿ ಪೂಜೆ ನೆರವೇರಿಸಿದ ಯಶ್ ಮತ್ತು ರಾಧಿಕಾ ನಂತರ ನಿಶ್ಚಿತಾರ್ಥದ ಕ್ರಮಗಳನ್ನು ನೆರವೇರಿಸಿದರು.

ಗೌನ್ ನಲ್ಲಿ ರಾಧಿಕಾ-ಶೆರ್ವಾಣಿಯಲ್ಲಿ ಯಶ್
ಕಡು ನೀಲಿ ಬಣ್ಣದ ಶೆರ್ವಾಣಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಮಿಂಚಿದರೆ, ಕಡು ನೀಲಿ ಬಣ್ಣದ ಜೊತೆಗೆ ಬಿಳಿ ಚುಕ್ಕೆ ಇರುವ ಚೆಂದದ ಗೌನ್ ನಲ್ಲಿ ರಾಧಿಕಾ ಅವರು ಕಂಗೊಳಿಸುತ್ತಿದ್ದರು. ಯಶ್ ಅವರ ಶೆರ್ವಾಣಿಯನ್ನು ಬೆಂಗಳೂರಿನಲ್ಲಿ ಡಿಸೈನ್ ಮಾಡಲಾಗಿದೆ. ಹಾಗೆ ರಾಧಿಕಾ ಅವರ ಗೌನ್ ಅನ್ನು ಇಮ್ರಾನ್ ಸರ್ದಾರಿಯಾ ಅವರ ಪತ್ನಿ ಸಾನಿಯಾ ಸರ್ದಾರಿಯಾ ಅವರು ಡಿಸೈನ್ ಮಾಡಿದ್ದಾರೆ.

ತಾರಾ ನಿಶ್ಚಿತಾರ್ಥಕ್ಕೆ ಮಳೆಯ ಸಿಂಚನ
ಸಮುದ್ರದ ಕಿನಾರೆಯ ಬಳಿ ಹಾಕಿದ ಬಿಳಿ ಬಣ್ಣದ ಅದ್ಧೂರಿ ಸೆಟ್ ನಲ್ಲಿ ಜರುಗಿದ ಯಶ್-ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥಕ್ಕೆ ವರುಣ್ ಕೂಡ ಆಗಮಿಸಿ, ಶುಭಲಗ್ನಕ್ಕೆ ಮಳೆಯ ಸಿಂಚನಗೈದಿದ್ದಾನೆ. ಜಿಟಿಜಿಟಿ ಮಳೆಯ ನಡುವೆ ರಾಧಿಕಾ ಅವರು ಗೌನ್ ಅನ್ನು ಎತ್ತಿಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ, ನಿಶ್ಚಿತಾರ್ಥದ ಮಂಟಪಕ್ಕೆ ಆಗಮಿಸಿದರು. ಯಶ್ ಅವರು ತಮ್ಮ ತಂದೆ-ತಾಯಿ ಹಾಗೂ ಕುಟುಂಬದ ಜೊತೆ ಮಂಟಪಕ್ಕೆ ಆಗಮಿಸಿದರು.

ನವ ವಧುವಿನಂತೆ ಸಿಂಗಾರಗೊಂಡ ತಾಜ್ ವಿವಾಂತ್
ಇಡೀ ನಿಶ್ಚಿತಾರ್ಥದ ಮಂಟಪ ಬಿಳಿ ಬಣ್ಣದಿಂದ ಕಂಗೊಳಿಸುತ್ತಿದ್ದು, ನವ ವಧುವಿನಂತೆ ಸಿಂಗಾರಗೊಂಡಿತ್ತು. ಒಟ್ನಲ್ಲಿ ಒಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ರಾಧಿಕಾ ಅವರು ದೇವತೆಯಂತೆ ಅದ್ಭುತವಾಗಿ ಕಂಗೊಳಿಸುತ್ತಿದ್ದರು. ಪುರೋಹಿತ ರವಿಶಂಕರ್ ಅವರು ನಿಶ್ಚಿತಾರ್ಥ ಕ್ರಮಗಳನ್ನು ನೆರವೇರಿಸಿದರು.

ಕೆ.ಮಂಜು ಹೇಳಿಕೆ
ಅಂದಹಾಗೆ ಈ ನಡುವೆ ನಿರ್ಮಾಪಕ ಕೆ.ಮಂಜು ಅವರು ಮಾಧ್ಯಮದ ಜೊತೆ ಮಾತಿಗೆ ಸಿಕ್ಕಿದ್ದರು. ಅವರು ಹೇಳುವ ಪ್ರಕಾರ ಇನ್ನೇನು ಎರಡು ದಿನದಲ್ಲಿ ಯಶ್ ಮತ್ತು ರಾಧಿಕಾ ಅವರು ಬೆಂಗಳೂರಿಗೆ ವಾಪಸಾಗಿ, ಈ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಗಳನ್ನು ಮಾಧ್ಯಮದವರಿಗೆ ನೀಡಲಿದ್ದಾರಂತೆ.

ಊಟದ ವ್ಯವಸ್ಥೆ
ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯಾತೀ ಗಣ್ಯರಿಗೆ ಭೂರಿ ಭೋಜನ ತಯಾರು ಮಾಡಲಾಗಿದೆ. ಸುಮಾರು 28 ಬಗೆಯ ಖಾದ್ಯಗಳು ಊಟದ ಮೆನುವಿನಲ್ಲಿದೆ. 8 ಬಗೆಯ ಸ್ವೀಟ್ಸ್, ಪಾಯಸ ಹಾಗೂ ಬೆಂಗಳೂರು ಶೈಲಿಯ ಬಜ್ಜಿ ಬೋಂಡಾ ಕೂಡ ಇದೆ. ಪಕ್ಕಾ ಕರ್ನಾಟಕ ಮತ್ತು ಆಂಧ್ರದ ಶೈಲಿಯಲ್ಲಿ ಭೋಜನ ತಯಾರಾಗಿದೆ.

ಎಷ್ಟು ಜನ ಆಗಮಿಸಿದ್ದರು
ರಾಧಿಕಾ ಪಂಡಿತ್ ಮತ್ತು ಯಶ್ ಅವರ ಸಂಸ್ಕೃತಿ ಸಂಪ್ರದಾಯದ ಅನುಸಾರವಾಗಿ ಗೋವಾದಲ್ಲಿ ನಿಶ್ಚಿತಾರ್ಥ ನೆರವೇರಿಸಲಾಗಿದೆ. ಸುಮಾರು 250 ಜನ ಮಾತ್ರ ಇರುವ ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ, ಆಪ್ತರು, ಕುಟುಂಬಸ್ಥರು ಮತ್ತು ಕನ್ನಡ ಚಿತ್ರರಂಗದ ದಿಗ್ಗಜರು ಮಾತ್ರ ಭಾಗವಹಿಸಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ದಂಪತಿ, ರೆಬೆಲ್ ಸ್ಟಾರ್ ಅಂಬರೀಶ್ ದಂಪತಿ, ಮಾಳವಿಕಾ, ಹರ್ಷ, ಅರುಣ್ ಸಾಗರ್, ಪಾನಿಪೂರಿ ಕಿಟ್ಟಿ, ಯೋಗರಾಜ್ ಭಟ್, ಸಾಧುಕೋಕಿಲಾ, ಪುನೀತ್ ರಾಜ್ ಕುಮಾರ್, ಚಿಕ್ಕಣ್ಣ, ಇಮ್ರಾನ್ ಸರ್ದಾರಿಯಾ ದಂಪತಿ, ನಿರ್ದೇಶಕ ಶಶಾಂಕ್, ಪ್ರೀತಂ ಗುಬ್ಬಿ, ಸೇರಿದಂತೆ ಹಲವು ತಾರೆಯರು ಈ ಸಂಭ್ರಮದ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.

ಆಶೀರ್ವದಿಸಿದ ಅಂಬರೀಶ್
ನೂತನ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರು ರೆಬೆಲ್ ಸ್ಟಾರ್ ಅಂಬರೀಶ್ ದಂಪತಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಸಂಭ್ರಮದ ಕಾರ್ಯಕ್ರಮಕ್ಕೆ ಎಲ್ಲರೂ ವಿಶೇಷ ಹೂ ಗುಚ್ಛ ಹಿಡಿದು, ಬಂದು ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.

ಭುವನ್ ಗೌಡ ಕ್ಯಾಮೆರಾ ಕೈ ಚಳಕ
ಯಶ್ ಮತ್ತು ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋಗ್ರಫಿ ಸೇರಿದಂತೆ ವಿಡಿಯೋಗ್ರಫಿ ಇತ್ಯಾದಿ ಎಲ್ಲಾ ಜವಾಬ್ದಾರಿಯನ್ನು ಕ್ಯಾಮೆರಾ ಮೆನ್ ಭುವನ್ ಗೌಡ ಅವರು ವಹಿಸಿಕೊಂಡಿದ್ದಾರೆ.

ಯಾವಾಗ ವಾಪಸಾಗುತ್ತಾರೆ
ಮಾಹಿತಿಗಳ ಪ್ರಕಾರ ಯಶ್ ಮತ್ತು ರಾಧಿಕಾ ಪಂಡಿತ್ ಅವರು ನಾಳೆ ಕಡಲನಗರಿ ಗೋವಾ ಬಿಡಲಿದ್ದಾರೆ. ಇವತ್ತು ಸಂಜೆ ತನಕ ಕೂಡ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ವೇಳೆಗೆ ಗಣ್ಯರಿಗೆ ಕಾಕ್ ಟೇಲ್ ಪಾರ್ಟಿ, ಹಾಗೂ ಸಖತ್ ಡ್ಯಾನ್ಸ್ ನೆರವೇರಲಿದೆ. ಇನ್ನುಳಿದಂತೆ ಸ್ಯಾಂಡಲ್ ವುಡ್ ನ ಕೆಲವು ಮಂದಿ ಇಂದು ಸಂಜೆ ಗೋವಾ ಬಿಡುವ ಸೂಚನೆ ಸಿಕ್ಕಿದೆ.

ಯಶ್ ತಾಯಿ ಏನಂತಾರೆ.?
ಈ ನಡುವೆ ಮಾತಿಗೆ ಸಿಕ್ಕಿದ ಯಶ್ ಅವರ ತಾಯಿ, "ಇವತ್ತಿನಿಂದ ರಾಧಿಕಾ ಪಂಡಿತ್ ನಮ್ಮ ಮನೆ ಸೊಸೆ, ನಮ್ಮ ಮನೆ ಹುಡುಗಿ, ಇಷ್ಟು ದಿನ ನಮಗೆ ಹೇಳೋ ಹಕ್ಕು ಇರಲಿಲ್ಲ. ಆದ್ರೆ ಇವತ್ತಿನಿಂದ ಹೇಳಬಹುದು. ಹಿರಿಯರು ಎಲ್ಲ ಸೇರಿ ನಿಶ್ಚಯ ಮಾಡಿದ್ದಾರೆ". ಎಂದು ರಾಧಿಕಾ ಪಂಡಿತ್ ಬಗ್ಗೆ ಖುಷಿ-ಖುಷಿಯಾಗಿ ಮಾತನಾಡಿದ್ದಾರೆ.

ಅಭಿಮಾನಿಗಳು ಕ್ಷಮಿಸಬೇಕು
"ಯಶ್ ಅವರನ್ನು ಅಭಿಮಾನಿಗಳಾದ ನೀವು ಕ್ಷಮಿಸಬೇಕು. ಅವರು ನಿಮ್ಮೆಲ್ಲರ ಸಮ್ಮುಖದಲ್ಲೇ ಮದುವೆ ಆಗುತ್ತಾರೆ. ಆದರೆ ನಿಶ್ಚಿತಾರ್ಥ ದೊಡ್ಡವರ ಇಚ್ಛೆಯಂತೆ ನೆರವೇರಿದ್ದರಿಂದ ನಿಮ್ಮನ್ನು ಬಿಟ್ಟು ಮಾಡುತ್ತಿದ್ದೇವೆ' ಎಂದು ಯಶ್ ಅವರ ತಾಯಿ ಕಳಕಳಿ ವ್ಯಕ್ತಪಡಿಸಿದರು


Click it and Unblock the Notifications











