ಹೋರಾಡಲೇಬೇಕಿದೆ: ರಮ್ಯಾ ಟ್ವೀಟ್ನಲ್ಲಿ ಸಮಂತಾ, ಸಾಯಿ ಪಲ್ಲವಿ, ರಶ್ಮಿಕಾ, ದೀಪಿಕಾ
ಪ್ರಸ್ತುತ ಸಾಮಾಜಿಕ ವಿಷಯಗಳ ಬಗ್ಗೆ ನಿರ್ಭಿಡೆಯಿಂದ ಬಹಿರಂಗವಾಗಿ ಅಭಿಪ್ರಾಯ ಹಂಚಿಕೊಳ್ಳುವ ಚಿತ್ರರಂಗದ ಮಂದಿಯ ಸಂಖ್ಯೆ ಬಹಳ ವಿರಳ. ಅದರಲ್ಲಿಯೂ ನಟಿಯರು ಸಾಮಾಜಿಕ ಜಾಲತಾಣಗಳನ್ನು ತಮ್ಮ ಸೆಲ್ಫಿಗಳು, ಸಿನಿಮಾ ಪ್ರಮೋಶನ್ಗಳಿಗಾಗಿ ಬಿಟ್ಟರೆ ಸಾಮಾಜಿಕ ವಿಷಯಗಳ ಬಗ್ಗೆ ಸಂದೇಶ ಹಂಚಿಕೊಳ್ಳಲು ಬಳಸುವುದು ಬಹಳ ವಿರಳ.
ಆದರೆ ಕನ್ನಡದ ನಟಿ ರಮ್ಯಾ ಹಾಗಲ್ಲ. ರಾಜಕೀಯದ ನಂಟೂ ಹೊಂದಿರುವ ರಮ್ಯಾ, ಇದೀಗ ರಾಜಕೀಯದಿಂದ ದೂರಾಗಿ, ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಆದರೂ ಸಾಮಾಜಿಕ ವಿಷಯಗಳ ಬಗ್ಗೆ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ನಟಿ ದೀಪಿಕಾ ಪಡುಕೋಣೆ 'ಪಠಾಣ್' ಸಿನಿಮಾದ ಹಾಡೊಂದರಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದನ್ನು ಬಿಜೆಪಿಯ ಬೆಂಬಲಿಗರು, ಹಿಂದುಪರ ಸಂಘಟನೆಗಳು ವಿರೋಧಿಸಿವೆ. 'ಪಠಾಣ್' ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿರುವುದರ ಜೊತೆಗೆ ದೀಪಿಕಾ ಪಡುಕೋಣೆ ವಿರುದ್ಧವೂ ವಾಗ್ದಾಳಿ ನಡೆಸಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ದೀಪಿಕಾ ಪಡುಕೋಣೆ ಸೇರಿದಂತೆ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕಾಗಿ ಟೀಕೆಗೆ ಒಳಗಾದ ಎಲ್ಲ ನಟಿಯರ ಪರವಾಗಿ ಮಾತನಾಡಿದ್ದಾರೆ.

ಆಗ ಸಮಂತಾ, ಈಗ ದೀಪಿಕಾ!
ಟ್ವೀಟ್ ಮಾಡಿರುವ ನಟಿ ರಮ್ಯಾ, ''ವಿಚ್ಛೇದನ ಪಡೆದಿದ್ದಾಗಿ ಸಮಂತಾರನ್ನು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕಾಗಿ ಸಾಯಿ ಪಲ್ಲವಿಯನ್ನು, ವ್ಯಕ್ತಿಯೊಬ್ಬರಿಂದ ದೂರಾಗಿದ್ದಕ್ಕಾಗಿ ರಶ್ಮಿಕಾರನ್ನು, ತೊಟ್ಟ ಬಟ್ಟೆಗಾಗಿ ದೀಪಿಕಾ ಪಡುಕೋಣೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಇವರು ಮಾತ್ರವೇ ಅಲ್ಲದೆ ಇತರ ಅನೇಕ ಮಹಿಳೆಯರು ಅವರು ಮಾಡುವ ಹಲವು ವಿಷಯಕ್ಕಾಗಿ ದಿನವೂ ಟೀಕೆಗೆ ಒಳಗಾಗುತ್ತಲೇ ಇದ್ದಾರೆ. ಆಯ್ಕೆಯ ಸ್ವಾತಂತ್ರ್ಯ ಎಂಬುದು ಎಲ್ಲರ ಮೂಲಭೂತ ಹಕ್ಕು. ಮಹಿಳೆಯರು ತಾಯಿ ದುರ್ಗೆಯ ಸ್ವರೂಪ. ಈ ಸ್ತ್ರೀದ್ವೇಷದ ವಿರುದ್ಧ ನಾವು ಹೋರಾಡಲೇ ಬೇಕಿದೆ'' ಎಂದಿದ್ದಾರೆ.

ರಮ್ಯಾ ಸಹ ಟ್ರೋಲ್ಗೆ ಒಳಗಾಗಿದ್ದರು
ರಮ್ಯಾರ ಈ ಟ್ವೀಟ್ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮಂತಾ, ಸಾಯಿ ಪಲ್ಲವಿ, ದೀಪಿಕಾ, ರಶ್ಮಿಕಾರ ಹೆಸರನ್ನು ಉಲ್ಲೇಖಿಸಿದ್ದಾದೆ ಆದರೆ ಸ್ವತಃ ರಮ್ಯಾ ಸಹ ಈ ರೀತಿಯ ಟೀಕೆಗಳನ್ನು ಹಲವು ಸಂದರ್ಭಗಳಲ್ಲಿ ಎದುರಿಸಿದ್ದಾರೆ. ರಾಜಕೀಯ ಸೇರಿದಾಗಲಂತೂ ಸತತ ಟ್ರೋಲ್ಗೆ ರಮ್ಯಾ ಗುರಿಯಾಗಿದ್ದರು. ಆದರೆ ರಮ್ಯಾ ಈಗ ಮೊದಲಿಗಿಂತಲೂ ಗಟ್ಟಿಯಾಗಿಯೂ, ಪ್ರಬುದ್ಧ ಮಹಿಳೆಯಾಗಿಯೂ ರೂಪುಗೊಂಡಿದ್ದಾರೆ.

ನಟಿಯರ ವಿರುದ್ಧ ವಿಪರೀತ ಟ್ರೋಲಿಂಗ್
ನಟಿಯರನ್ನು ವಿವಿಧ ಕಾರಣಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವುದು, ನಿಂದಿಸುವುದು, ಜಡ್ಜ್ಮೆಂಟಲ್ ಆಗಿ ಮಾತನಾಡುವುದು ತೀರ ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲಿಯೂ ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಂಡಾಗ, ವೈಯಕ್ತಿಕ ಜೀವನದಲ್ಲಿ ಸ್ವತಂತ್ರ್ಯವಾಗಿ ಬೋಲ್ಡ್ ಆದ ನಿರ್ಣಯಗಳನ್ನು ತೆಗೆದುಕೊಂಡಾಗಲಂತೂ ಟ್ರೋಲಿಂಗ್ ಇನ್ನಷ್ಟು ಹೆಚ್ಚಾಗುತ್ತದೆ.

ಚಿತ್ರರಂಗದಲ್ಲಿ ರಮ್ಯಾ ಮತ್ತೆ ಸಕ್ರಿಯ
ಇನ್ನು ನಟಿ ರಮ್ಯಾ ಹಲವು ವರ್ಷಗಳ ಬಿಡುವಿನ ಬಳಿಕ ಚಿತ್ರರಂಗಕ್ಕೆ ಮರಳಿದ್ದಾರೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾವನ್ನು ರಮ್ಯಾ ಸಹ ನಿರ್ಮಾಣ ಮಾಡಿದ್ದಾರೆ. ಅದರ ಜೊತೆಗೆ ನಟನೆಗೂ ರಮ್ಯಾ ಮರಳಿದ್ದು, ಡಾಲಿ ಧನಂಜಯ್ ಜೊತೆ 'ಉತ್ತರಕಾಂಡ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಹಾಸ್ಟೆಲ್ ಹುಡುಗರು' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಹ ರಮ್ಯಾ ನಟಿಸಿದ್ದಾರೆ. ಭವಿಷ್ಯದಲ್ಲಿ ಚಿತ್ರರಂಗದಲ್ಲಿಯೇ ಸಕ್ರಿಯರಾಗುವುದಾಗಿಯೂ ರಮ್ಯಾ ಹೇಳಿದ್ದಾರೆ.


Click it and Unblock the Notifications











